ಹಾಸನ: ಕೋಡಿಮಠದ ಡಾ.ಶಿವಾನಂದ ರಾಜೇಂದ್ರ ಸ್ವಾಮೀಜಿ ರಾಜ್ಯ ರಾಜಕಾರಣದ ಬಗ್ಗೆ ಅಚ್ಚರಿ ಭವಿಷ್ಯ ನುಡಿದಿದ್ದಾರೆ.
ಅರಸೀಕೆರೆ ತಾಲ್ಲೂಕಿನ ಮಾಡಳು ಗ್ರಾಮದಲ್ಲಿ ಭವಿಷ್ಯ ನುಡಿದ ಶ್ರೀಗಳು ಪರೋಕ್ಷವಾಗಿ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಬೊಂಬಾಯಿ ಎಂದು ಉಲ್ಲೇಖಿಸಿ ಬೊಂಬಾಯಿ ಬೊಂಬೆಯಾಗಿದ್ದಾರೆ. ಬೊಂಬಾಯಿ ಕುಣಿಯುತ್ತೆ, ಯೋಚನೆಯಿಲ್ಲ. ಸೂತ್ರಧಾರಿ ಯಡಿಯೂರಪ್ಪ ಇದ್ದಾರೆ ಸರ್ಕಾರ ನಡೆಸಿಕೊಂಡು ಹೋಗುತ್ತಾರೆ, ಸರ್ಕಾರಕ್ಕೆ ತೊಂದರೆಯಿಲ್ಲ ಎಂದು ಹೇಳಿದ್ದಾರೆ ಎಂದು ನ್ಯೂಸ್ 18 ಕನ್ನಡ.ಕಾಮ್ ವರದಿ ಮಾಡಿದೆ.
ಯಡಿಯೂರಪ್ಪ ಮೂಲೆ ಗುಂಪು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಹಿಂದೂ ದೇಶ. ಹಿಂದೂ ದೇಶ ಅಂದರೆ ದೈವ, ಧರ್ಮ, ಸತ್ಯ , ನಂಬಿಕೆ ಹಾಗೂ ಸಾಧುಗಳಿರುವ ದೇಶ. ಇಲ್ಲಿ ಸಾಧುಗಳು ಬೀದಿಗೆ ಬಂದಾಗ ಇವರು ಅಗೌರವ ಮಾಡಿದರು. ಸಾಧುಗಳು ಬಂದಿದ್ದು ಯಡಿಯೂರಪ್ಪ ಅವರನ್ನು ಅಧಿಕಾರದಲ್ಲಿ ಉಳಿಸಲು ಅಲ್ಲ. ರಾಜ್ಯದಲ್ಲಿ ಕೊರೊನಾ ಇದೆ, ಪ್ರವಾಹ ಪರಿಸ್ಥಿತಿಯಿದೆ. ವಿಪರೀತ ಮಳೆಯಿಂದ ಜನ ಸಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರಾಜನನ್ನು ಬದಲಿಸುವುದು ಯೋಗ್ಯವಲ್ಲ ಎಂದು ಸರ್ಕಾರಕ್ಕೆ ಸಲಹೆ ಕೊಟ್ಟರು. ಆಡಳಿತ ಪಕ್ಷದವರು ಅದನ್ನು ಧಿಕ್ಕರಿಸಿದರು. ಆ ಫಲವನ್ನು ಸದ್ಯದಲ್ಲೇ ಉಣ್ಣುತ್ತಾರೆ ಎನ್ನುವ ಮೂಲಕ ಬಿಜೆಪಿ ಅಪಾಯ ಇದೆ ಎಂದು ಪರೋಕ್ಷವಾಗಿ ಹೇಳಿದರು.
ರಾಜ್ಯದಲ್ಲಿ ಮಳೆಯಾಗುವ ಲಕ್ಷಣ ಇದೆ. ಇನ್ನೂ ಆಪತ್ತುಗಳಿವೆ. ಭೂಮಿ ನಡುಗುವುದು, ರಾಜಭಯ ಎಲ್ಲವೂ ಕಾರ್ತೀಕದವರೆಗೆ ಇರಲಿದೆ ಎಂದು ಅವರು ಹೇಳಿದರು.
ನಿಮ್ಮ ಕಾಮೆಂಟ್ ಬರೆಯಿರಿ