ನಾರಾಯಣಪುರ ಜಲಾಶಯದಿಂದ 1.61 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ… ಪ್ರವಾಹ ಭೀತಿ..!.!

ಯಾದಗಿರಿ :ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕದಲ್ಲಿ ಭಾರಿ ಮಳೆಯಿಂದ ಆಲಮಟ್ಟಿ ಮತ್ತು ಬಸವಸಾಗರ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗುತ್ತಿದೆ. ಹೀಗಾಗಿ ನಾರಾಯಣಪುರ ಬಸವಸಾಗರ ಜಲಾಶಯದ 20 ಕ್ರಸ್ಟ್‌ ಗೇಟುಗಳನ್ನು ತೆರೆದು 161500 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣೆಗೆ ಹರಿಸಲಾಗುತ್ತಿದೆ ಹೀಗಾಗಿ ಅಣೆಕಟ್ಟಿನ ಕೆಲಭಾಗದ ಜನರಿಗೆ ಭೀತಿಎದುರಾಗಿದೆ.
ಮಹಾರಾಷ್ಟ್ರದ ಮಹಾಬಲೇಶ್ವರ, ಸಾಂಗ್ಲಿ, ಮಿರಜ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದೆ. ಅಲ್ಲದೆ ಬೆಳಗಾವಿ ಸುತ್ತಮುತ್ತ ಮಲಪ್ರಭಾ-ಘಟಪ್ರಭಾ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರೀ ಜಲಾಶಯಕ್ಕೆ ನೀರು ಹರಿದು ಬರುತ್ತಿದ್ದು ನೀರಿನ ಒಳ ಹರಿವು ಹೆಚ್ಚಾಗಿದೆ. ಹೀಗಾಗಿ ಅಲ್ಲಿಂದ ಬರುವ ನೀರಿನಿಂದ ನಾರಾಯಣಪುರದ ಬಸವಸಾಗರ ಜಲಾಶಯವು ಕೂಡ ಭರ್ತಿಯಾಗಿ ನೀರಿನ ಸಂಗ್ರಹ ಗರಿಷ್ಠ ಮಟ್ಟ ತಲುಪಿದ್ದು ಜಲಾಶಯದ 20 ಮುಖ್ಯ ಕ್ರಸ್ಟ್‌ ಗೇಟುಗಳನ್ನು ತೆರೆದು  161500 ಲಕ್ಷ ಕ್ಯೂಸೆಕ್ ನೀರನ್ನು ಕೃಷ್ಣೆಗೆ ಬಿಡಲಾಗಿದೆ.
ಸದ್ಯ ಕೃಷ್ಣೆಯ ಒಡಲು ಭೋರ್ಗರೆಯುತ್ತಿದ್ದು ಕೃಷ್ಣಾ ತೀರದ ಬಂಡೋಳ್ಳಿ, ತಿಂಥಣಿ, ಬೆಂಚಿಗಡ್ಡಿ, ದೇವರಗಡ್ಡಿ, ಮೇಲಿನಗಡ್ಡಿ, ನೀಲಕಂಠ ರಾಯನಗಡ್ಡಿ ಸೇರಿ ಇತರೆ ಗ್ರಾಮಗಳ ಜನ-ಜಾನುವಾರು ನದಿಗೆ ಇಳಿಯದಂತೆ ಖಡಕ್ ಸೂಚನೆ ನೀಡಲಾಗಿದೆ. ಕಳೆದ ಸಾಲಿನ ಪ್ರವಾಹ ಮಾಸುವ ಮುನ್ನವೇ ಸದ್ಯ ಭಾರಿ ನೀರು ನದಿಗೆ ಬಿಟ್ಟಿದ್ದಾರೆಂಬ ಎಂಬ ಸುದ್ದಿ ಕೇಳಿ ನದಿ ಪಾತ್ರದ ಜನತೆಯ ನಿದ್ದೆ ಗೆಡಿಸಿದೆ.
492.252 ಮೀ ಗರಿಷ್ಠ ನೀರಿನ ಸಂಗ್ರಹವಿರುವ ಬಸವಸಾಗರ ಜಲಾಶಯದಲ್ಲಿ ಸದ್ಯ 491.13 ಮೀ ತಲುಪಿದ್ದು 30.74 ಟಿಎಂಸಿ ನೀರಿನ ಸಂಗ್ರಹವಿದೆ, ಜಲಾಶಯದ ನೀರಿನ ಸಂಗ್ರಹ ಮಟ್ಟ ಕಾಯ್ದುಕೊಂಡು ಜಲಾಶಯದ ಗೇಟ್‌ಗಳ ನೀರು ನದಿಗೆ ಹರಿಸಲಾಗುತ್ತಿದೆ. ಇದು ಎರಡು ದಿನಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ, ಇನ್ನೂ ಒಳ ಹರಿವು ಹೆಚ್ಚಳ ಆದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನದಿಗೆ ನೀರು ಬಿಡುವ ಸಾಧ್ಯತೆ ಇದೆ ಎಂದು ನಿಗಮದ ಅಧಿಕಾರಿಗಳ ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ದೇವರಾಜೇಗೌಡಗೆ ಪೆನ್ ಡ್ರೈವ್ ಕೊಟ್ಟಿದ್ದು ನಾನೇ, ಬೇರೆ ಯಾರಿಗೂ ಕೊಟ್ಟಿಲ್ಲ : ಪ್ರಜ್ವಲ್ ರೇವಣ್ಣ ಮಾಜಿ ಕಾರು ಚಾಲಕ ಕಾರ್ತಿಕ ಹೇಳಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement