ಬದುಕಿನಲ್ಲಿ ಸ್ಪಷ್ಟತೆ ಮುಖ್ಯ, ವಿದ್ಯಾರ್ಥಿಗಳಿಗೆ ಓದಿದ ವಿಷಯಗಳಲ್ಲಿ ಸ್ಪಷ್ಟತೆ ಅಗತ್ಯ:ರಾಘವೇಶ್ವರ ಶ್ರೀಗಳು

ಸಾಹಸ ಸಾಧನೆಯ ಮಾರ್ಗ: ರಾಘವೇಶ್ವರ ಶ್ರೀ
ಗೋಕರ್ಣ: ಸಾಹಸ ಮಾಡದೇ ಸಾಧನೆ ಸಾಧ್ಯವಿಲ್ಲ; ಸಾಹಸ ಮಾಡಿ ಬದುಕಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿ ಹೇಳಿದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠ ವತಿಯಿಂದ ಹಮ್ಮಿಕೊಂಡಿದ್ದ ಜ್ಞಾನ ವಿಜ್ಞಾನ ಚಿಂತನ ಸತ್ರ ಮಾಲಿಕೆಯ ಐದನೇ ವಿಚಾರ ಸಂಕಿರಣ ಮತ್ತು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಉಚಿತ ಸೇತುಬಂಧ ಶಿಕ್ಷಣ ಕಾರ್ಯಕ್ರಮ ಸಮಾರೋಪದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸಾಹಸದಲ್ಲಿ ರಿಸ್ಕ್ ಸಹ ಇರುತ್ತದೆ. ಇಂಥ ರಿಸ್ಕ್ ತೆಗೆದುಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.
ಬದುಕಿನಲ್ಲಿ ಸ್ಪಷ್ಟತೆ ಮುಖ್ಯ. ಅಂತೆಯೇ ವಿದ್ಯಾರ್ಥಿಗಳಿಗೆ ಓದಿದ ವಿಷಯಗಳಲ್ಲಿ ಸ್ಪಷ್ಟತೆ ಅಗತ್ಯ. ಸೇತುಬಂಧ ಉಚಿತ ಶಿಕ್ಷಣದ ಮೂಲಕ ವಿಷ್ಣುಗುಪ್ತ ವಿಶ್ವವಿದ್ಯಾಪೀಠವು ವಿದ್ಯಾರ್ಥಿಗಳಿಗೆ ಈ ಸ್ಪಷ್ಟತೆ ಕಂಡುಕೊಳ್ಳುವ ನಿಟ್ಟಿನಲ್ಲಿ ನೆರವಾಗಿದೆ ಎಂದು ಹೇಳಿದರು.
‘ಸಾಹಸೇ ಶ್ರೀಃ’ ವಿಷಯವಾಗಿ ಮಾತನಾಡಿದ ಖ್ಯಾತ ಉದ್ಯಮಿ ಎಂ.ಎಸ್.ನರಹರಿ, “ಸಾಧಿಸುವ ಛಲ ಇದ್ದರೆ ಬಡತನ ಅಡ್ಡಿಯಾಗುವುದಿಲ್ಲ; ವಾರಾನ್ನ ಉಂಡು, ಪತ್ರಿಕೆಗಳನ್ನು ಹಂಚಿ, ಟ್ಯೂಷನ್ ಹೇಳಿಕೊಡುವ ಮೂಲಕ ಕಲಿಕೆಯ ವೇಳೆಯೇ ಗಳಿಕೆಗೆ ಮುಂದಾದೆ. ಇದು ಶಿಕ್ಷಣದ ಜತೆಗೆ ಜೀವನ ಶಿಕ್ಷಣವನ್ನೂ ಕಲಿಸಿತು. ಹೂ.ವೆ.ಶೇಷಾದ್ರಿ, ಎ.ಕೃಷ್ಣಪ್ಪ ಅವರಂಥವರ ಜತೆ ಬೆಳೆದ ಸಂಸ್ಕಾರ ಜೀವನದಲ್ಲಿ ನೆರವಾಯಿತು. ಹೀಗೆ ಶೈಕ್ಷಣಿಕ ವಿಷಯಗಳ ಜತೆಗೆ ಸಂಸ್ಕಾರ ನಮ್ಮ ಜೀವನದಲ್ಲಿ ನೆರವಿಗೆ ಬರುತ್ತದೆ” ಎಂದು ಜೀವನಾನುಭವ ಹಂಚಿಕೊಂಡರು.
ಹೊಟ್ಟೆಪಾಡಿಗಾಗಿ ಇಡೀ ದಿನ ದುಡಿಯುವ ಜಾಯಮಾನ ಬದಲಾಗಬೇಕು. ಉದ್ಯೋಗಿಗಳು ಉಳಿತಾಯವನ್ನು ಹವ್ಯಾಸವಾಗಿ ಮಾಡಿಕೊಳ್ಳಬೇಕು. ಇಂದು ಕ್ರೆಡಿಟ್‍ಕಾರ್ಡ್, ವೈಯಕ್ತಿಕ ಸಾಲ ಯೋಜನೆಗಳು ನಮ್ಮ ಗಳಿಕೆಯನ್ನು ತಿಂದು ಹಾಕಿ ಬಿಡುತ್ತವೆ. ಉಳಿತಾಯವಿಲ್ಲದೇ ಏನೂ ಸಾಧನೆ ಮಾಡಲು ಸಾಧ್ಯವಿಲ್ಲ. ಗಳಿಕೆಯ ಅರ್ಧದಷ್ಟನ್ನಾದರೂ ಉಳಿತಾಯ ಮಾಡಬೇಕು. ಕಷ್ಟಕಾಲಕ್ಕೆ ಇದು ನೆರವಾಗುತ್ತದೆ ಎಂದು ಕಿವಿಮಾತು ಹೇಳಿದರು.
ವಿಮೆ ನಮ್ಮ ವೈಯಕ್ತಿಕ ಹಾಗೂ ಕುಟುಂಬದ ಜೀವನಕ್ಕೆ ಸುರಕ್ಷೆ ನೀಡುತ್ತದೆ. ಆದ್ದರಿಂದ ಆರೋಗ್ಯ ಹಾಗೂ ಜೀವವಿಮೆ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಿ. ಇದು ನಮಗೆ ಮಾತ್ರವಲ್ಲದೆ ಸಮಾಜದಲ್ಲಿ ಅಕಾಲಿಕ ಸಂಕಷ್ಟಕ್ಕೆ ತುತ್ತಾದವರಿಗೂ ನೆರವಿಗೆ ಬರುತ್ತದೆ. ಅಂತೆಯೇ ಕನಿಷ್ಠ ದುಡಿಮೆಯ ಒಂದು ಪಾಲನ್ನು ಸಮಾಜಕ್ಕಾಗಿ ಮೀಸಲಿಡುವ ಮೂಲಕ ಸಮಾಜದ ಋಣ ತೀರಿಸಬೇಕು. ಪ್ರಚಾರದ ಗೀಳು ಬೆಳೆಸಿಕೊಳ್ಳಬೇಡಿ ಎಂದು ಸಲಹೆ ಮಾಡಿದರು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾ ಪರಿಷತ್ ಅಧ್ಯಕ್ಷ ಎಂ.ಆರ್.ಹೆಗಡೆ, ಉಪಾಧ್ಯಕ್ಷ ಮರುವಳ ನಾರಾಯಣ ಭಟ್, ಸೇತುಬಂಧದ ಸಂಯೋಜಕ ಶ್ರೀಶ ಭಟ್ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾಪರಿಷತ್ ಕಾರ್ಯದರ್ಶಿ ನೀಲಕಂಠ ಯಾಜಿ ಸ್ವಾಗತಿಸಿದರು. ವಿದ್ಯಾ ಜಿ.ಭಟ್ ನಿರೂಪಿಸಿದರು. ವಿದ್ಯಾರ್ಥಿನಿ ಪಲ್ಲವಿ ಪ್ರಾರ್ಥಿಸಿದರು.

ಪ್ರಮುಖ ಸುದ್ದಿ :-   ನಾಮಪತ್ರ ವಾಪಸ್ ಪಡೆದ ದಿಂಗಾಲೇಶ್ವರ ಸ್ವಾಮೀಜಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement