ನವದೆಹಲಿ: ಆಗಸ್ಟ್ 15ರಂದು ದೇಶದ 75ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ, ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲಿಸಲು ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್ ಧನ್ಕರ್ ಅವರು 7500 ಚದರ್ ಅಡಿಯಷ್ಟು ವಿಶಾಲವಾದ ರಾಷ್ಟ್ರಧ್ವಜವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ.
ಕೋಲ್ಕತ್ತಾದ ವಿಕ್ಟೋರಿಯಾ ಮೆಮೋರಿಯಲ್ ಹಾಲ್ನಲ್ಲಿ, ಭಾರತೀಯ ಪ್ರವಾಸೋದ್ಯಮ ಮತ್ತು ಡಾರ್ಜಲಿಂಗ್ನ ಹಿಮಾಲಯ ಪರ್ವತಾರೋಹಣ ಸಂಸ್ಥೆಯ ಸಹಯೋಗದಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ, ಈ ವಿಶಾಲವಾದ ರಾಷ್ಟ್ರಧ್ವಜವನ್ನು ರಾಜ್ಯಪಾಲರು ಅರ್ಪಿಸಲಿದ್ದು, ನಂತರ ಅದನ್ನು ವಿಕ್ಟೋರಿಯಾ ಸ್ಮಾರಕದ ಮೇಲೆ ಹೊದಿಸಲಾಗುವುದು ಎಂದು ವರದಿ ತಿಳಿಸಿದೆ.
ರಾಜ್ಯಪಾಲ ಧನ್ಕರ್ ಅವರು ರಾಷ್ಟ್ರಕ್ಕೆ ಅರ್ಪಿಸುತ್ತಿರುವ 7500 ಚದರ್ ಅಡಿ ವಿಸ್ತೀರ್ಣದ ತ್ರಿವರ್ಣ ಧ್ವಜವನ್ನು 2021ರ ಏಪ್ರಿಲ್ 25ರಂದು ಹಿಮಾಲಯ ಪರ್ವತಾರೋಹಣ ಸಂಸ್ಥೆಯ ಅಧಿಕಾರಿಗಳು, ಸಿಕ್ಕಿಂನ, ಸಮುದ್ರ ಮಟ್ಟಕ್ಕಿಂತ 16,500 ಅಡಿ ಎತ್ತರದ ಪ್ರದೇಶವಾದ ಮೌಂಟ್ ರೆನಾಕ್ ಎಂಬಲ್ಲಿ ಹಾರಿಸಿದ್ದಾರೆ. ಅದಾದ ನಂತರ ಧ್ವಜ ಡಾರ್ಜಲಿಂಗ್ನಲ್ಲಿ ಹಾರಿಸಲಾಗಿದೆ. ಇದೀಗ ಕೊಲ್ಕತ್ತಾಕ್ಕೆ ತರಲಾಗಿದ್ದು, ಇಲ್ಲಿ ಸ್ವಾತಂತ್ರ್ಯೋತ್ಸವದಂದು ರಾಜ್ಯಪಾಲರು ರಾಷ್ಟ್ರಧ್ವಜವನ್ನು ದೇಶಕ್ಕೆ ಅರ್ಪಿಸಲಿದ್ದಾರೆ.
ಈ ಬಾರಿ ದೇಶದಲ್ಲಿ 75ನೇ ಸ್ವಾತಂತ್ರ್ಯೋತ್ಸವ ನಿಮಿತ್ತ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಆಚರಣೆ ಮಾಡಲಾಗುತ್ತಿದ್ದು, ಅದರ ಸವಿನೆನಪಿಗಾಗಿ ಸ್ಮಾರಕದ ಆವರಣದಲ್ಲಿ 750 ಸಸಿಗಳನ್ನು ನೆಡಲಾಗುವುದು. ಕಾರ್ಯಕ್ರಮದಲ್ಲಿ ಧನ್ಕರ್ ಅವರಿಗೆ ಸಿಐಎಸ್ಎಫ್ ಪಡೆಯಿಂದ ಗೌರವ ವಂದನೆ ಸಲ್ಲಿಸಲಾಗುವುದು. ಅದಾದ ಬಳಿಕ ರಾಜ್ಯಪಾಲರಿಂದ ಧ್ವಜಾರೋಹಣ ನಡೆಯಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ