ಸಂಸತ್ತು-ವಿಧಾನಸಭೆಗಳಲ್ಲಿ ಗುಣಮಟ್ಟದ ಚರ್ಚೆಗಳಾಗುತ್ತಿಲ್ಲ: ಸಿಜೆಐ ರಮಣ ವಿಷಾದ

ನವದೆಹಲಿ: ಭಾರತದ ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ಅವರು ಸಂಸತ್ತಿನ ಕಾರ್ಯನಿರ್ವಹಣೆಯನ್ನು ಇಂದು ಪ್ರಬಲವಾಗಿ ಟೀಕಿಸಿದರು, ಕಾನೂನುಗಳ ಮೇಲಿನ ಚರ್ಚೆಗಳ ಕೊರತೆಯನ್ನು ಕೇಂದ್ರೀಕರಿಸಿದರು.

ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಗುಣಮಟ್ಟದ ಚರ್ಚೆ ಕೊರತೆಯಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಕಲವಳ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್‌ನ ಬಾರ್‌ ಅಸೋಸಿಯೇಷನ್‌, ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಗುಣಮಟ್ಟದ ಚರ್ಚೆ ಕೊರತೆಯಿಂದಾಗಿ ಕಾನೂನುಗಳ ಹಲವು ಅಂಶಗಳು ಅಸ್ಪಷ್ಟವಾಗಿ ಇರುತ್ತವೆ. ಹೀಗಾಗಿ, ನ್ಯಾಯಾಲಯಗಳ ಮೇಲಿನ ಹೊರೆ ಇನ್ನಷ್ಟು ಹೆಚ್ಚಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾನೂನು ರೂಪಿಸುವ ಪ್ರಕ್ರಿಯೆಯ ಸಂದರ್ಭದಲ್ಲೇ ಸಭೆಗಳು ವಿಸ್ತೃತ ಚರ್ಚೆ ನಡೆಸಿದರೆ, ನ್ಯಾಯಾಲಯಕ್ಕೆ ವ್ಯಾಜ್ಯಗಳನ್ನು ಪರಿಹರಿಸಲು ಅನೂಕೂಲವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ದೇಶದ ಸುದೀರ್ಘ ಸ್ವಾತಂತ್ರ್ಯ ಹೋರಾಟವನ್ನು ವಕೀಲರೇ ಮುನ್ನಡೆಸಿದ್ದರು. ರಾಷ್ಟ್ರಪಿತ ಮಹಾತ್ಮ ಗಾಂಧಿ, ಬಾಬು ರಾಜೇಂದ್ರ ಪ್ರಸಾದ್‌ರಂಥವರು ಕಾನೂನಿನಲ್ಲಿ ಪರಿಣತಿ ಪಡೆದಿದ್ದರು. ಆದರೂ, ದೇಶಕ್ಕಾಗಿ ತಮ್ಮ ಆಸ್ತಿ, ಕುಟುಂಬ ಮತ್ತು ಜೀವನ ತ್ಯಾಗ ಮಾಡಿದರು. ಲೋಕಸಭೆ ಮತ್ತು ರಾಜ್ಯಸಭೆಯ ಮೊದಲ ಸದಸ್ಯರುಗಳಲ್ಲಿ ಹೆಚ್ಚಿನವರು ವಕೀಲರು ಅಥವಾ ಕಾನೂನಿನ ಹಿನ್ನಲೆ ಹೊಂದಿದ್ದವರಾಗಿದ್ದರು. ಆದರೆ, ಈಗ ಸಂಸತ್ತಿನಲ್ಲಿ ಕಾನೂನಿನ ಮೇಲಿನ ಚರ್ಚೆ ಹೇಗೆ ನಡೆಯುತ್ತಿದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ ಎಂದರು.
ಸದನದಲ್ಲಿ ಕಾನೂನಿಗೆ ಸಂಬಂಧಿಸಿದ ಚರ್ಚೆಯ ಕೊರತೆಯಿಂದ ಹಲವು ರೀತಿ ಗೊಂದಲಗಳು ಉಂಟಾಗುತ್ತಿವೆ. ಇದರಿಂದ ಜನರಿಗೂ ತೊಂದರೆ ಉಂಟಾಗುತ್ತದೆ. ಸಂಸತ್‌ ಮತ್ತು ವಿಧಾನಸಭೆಗಳಲ್ಲಿ ಕಾನೂನು ಬಗ್ಗೆ ಮಾಹಿತಿ ಹೊಂದಿರುವ ವ್ಯಕ್ತಿಗಳಿಲ್ಲದಿದ್ದರೇ ಇದೇ ರೀತಿಯ ಪರಿಸ್ಥಿತಿ ಸೃಷ್ಟಿಯಾಗುತ್ತದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement