ಕಳಚೆ ಭೀಕರ ಭೂಕುಸಿತ, ಉ.ಕ. ಜಿಲ್ಲೆ ನೈಸರ್ಗಿಕ ಅವಘಡ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಸ್ವರ್ಣವಲ್ಲಿ ಶ್ರೀ ಒತ್ತಾಯ

 

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಭಾರಿ ಪ್ರಕೃತಿ ಅವಘಡಗಳನ್ನು ‘ರಾಷ್ಟ್ರೀಯ ವಿಪತ್ತು’ ಎಂದು ಘೋಷಿಸಬೇಕು ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಭೂಕುಸಿತ ಪ್ರವಾಹದ ಹಿನ್ನೆಲೆಯಲ್ಲಿ ಶ್ರೀ ಸೋಂದಾ ಸ್ವರ್ಣವಲ್ಲಿಯಲ್ಲಿ ನಡೆದ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಆಡಳಿತ ಮಂಡಳಿ ಜುಲೈ 31ರಂದು ತುರ್ತು ಸಭೆ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು,ನಾಶವಾದ ಮನೆಗಳನ್ನು ಬೇರೆ ಸ್ಥಳಗಳಲ್ಲಿ ಪುನರ್ ನಿರ್ಮಾಣ ಮಾಡಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ತೋಟ-ಗದ್ದೆ ಸಂಪೂರ್ಣ ನಾಶವಾದ ರೈತರಿಗೆ ಬೇರೆ ಸ್ಥಳದಲ್ಲಿ ಕೃಷಿ ಜಮೀನು ನೀಡಬೇಕು, ರಸ್ತೆ ಪುನರ್ನಿರ್ಮಾಣ ಆಗಬೇಕು, ಮತ್ತಿಘಟ್ಟ-ಹಳವಳ್ಳಿ ರಸ್ತೆ ನಿರ್ಮಾಣ ಅತ್ಯವಶ್ಯಕ. ಪ್ರವಾಹ, ಭೂಕುಸಿತ ಸಂತ್ರಸ್ತರಿಗೆ ಸಮಾಜ ಅಪಾರ ನೆರವಿನ ಹಸ್ತ ಚಾಚಬೇಕು ಎಂದು ಮನವಿ ಮಾಡಿದರು ಹಾಗೂ ಶ್ರೀ ಸ್ವರ್ಣವಲ್ಲೀ ಸಂಸ್ಥಾನ ಇನ್ನಷ್ಟು ಸೇವೆ ನೀಡಲು ನಿರ್ಧರಿಸಿದೆ ಎಂದು ಪ್ರಕಟಿಸಿದರು. ಜಿಲ್ಲೆಯ ಪ್ರಾಥಮಿಕ ಸಹಕಾರಿ ಸಂಸ್ಥೆಗಳು, ಟಿ.ಎಸ್.ಎಸ್, ಟಿ.ಎಂ.ಎಸ್, ಕೆ.ಡಿ.ಸಿ.ಸಿ ಬ್ಯಾಂಕ್, ಉದ್ದಿಮೆಗಳು ಶ್ರೀ ಮಹಾಸಂಸ್ಥಾನದ ಜೊತೆ ಸೇವಾಕಾರ್ಯಕ್ಕೆ ನೆರವು ನೀಡಲು ಕರೆ ನೀಡಿದರು. ಸಂಪೂರ್ಣ ಕೃಷಿ ಭೂಮಿ ನಾಶವಾದ ರೈತರ ಸಾಲ ಮನ್ನಾ ಮಾಡಬೇಕು ಎಂದು ಸರ್ಕಾರವನ್ನು ಸ್ವಾಮೀಜಿಗಳು ಒತ್ತಾಯಿಸಿದರು.
ಶ್ರೀ ಸ್ವರ್ಣವಲ್ಲೀ ಸಂಸ್ಥಾನದ ಪ್ರವಾಹ ಭೂಕುಸಿತ ಸಂತ್ರಸ್ತರ ಪರಿಹಾರ ನಿಧಿಗೆ ದೇಣಿಗೆ ನೀಡುವವರು ಈ ಕೆಳಗಿನ ಬ್ಯಾಂಕ್ ಖಾತೆಗೆ ಜಮಾ ಮಾಡಲು ಕೋರಲಾಗಿದೆ. ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನದ ಕರ್ನಾಟಕ ಬ್ಯಾಂಕ್ ಶಿರಸಿ ಶಾಖೆ ಉಳಿತಾಯ ಖಾತೆ ಸಂಖ್ಯೆ- 7072500100707001 ಐಎಫ್ಎಸ್ಸಿ ಸಂಖ್ಯೆ- ಕೆಎಆರ್ಬಿ-0000707 ದೇಣಿಗೆ ನೀಡುವವರು ತಮ್ಮ ಹೆಸರು ವಿಳಾಸ ಫೋನ್ ನಂಬರ್ ಮುಂತಾದ ವಿವರಗಳನ್ನು ನೀಡಬೇಕು. ಮೊಬೈಲ್‌ : 08384296555,279311,9483481359 ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.
ಇದಕ್ಕೂ ಮೊದಲು ಶ್ರೀಮಠದ ವಿವಿಧ ಸೀಮಾ ಮುಖ್ಯಸ್ಥರು, ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ, ಉಪಸಮಿತಿಗಳ ಕಾರ್ಯಕರ್ತರು ತಮ್ಮ ಸೀಮೆಯಲ್ಲಿ ಆಗಿರುವ ಭೂಕುಸಿತ, ಪ್ರವಾಹ ಹಾನಿ ವಿವರ ಮಂಡಿಸಿದರು. ಈಗಾಗಲೇ ಸ್ವರ್ಣವಲ್ಲೀ ಮಠದ ಅಂಗ ಸಂಸ್ಥೆಯಾದ ಹವ್ಯಕ ಜಾಗೃತಿ ಕಾರ್ಯಪಡೆಯು ಹಳವಳ್ಳಿ,ಕಲ್ಲೇಶ್ವರ, ಕಳಚೆ,ಕೊಡ್ಲಗದ್ದೆ ಭಾಗಗಳಿಗೆ ಆಹಾರ ಧಾನ್ಯ, ವಸ್ತ್ರ,ಔಷಧ ವಿತರಣೆ ಮಾಡಲಾಯಿತು. ಐ.ಎಂ.ಎ ಶಿರಸಿ ಸಹಯೋಗದೊಂದಿಗೆ ಮೆಡಿಕಲ್ ಕ್ಯಾಂಪ್ ಮಾಡಿದ ನೆರವಿನ ವಿವರ ನೀಡಿದರು. ಶ್ರೀಮಠದ ಮುಖ್ಯ ವ್ಯವಸ್ಥಾಪಕರಾದ ಎಸ್ ಎನ್ ಗಾಂವ್ಕಾರ ಹಾನಿಯ ಸಂಗ್ರಹ ವರದಿ ಸಭೆಯ ಮುಂದೆ ಮಂಡಿಸಿದರು. ಕಳಚೆ ಪ್ರದೇಶದಲ್ಲಿ ಮನೆ ನೆಲಸಮವಾದ 20 ಕುಟುಂಬಗಳು ಮನೆ ತೊರೆದಿದ್ದಾರೆ. ಇನ್ನೂ 30 ಮನೆಗಳು ಕುಸಿದು ಬೀಳುವ ಹಂತದಲ್ಲಿವೆ. ಇಲ್ಲಿನ ಅರವತ್ತು ಮನೆಗಳಿಗೆ ಯಾವುದೇ ನಾಗರಿಕ ಸೌಲಭ್ಯ ಇಲ್ಲವಾಗಿದೆ. ರಸ್ತೆ, ವಿದ್ಯುತ್, ನೀರು, ದೂರವಾಣಿ ಸಂಪರ್ಕ ಕಡಿದಿದೆ. ಹಳವಳ್ಳಿ, ಸುಂಕಸಾಳ, ಆಚವೆ, ಹಿಲ್ಲೂರು ಹಳ್ಳಿಗಳ ಕೃಷಿಕಾರ್ಮಿಕರ 300 ಮನೆಗಳು ಹಾನಿಗೆ ಒಳಗಾಗಿವೆ. ಬಾಳೂರು,ಕರೂರು,ಮತ್ತೀಘಟ್ಟ ಪ್ರದೇಶದಲ್ಲಿ ಹತ್ತು ಮನೆಗಳು ನಾಶವಾಗಿವೆ. ಸುಮಾರು 25 ಎಕರೆ ತೋಟ ನೆಲಸಮವಾಗಿದೆ. ಕಳಚೆ ಸೇರಿದಂತೆ ಯಲ್ಲಾಪುರ, ಸಿದ್ದಾಪುರ, ಶಿರಸಿ ಪ್ರದೇಶಗಳ ಐದುನೂರು ಎಕರೆಗಿಂತಲೂ ಹೆಚ್ಚು ಅಡಿಕೆ ತೋಟಗಳು ಸಂಪೂರ್ಣ ನಾಶವಾಗಿದೆ ಎಂಬ ವಿವರ ನೀಡಿದರು.
ಸಭೆಯಲ್ಲಿ ಪಾಲ್ಗೊಂಡ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಸರ್ಕಾರಕ್ಕೆ ಭೂಕುಸಿತ ಅಧ್ಯಯನ ಸಮಿತಿ ಏಪ್ರಿಲ್ ನಲ್ಲಿ ವರದಿ ಸಲ್ಲಿಸಿದೆ. ಇದರಲ್ಲಿ ಉತ್ತರ ಕನ್ನಡ ಜಿಲ್ಲೆಯ ಘಟ್ಟದ ತಾಲೂಕುಗಳ ಸೇರ್ಪಡೆಯಾಗಿದೆ. ಕೃಷಿಭೂಮಿ ಸಂಪೂರ್ಣ ನಾಶವಾಗಿದ್ದಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಶಿಫಾರಸು ಮಾಡಲಾಗಿದೆ ಎಂದರು.
ಆಡಳಿತ ವಿಕೇಂದ್ರೀಕರಣ ಯೋಜನೆಯ ಉಪಾಧ್ಯಕ್ಷರಾದ ಪ್ರಮೋದ್ ಹೆಗಡೆ ಸರ್ಕಾರ ನೆರವು ಘೋಷಿಸಿದೆ. ಇನ್ನಷ್ಟು ಹಾನಿ ವಿವರ ಸೇರ್ಪಡೆಯಾಗಬೇಕು. ಪುನರ್ವಸತಿ ಬಗ್ಗೆ ಇನ್ನಷ್ಟು ಒತ್ತಡ ತರಬೇಕು. ರಾಷ್ಟ್ರದ ಗಮನ ಸೆಳೆಯಬೇಕು ಎಂದರು.
ಆಡಳಿತ ಮಂಡಳಿ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಸ್ವಾಗತಿಸಿದರು.ಜಿ.ವಿ ಹೆಗಡೆ ವಂದಿಸಿದರು. ವೆಂಕಟರಮಣ ಬೆಳ್ಳಿ, ಗಂಗಾಧರ ಕಡಕಿನಬೈಲು, ಸೀತಾರಾಮ ನೀರ್ನಳ್ಳಿ, ಎನ್.ಕೆ ಭಟ್ಟ ಅಗ್ಗಾಶಿಕುಂಬ್ರಿ,ಡಿ ಶಂಕರ ಭಟ್ಟ, ಸದಾನಂದ ಹಳವಳ್ಳಿ ಇನ್ನಿತರರು ಮಾತನಾಡಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಬೆಂಗಳೂರು : ತಡೆಗೋಡೆಗೆ ಟೆಂಪೋ ಡಿಕ್ಕಿ ; ವಾಹನವೇ ಅರ್ಧಕ್ಕೆ ತುಂಡು. ; ಸೇತುವೆಯಿಂದ ಕೆಳಕ್ಕೆ ಬಿದ್ದ ಕ್ಯಾಬಿನ್...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement