ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕ ಅಶ್ವಿನಿ ಉಪಾಧ್ಯಾಯ ಮತ್ತು ಇತರ ಐವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಉಳಿದ ಐವರನ್ನು ವಿನೋದ್ ಶರ್ಮಾ, ದೀಪಕ್ ಸಿಂಗ್, ವಿನಿತ್ ಕ್ರಾಂತಿ, ಪ್ರೀತ್ ಸಿಂಗ್ ಮತ್ತು ದೀಪಕ್ ಎಂದು ಗುರುತಿಸಲಾಗಿದೆ.
ಪೊಲೀಸರ ಪ್ರಕಾರ, ಭಾನುವಾರ ಜಂತರ್ ಮಂತರ್ನಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದೆ. ಸೋಮವಾರ, ಕೋಮು ಘೋಷಣೆಗೆ ಸಂಬಂಧಿಸಿದಂತೆ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಅಶ್ವಿನಿ ಅವರಿಗೆ ಸಮನ್ಸ್ ನೀಡಿದ್ದರು ಮತ್ತು ವಿಚಾರಣೆಗೆ ಕನ್ನಾಟ್ ಪ್ಲೇಸ್ ಪೊಲೀಸ್ ಠಾಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆ ವೇಳೆ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಎತ್ತಿ ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿದ ನಂತರ ಪೊಲೀಸರು ಕ್ರಮ ಕೈಗೊಂಡರು. ಭಾನುವಾರ ಜಂತರ್ ಮಂತರ್ ನಲ್ಲಿ ಭಾರತ್ ಜೊಡೋ ಆಂದೋಲನ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು.
ಏತನ್ಮಧ್ಯೆ, ಅಶ್ವಿನಿ ತಾವು ಘೋಷಣೆಯಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸಿದ್ದಾರೆ. “ವೈರಲ್ ಆಗಿರುವ ವಿಡಿಯೋವನ್ನು ಪರೀಕ್ಷಿಸಲು ನಾನು ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದ್ದೇನೆ. ವಿಡಿಯೋ ಅಧಿಕೃತವಾಗಿದ್ದರೆ, ಅದರಲ್ಲಿ ಭಾಗಿಯಾದ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಅವರು ಹೇಳಿದರು.
ಅವರು ಯಾರೆಂದು ನನಗೆ ತಿಳಿದಿಲ್ಲ. ನಾನು ಅವರನ್ನು ನೋಡಿಲ್ಲ, ಅವರನ್ನು ಭೇಟಿ ಮಾಡಿಲ್ಲ ಮತ್ತು ಅವರನ್ನು ಅಲ್ಲಿಗೆ ಕರೆದಿಲ್ಲ. ನಾನು ಅಲ್ಲಿಯವರೆಗೂ ಅವರನ್ನು ಅಲ್ಲಿ ನೋಡಲಿಲ್ಲ. ವಿಡಿಯೊ ನಕಲಿಯಾಗಿದ್ದರೆ, ಭಾರತ್ ಜೊಡೊ ಆಂದೋಲನಕ್ಕೆ ಮಾನಹಾನಿ ಮಾಡಲು ಇದನ್ನು ಪ್ರಸಾರ ಮಾಡಲಾಗುತ್ತಿದೆ”ಎಂದು ಅವರು ಹೇಳಿದರು.
ನವದೆಹಲಿಯ ಡಿಸಿಪಿ ದೀಪಕ್ ಯಾದವ್ ಪ್ರಕಾರ, ಜಂತರ್ ಮಂತರ್ ನಲ್ಲಿ ಜಮಾಯಿಸಿದ ಜನರಿಗೆ ಯಾವುದೇ ಅನುಮತಿಯಿಲ್ಲ. “ಕೆಲವರು ಪ್ರಚೋದನಕಾರಿ ಮತ್ತು ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿರುವುದು ನಮ್ಮ ಗಮನಕ್ಕೆ ಬಂದಿದೆ. ನಾವು ವಿಡಿಯೊವನ್ನು ಸ್ವೀಕರಿಸಿದ್ದೇವೆ ಮತ್ತು ಈ ಕುರಿತು ಎಫ್ಐಆರ್ ದಾಖಲಿಸಿದ್ದೇವೆ. ನಾವು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಅಗತ್ಯ ಕ್ರಮ ಕೈಗೊಳ್ಳಲಾಗುವುದು ಅವರು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ