ಕೊಲೆ ಆರೋಪಿ ಮದುವೆಯಲ್ಲಿ ಪೊಲೀಸರ ಉಪಸ್ಥಿತಿ: ಮೂವರಿಗೆ ಕಡ್ಡಾಯ ರಜೆಯಲ್ಲಿ ತೆರಳಲು ಆದೇಶಿಸಿದ ಎಸ್ಪಿ

ಕೊಪ್ಪಳ:ರಾಜ್ಯದಲ್ಲಿ ಅತಿ ಹೆಚ್ಚು ಸದ್ದು‌ ಮಾಡಿದ್ದ ಕನಕಾಪುರದ ಯಲ್ಲಾಲಿಂಗ ಕೊಲೆ ಪ್ರಕರಣದ ಆರೋಪಿಯ ಮದುವೆಗೆ ಗಂಗಾವತಿಯ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು, ಅಧಿಕಾರಿಗಳು ಮದುವೆಯಲ್ಲಿ ಪೊಲೀಸ್‌ ಡ್ರೆಸ್ ನೊಂದಿಗೆ ಭಾಗಿಯಾಗಿರುವ ಕುರಿತು ಸಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಯಾಗಿತ್ತು. ಮಾಧ್ಯಮಗಳಲ್ಲಿಯೂ ಭಾರೀ ಸುದ್ದಿಯಾಗಿತ್ತು. ಇದು ಪೊಲೀಸ್ ಇಲಾಖೆಗೆ ಮುಜುಗರ ತಂದಿದ್ದರಿಂದ ಮದುವೆಯಲ್ಲಿ ಭಾಗಿಯಾದ ಅಧಿಕಾರಿಗಳನ್ನು ತಕ್ಷಣದಿಂದ ಕಡ್ಡಾಯ ರಜೆ ಮೇಲೆ ತೆರಳುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆದೇಶಿಸಿದ್ದಾರೆ.
ಅಂದು ಕನಕಾಪುರದ ಯಲ್ಲಾಲಿಂಗ ಕೊಲೆ ಪ್ರಕರಣದಲ್ಲಿ ಹುಲಿಹೈದರದ ಮಹಾಂತೇಶ ನಾಯಕ, ಹನುಮೇಶ ನಾಯಕ ಸೇರಿ 9 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಅವರು ಈಗ ಜಾಮೀನಿನ ಮೇಲೆ ಹೊರ ಬಂದಿದ್ದು ಪ್ರಮುಖ ಆರೋಪಿಯ ಮದುವೆಗೆ ಗಂಗಾವತಿಯ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು, ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಧರ್‌ ಈ ಆದೇಶ ಮಾಡಿದ್ದಾರೆ.
ಏನಿದು ಘಟನೆ..: 2015 ಜನವರಿ 11 ರಂದು ಕನಕಗಿರಿ ತಾಲೂಕಿನ ಕನಕಾಪುರದ ಯಲ್ಲಾಲಿಂಗ ಎಂಬ ವಿದ್ಯಾರ್ಥಿ ಯನ್ನು ಕೊಲೆ ಮಾಡಿ ಕೊಪ್ಪಳ ರೈಲು ನಿಲ್ದಾಣದ ಬಳಿಯ ಹಳಿಯ ಮೇಲೆ ಹಾಕಿ ಆತ್ಮಹತ್ಯೆ ಎಂಬಂತೆ ಬಿಂಬಿಸಲಾಗಿತ್ತು, ಆದರೆ ಕುಟುಂಬದವರ ಹಾಗೂ ವಿವಿಧ ಸಂಘಟನೆಗಳ ಮನವಿಯ ಮೇರಿಗೆ ಅಂದಿನ ಪೊಲೀಸರು ತನಿಖೆ ಮಾಡಿದಾಗ ಇದು ಕೊಲೆ ಎಂಬುದು ಬಯಲಾಗಿತ್ತು. ಕೊಲೆಯಲ್ಲಿ ಕಾಂಗ್ರೆಸ್ ಮುಖಂಡ ಹನುಮೇಶ ನಾಯಕ ಪುತ್ರ ಮಹಾಂತೇಶ ನಾಯಕ ಹಾಗೂ ಇತರ 9 ಜನರು ಮಾಡಿದ್ದಾರೆ ಎಂಬ ಆರೋಪದ ಹಿನ್ನಲೆಯಲ್ಲಿ 9 ಜನರನ್ನು ಬಂಧಿಸಲಾಗಿತ್ತು.
ಕನಕಾಪುರದ ಯಲ್ಲಾಲಿಂಗ ತಮ್ಮ ಗ್ರಾಮದ ಸಮಸ್ಯೆ ಕುರಿತು ಸ್ಥಳೀಯ ಚಾನೆಲ್ ಗೆ ಹೇಳಿಕೆ ನೀಡಿದ್ದರು, ಇದರಿಂದ ಕುಪಿತಗೊಂಡ ಮಹಾಂತೇಶ ನಾಯಕ ಹಾಗು ತಂಡ ಯಲ್ಲಾಲಿಂಗ ಕೊಲೆ ಮಾಡಿದ್ದರು, ಅವರು ಜಾಮೀನಿನ ಮೇಲೆ ಹೊರಬಂದ ನಂತರ ಈ ಪ್ರಕರಣದ ಆರೋಪಿಯೊಬ್ಬರ ಮದುವೆಯಲ್ಲಿ ಪೊಲೀಸರು ಭಾಗಿಯಾಗಿದ್ದರು. ಆರೋಪಿ ಸುಮಾರು 2 ವರ್ಷ ವಿಚಾರಣಾಧಿನ ಕೈದಿಗಳಾಗಿದ್ದವರು ಇತ್ತೀಚಿಗೆ ಜಾಮೀನನ ಮೇಲೆ ಬಿಡುಗಡೆಗೊಂಡಿದ್ದಾರೆ, ಇನ್ನೂ ವಿಚಾರಣೆ ನಡೆಯುತ್ತಿರುವಾಗ ಹಿರಿಯ ಪೊಲೀಸ್ ಅಧಿಕಾರಿಯಾದ ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜನಕೊಪ್ಪ, ಗಂಗಾವತಿ ಗ್ರಾಮೀಣ ಠಾಣೆಯ ಸಿಪಿಐ ಉದಯರವಿ ಹಾಗು ಕನಕಗಿರಿ ಪಿಎಸ್‌ಐ ತಾರಾಬಾಯಿ ಪವಾರ ಭಾಗಿಯಾಗಿದ್ದರು, ಪೊಲೀಸ್ ಯೂನಿಫಾರ್ಮ್ ಧರಿಸಿಯೇ ಭಾಗಿಯಾಗಿ, ಮದುವೆಯಲ್ಲಿ ಫೋಟೊಕ್ಕೆ ಫೋಸು ನೀಡಿದ್ದಯ ದೊಡ್ಡ ಸುದ್ದಿಯಾಗಿತ್ತು.
ಜುಲೈ 18 ರಂದು ಮಹಾಂತೇಶ ನಾಯಕ ಮದುವೆಯು ಹುಲಿಹೈದರದಲ್ಲಿ ನಡೆಯಿತು, ಈ ಮದುವೆಯಲ್ಲಿ ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜನಿಕೊಪ್ಪ, ಗಂಗಾವತಿ ಗ್ರಾಮೀಣ ಠಾಣೆಯ ಉದಯರವಿ ಹಾಗು ಕನಕಗಿರಿ ಪಿಎಸ್‌ಐ ತಾರಾಬಾಯಿ ಭಾಗಿಯಾಗಿದ್ದರು, ಇದು ಪೊಲೀಸ್‌ ಇಲಾಖೆಗೆ ಮುಜಗರ ತರುವಂತೆ ಮಾಡಿತ್ತು, ಇದರಿಂದ ಎಚ್ಚೆತ್ತುಕೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ ತಕ್ಷಣದಿಂದ ಮೂರು ಜನರು ಕಡ್ಡಾಯ ರಜೆಯ ಮೇಲೆ ತೆರಳುವಂತೆ ಆದೇಶಿದ್ದಾರೆ, ಇದರ ನಂತರ ಎಸ್ಪಿಯವರ ನೇತೃತ್ವದಲ್ಲಿ ಈ ತನಿಖೆ ನಡೆಯಲಿದೆ.

ಪ್ರಮುಖ ಸುದ್ದಿ :-   ವೀಡಿಯೊ..| ಕುಮಟಾ : ಅಘನಾಶಿನಿ ನದಿಗೆ ಅಡ್ಡವಾಗಿ ನಿರ್ಮಾಣವಾಗುತ್ತಿದ್ದ ಸೇತುವೆಯ ಸ್ಲ್ಯಾಬ್‌ ಕುಸಿತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement