ಬೆಂಗಳೂರು: ರಾಜ್ಯದ ಗಣಿ ಇಲಾಖೆಯಲ್ಲಿ ಬಾಕಿ ಇರುವ ಅಂದಾಜು ೬ ಸಾವಿರ ಅರ್ಜಿಗಳು ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರ ಮಾಡಲು ಗಣಿ ಇಲಾಖೆ ಡಿಜಿಟಲ್ ಮೈನಿಂಗ್ ಅದಾಲತ್ ಜಾರಿಗೆ ತರಲು ಚಿಂತನೆ ನಡೆಸಿದೆ.
ಕಳೆದ ೧೫ ವರ್ಷಗಳಿಂದ ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ಸಂಬಂಧಪಟ್ಟಂತೆ ವಿವಿಧ ಉತ್ಪಾದನಾ ಚಟುವಟಿಕೆಗಳಿಗೆ ಸಂಬಂಧಿಸಿದ ೬ ಸಾವಿರ ಅರ್ಜಿಗಳು ಬಾಕಿ ಉಳಿದಿವೆ. ಇವುಗಳನ್ನು ಇತ್ಯರ್ಥಗೊಳಿಸಲು ಸಿಂಗಲ್ ವಿಂಡೋ ಸಿಸ್ಟಮ್ ಜಾರಿಗೆ ತರಲು ಈಗಾಗಲೇ ನಿರ್ಧರಿಸಲಾಗಿದೆ. ಇದಕ್ಕಾಗಿ ಗಣಿ ಇಲಾಖೆ ಹೊಸ ಡಿಜಿಟಲ್ ಪೋರ್ಟಲ್ ಅನ್ನು ಸಿದ್ಧಪಡಿಸುತ್ತಿದೆ. ಸಣ್ಣ ಗಣಿಗಾರಿಕೆ ನಡೆಸುವವರು ಎದುರಿಸುತ್ತಿರುವ ಸಮಸ್ಯೆಗಳನ್ನು ತ್ವರಿತಗತಿಯಲ್ಲಿ ಪರಿಹಾರ ಕಂಡುಕೊಳ್ಳಲು ಗಣಿ ಹಾಗೂ ಭೂ ವಿಜ್ಞಾನ ಇಲಾಖೆ ಡಿಜಿಟಲ್ ವೇದಿಕೆ ಸಿದ್ಧಪಡಿಸುತ್ತಿದೆ ಎಂದು ವರದಿಯಾಗಿದೆ.
ಅದಾಲತ್ ಮೂಲಕ ಗಣಿ ಪರವಾನಗಿ ಹಾಗೂ ಮತ್ತಿತರ ಬಹುತೇಕ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತದೆ.
ಐದು ಕಂದಾಯ ವಿಭಾಗಗಳಾದ ಬೆಂಗಳೂರು, ಮೈಸೂರು, ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ-ಧಾರವಾಡ ವಿಭಾಗಗಳಲ್ಲಿ ಅದಾಲತ್ ನಡೆಸಲಾಗುವುದು. ಇದರ ಮೂಲಕ ಶೇ.೭೫ರಷ್ಟು ಸಮಸ್ಯೆಗಳನ್ನು ಸ್ಥಳೀಯವಾಗಿ ಇತ್ಯರ್ಥಗೊಳಿಸುವ ನಿರೀಕ್ಷೆ ಇದೆ. ಗಣಿಗಾರಿಕೆಗೆ ಅನುಮತಿ ಪಡೆಯಲು ಬೆಂಗಳೂರಿನವರೆಗೂ ಬರುವ ಅವಶ್ಯಕತೆ ಇರುವುದಿಲ್ಲ.
ಆನ್ ಲೈನ್ ಅದಲಾತ್ ನಡೆಸಿ ಗಣಿ ಪರವಾನಿಗೆ, ವ್ಯಾಜ್ಯಗಳನ್ನು ತ್ವರಿತವಾಗಿ ಇತ್ಯರ್ಥಪಡಿಸಲು ಹಾಗೂ ಸರ್ಕಾರವೇ ಉದ್ದಿಮೆದಾರರ ಮನೆಗೆ ಬರುವ ಸಲುವಾಗಿ ಇಲಾಖೆ ಗಣಿಗೆ ಸಂಬಂಧಪಟ್ಟ ಸಮಸ್ಯೆಗಳನ್ನು ಬಗೆ ಹರಿಸಲು ಇ-ಮೈನಿಂಗ್ ಅದಾಲತ್ ನಡೆಸಲು ನಿರ್ಧರಿಸಿದೆ.
ರಾಜ್ಯದಲ್ಲಿ ಗಣಿಗಾರಿಕೆ ಉದ್ಯಮ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದ್ದು, ರಾಜ್ಯದ ಬೊಕ್ಕಸ ತುಂಬಿಸುವಲ್ಲಿ ಗಣಿಗಾರಿಕೆ ಕ್ಷೇತ್ರದ ಕೊಡುಗೆ ದೊಡ್ಡದಿದೆ. ಗಣಿಗಾರಿಕೆ ಪರವಾನಿಗೆ ಪಡೆಯುವ ಪ್ರಕ್ರಿಯೆಯೂ ಅಷ್ಟೇ ಸಂಕೀರ್ಣತೆಯಿಂದ ಕೂಡಿದೆ. ರಾಜ್ಯವನ್ನು ಗಣಿ ಉದ್ಯಮ ಸ್ನೇಹಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಗಣಿ ನೀತಿಯನ್ನು ರೂಪಿಸುತ್ತಿದೆ. ಈ ಮೂಲಕ ರಾಜ್ಯದಲ್ಲಿ ಗಣಿಗಾರಿಕೆ ವಹಿವಾಟು ಸುಗಮಗೊಳಿಸುವ ಚಿಂತನೆ ಇದೆ. ಈಗಾಗಲೇ ಸಮಿತಿ ಗಣಿ ನೀತಿ ಸಂಬಂಧ ತನ್ನ ವರದಿ ನೀಡಿದ್ದು, ಅಂತಿಮ ಹಂತದಲ್ಲಿದೆ.
ಗಣಿಗಾರಿಕೆಗೆ ಪೂರಕ ವಾತಾವರಣ ಕಲ್ಪಿಸುವ ನೀಡುವ ಸಂಬಂಧ ಇಲಾಖೆ ಗಣಿ ಅದಾಲತ್ ಪ್ರಾರಂಭಿಸಿದೆ. ಆ ಮೂಲಕ ಗಣಿ ಉದ್ಯಮಿಗಳ ಸಮಸ್ಯೆಯನ್ನು ಶೀಘ್ರದಲ್ಲಿ ಪರಿಹರಿಸಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುನ್ನಡಿ ಇಟ್ಟಿರುವ ಗಣಿಗಾರಿಕೆ ಇಲಾಖೆ ಗಣಿ ಅದಾಲತನ್ನು ಡಿಜಿಟಲೀಕರಣ ಮಾಡಲು ನಿರ್ಧರಿಸಿದೆ.
ನಿಮ್ಮ ಕಾಮೆಂಟ್ ಬರೆಯಿರಿ