ನವದೆಹಲಿ: ಇತ್ತೀಚೆಗೆ ಪುನಾರಚನೆಯಾದ ಪ್ರಧಾನಿ ನರೇಂದ್ರ ಮೋದಿಯವರ ಕೇಂದ್ರ ಸಚಿವ ಸಂಪುಟದ ೭೮ ಮಂತ್ರಿಗಳಲ್ಲಿ ಕನಿಷ್ಠ ಶೇ.೪೨ ಸಚಿವರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ ಹಾಗೂ ಈ ಪೈಕಿ ಶೇ.೯೦ ರಷ್ಟು ಮಂದಿ ಕೋಟ್ಯಾಧೀಶರು ಇದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಮತದಾನ ಹಕ್ಕುಗಳ ಗುಂಪು ಪ್ರಕಟಿಸಿದ ಹೊಸ ವರದಿಯಲ್ಲಿ ತಿಳಿಸಲಾಗಿದೆ.
ಈ ಮಂತ್ರಿಗಳ ಪೈಕಿ ನಾಲ್ಕು ಜನರ ಮೇಲೆ ಕೊಲೆ ಯತ್ನಗಳಿಗೆ ಸಂಬಂಧಿಸಿದ ಪ್ರಕರಣಗಳಿವೆ ಎಂದು ವರದಿ ಉಲ್ಲೇಖ ಮಾಡಿದೆ. ಸಂಪುಟಕ್ಕೆ ಹೊಸದಾಗಿ ಸೇರ್ಪಡೆಗೊಂಡ ಶಾಸಕರಿಗೆ ಪ್ರಧಾನಿ ನರೇಂದ್ರ ಮೋದಿ ಖಾತೆ ಹಂಚಿಕೆ ಮಾಡಿದ್ದಾರೆ. ಒಟ್ಟು ೧೫ ಮಂತ್ರಿಗಳನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ. ೨೮ ಸಂಸದರಿಗೆ ಕೇಂದ್ರ ರಾಜ್ಯ ಸಚಿವ ಸ್ಥಾನ ನೀಡಲಾಗಿದೆ. ಇದರೊಂದಿಗೆ ಪ್ರಧಾನ ಮಂತ್ರಿಗಳ ಪರಿಷತ್ತಿನ ಒಟ್ಟು ಸದಸ್ಯರ ಸಂಖ್ಯೆ ಈಗ ೭೮ಕ್ಕೇರಿದೆ.
ಎಡಿಆರ್ ಒಂದು ಮತದಾನದ ಹಕ್ಕುಗಳ ಗುಂಪಾಗಿದ್ದು, ಚುನಾವಣೆಗಳ ಮುಂಚೆ ರಾಜಕಾರಣಿಗಳ ಅಪರಾಧ, ಆರ್ಥಿಕ ಮತ್ತು ಇತರ ಹಿನ್ನೆಲೆ ವಿವರಗಳನ್ನು ಕಂಡುಹಿಡಿಯಲು ಅಫಿಡವಿಟ್ ಗಳನ್ನು ಒಟ್ಟುಗೂಡಿಸುತ್ತದೆ. ಸಂಪುಟ ವಿಸ್ತರಣೆಯ ನಂತರ ೧೭ನೇ ಲೋಕಸಭೆಯಲ್ಲಿರುವ ಕೇಂದ್ರ ಸಚಿವರ ಪರಿಷತ್ತಿನ ವಿಶ್ಲೇಷಣೆಯನ್ನು ಎಡಿಆರ್ ನಡೆಸಿದೆ. ಈ ವಿಶ್ಲೇಷಣೆ ಪ್ರಕಾರ, ನೂತನ ಸಂಪುಟದಲ್ಲಿರುವ ೩೩ ಮಂತ್ರಿಗಳ ಮೇಲೆ ಅಂದರೆ ಶೇ.೪೨ರಷ್ಟು ಮಂತ್ರಿಗಳ ಮೇಲೆ ಕ್ರಿಮಿನಲ್ ಕೇಸ್ ಇದೆ. ಇದು ಚುನಾವಣಾ ಅಫಿಡವಿಟ್ ನಲ್ಲಿ ಉಲ್ಲೇಖವಾಗಿದೆ ಎಂದು ಎಡಿಆರ್ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ.
ಈ ಪೈಕಿ, ೨೪ ಮಂತ್ರಿಗಳ (ಒಟ್ಟು ಸದಸ್ಯರ ಸಂಖ್ಯೆಯಲ್ಲಿ ಶೇ.೩೧) ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳಿವೆ. ಈ ಪ್ರಕರಣಗಳಲ್ಲಿ ಕೊಲೆ ಅಥವಾ ಕೊಲೆ ಯತ್ನದ ಪ್ರಕರಣಗಳು ಸೇರಿದೆ.
ಹೊಸ ಕೇಂದ್ರ ಸಚಿವ ಸಂಪುಟದ ೭೦ ಮಂತ್ರಿಗಳು ಅಂದರೆ ಶೇ.೯೦ರಷ್ಟು ಸದಸ್ಯರು ಕೋಟ್ಯಾಧಿಪತಿಗಳು. ಈ ಮಂತ್ರಿಗಳ ಒಟ್ಟು ಆಸ್ತಿಯನ್ನು ೧೦ ಮಿಲಿಯನ್ ಎಂದು ಘೋಷಿಸಿದ್ದಾರೆ ಎಂದು ಎಡಿಆರ್ ವರದಿ ತಿಳಿಸಿದೆ.
ನಾಲ್ಕು ಮಂತ್ರಿಗಳಾದ ಜ್ಯೋತಿರಾದಿತ್ಯ ಸಿಂಧಿಯಾ (೩೭೯ ಕೋಟಿಗೂ ಹೆಚ್ಚು), ಪಿಯೂಷ್ ಗೋಯಲ್ (೯೫ ಕೋಟಿಗೂ ಹೆಚ್ಚು), ನಾರಾಯಣ್ ರಾಣೆ (೮೭ ಕೋಟಿಗೂ ಹೆಚ್ಚು) ಮತ್ತು ರಾಜೀವ್ ಚಂದ್ರಶೇಖರ್ (೬೪ ಕೋಟಿಗೂ ಹೆಚ್ಚು) ರನ್ನು ಅಧಿಕ ಆಸ್ತಿ ಹೊಂದಿರುವ ಮಂತ್ರಿಗಳು ಎಂದು ಗುರುತಿಸಲಾಗಿದೆ. ಪ್ರತಿ ಸಚಿವರಿಗೆ ಸರಾಸರಿ ೧೬.೨೪ ಕೋಟಿ ಆಸ್ತಿ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅತೀ ಕಡಿಮೆ ಆಸ್ತಿ ಹೊಂದಿರುವವರನ್ನು ಸಹ ವರದಿ ಉಲ್ಲೇಖಿಸಿದ್ದು, ಇದರಲ್ಲಿ ತ್ರಿಪುರಾದ ಪ್ರತಿಮಾ ಭೂಮಿಕ್ (೬ ಲಕ್ಷಕ್ಕೂ ಹೆಚ್ಚು), ಪಶ್ಚಿಮ ಬಂಗಾಳದ ಜಾನ್ ಬಾರ್ಲಾ (೧೪ ಲಕ್ಷಕ್ಕೂ ಹೆಚ್ಚು), ರಾಜಸ್ಥಾನದ ಕೈಲಾಶ್ ಚೌಧರಿ (೨೪ ಲಕ್ಷಕ್ಕೂ ಹೆಚ್ಚು), ಒಡಿಶಾದ ಬಿಶ್ವೇಶ್ವರ ಮತ್ತು ಮಹಾರಾಷ್ಟ್ರದ ವಿ. ಮುರಲೀಧರನ್ (೨೭ ಲಕ್ಷಕ್ಕೂ ಹೆಚ್ಚು) ಆಸ್ತಿ ಹೊಂದಿದವರಾಗಿದ್ದಾರೆ ಎಂದು ವರದಿ ತಿಳಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ