ಊಟ ಮಾಡಿ ಮಲಗಿದ ಕುಟುಂಬದ ಮೂವರ ಸಾವು, ಇಬ್ಬರ ಸ್ಥಿತಿ ಗಂಭೀರ

ಚಿತ್ರದುರ್ಗ: ಜಿಲ್ಲೆಯ ಭರಮಸಾಗರ ಸಮೀಪದ ಇಸಾಮುದ್ರ ಲಂಬಾಣಿಹಟ್ಟಿಯ ಒಂದೇ ಕುಟುಂಬದ ಮೂವರು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ. ಇದು ಸೋಮವಾರ ತಡರಾತ್ರಿ ನಡೆದಿದೆ ಎನ್ನಲಾಗಿದೆ.
ತಿಪ್ಪನಾಯ್ಕ (45), ಗುಂಡಿಬಾಯಿ (80), ಸುಧಾಬಾಯಿ (40) ಎಂಬವರು ಮೃತಪಟ್ಟವರು. ರಾಹುಲ್ (19) ಮತ್ತು ರಮ್ಯಾ (16) ಗಂಭೀರವಾಗಿದ್ದಾರೆ. ವಿಷಾಹಾರ ಸೇವನೆ ಮಾಡಿರುವ ಅನುಮಾನ ವ್ಯಕ್ತವಾಗಿದೆ.
ಕುಟುಂಬದವರು ಸೋಮವಾರ ರಾತ್ರಿ 10 ಗಂಟೆಗೆ ಊಟ ಮಾಡಿ ಮಲಗಿದ್ದಾರೆ. ರಾತ್ರಿ ಸುಮಾರು 11.30ಕ್ಕೆ ಇವರಿಗೆ ವಾಂತಿ ಶುರುವಾಗಿದೆ. ಮಾಹಿತಿ ತಿಳಿದದ ನೆರೆಹೊರೆಯವರು ತಕ್ಷಣ ಇವರನ್ನು ಭರಮಸಾಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಾರ್ಗ ಮಧ್ಯದಲ್ಲಿ ಗುಂಡಿಬಾಯಿ ಮತ್ತು ಸುಧಾಬಾಯಿ ಮೃತಪಟ್ಟಿದ್ದಾರೆ. ತಿಪ್ಪನಾಯ್ಕ ದಾವಣಗೆರೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಆಕಸ್ಮಿಕ ಸಾವಿಗೆ ಕಾರಣ ಏನೆಂಬುದು ಇನ್ನೂ ಗೊತ್ತಾಗಿಲ್ಲ. ವಿಷಾಹಾರ ಸೇವನೆಯಿಂದ ಹೀಗಾಗಿರಬಹುದು ಎಂದು ಶಂಕಿಸಲಾಗಿದೆ. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿವೈಎಸ್ಪಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement