ಅಂಕೋಲಾ ತಾಲೂಕಿನ ಅತ್ಯಂತ ಕುಗ್ರಾಮಕ್ಕೆ ದೋಣಿಯಲ್ಲಿ ತೆರಳಿದ ಸಚಿವೆ ಕರಂದ್ಲಾಜೆ: ರೈತರಿಂದ ಸರ್ಕಾರಕ್ಕೆ ಹಲವು ಬೇಡಿಕೆ

ಕಾರವಾರ :- ಮಳೆಯ ಅಬ್ಬರದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಹಾಗೂ ಅಂಕೋಲಾ ತಾಲೂಕಿನ ಅನೇಕ ಕಡೆ ಕೃಷಿ ಜಮೀನುಗಳು ಕೊಚ್ಚಿಹೋಗುವ ಜೊತೆಗೆ ಹಲವು ಗ್ರಾಮಗಳಿಗೆ ಸಂಪರ್ಕ ಸಹ ಕಡಿತಗೊಂಡಿದೆ.
ಇಂತಹ  ಗ್ರಾಮಗಳಲ್ಲಿ ಒಂದಾದ ಅಂಕೋಲಾ ತಾಲೂಕಿನ ಯಲ್ಲಾಪುರ ಗಡಿ ಹಂಚಿಕೊಂಡ ಡೊಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ಯಂತ ಕುಗ್ರಾಮ ಕೈಗಡಿಯ ಕೃಷಿಕರಾದ ರಾಮಚಂದ್ರ ಹೆಗಡೆ, ಸುಬ್ರಾಯ ಹೆಗಡೆ ಅವರ ಮನೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತೆರಳಿದ್ದಾರೆ.

 

ಅನ್ನದಂಗಳದಲ್ಲಿ ಮಾತುಕತೆ ಸಂಭ್ರಮ…

ಗ್ರಾಮದ ಸುತ್ತಲಿನ ಹಳ್ಳಿಯ ಜನರು ಹಾಗೂ ಕುದ್ದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನದಿಯಲ್ಲಿ ದೋಣಿಯ ಮೂಲಕ ಸಂಪರ್ಕ ಕಡಿತವಾಗಿರುವ ಹಳ್ಳಿಯ ಜನರೊಂದಿಗೆ ಅನ್ನದಂಗಳದಲ್ಲಿ ಮಾತುಕತೆ ಸಂಭ್ರಮ ಕಾರ್ಯಕ್ರಮದ ಮೂಲಕ ಬೆರೆತರು. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಸಾಥ್‌ ನೀಡಿದರು.ಈ ಕಾರ್ಯಕ್ರಮವನ್ನು ಕೃಷಿ ಇಲಾಖೆ ಮತ್ತು ಸಾವಯವ ಕೃಷಿ ಅಭಿಯಾನ ದಡಿ ಆಯೋಸಿದ್ದವು.
ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕಾರ್ಯಕ್ರಮ ಉದ್ಘಾಟಿಸುವ ಬದಲು ಹಿಂದಿನಿಂದಲೂ ಸಾವಯವ ಕೃಷಿ ಮಾಡಿಕೊಂಡು ಬಂದ ಕೃಷಿ ದಂಪತಿಗಳಾದ ಬಾಬು ಕಂಚಾ ಸಿದ್ದಿ ಕೈಗಡಿ ಹಾಗೂ ಶ್ರೀಮತಿ ಲಕ್ಷ್ಮೀ ಬಾಬು ಸಿದ್ದಿ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಚಿವೆ ಕರಂದ್ಲಾಜೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಾಕ್ಷಿಯಾದರು.

ರೈತರ ಬೇಡಿಕೆಗಳು..

ರಾಮಚಂದ್ರ ಹೆಗಡೆ, ಸುಬ್ರಾಯ ಹೆಗಡೆ ಅವರ ಮನೆಯಂಗಳದ ಚಿಕ್ಕ ವೇದಿಕೆಯಲ್ಲಿ ನೂರಾರು ಜನರು ಕೇಂದ್ರ ಸಚಿವರಲ್ಲಿ ತಮ್ಮ ಸಮಸ್ಯೆಗಳನ್ನು ಹೇಳಿಕೊಂಡರು.

*ಗೋವನ್ನು ರಾಷ್ಟ್ರೀಯ ಪ್ರಾಣಿಯೆಂದು ಘೋಷಿಸಬೇಕು. ಗೋ ಆಧಾರಿತ ಉತ್ಪನ್ನಗಳಿಗೆ ಹಾಗೂ ಪಶು ಆಹಾರಗಳಿಗೆ ಜಿ.ಎಸ್.ಟಿಯಿಂದ ವಿನಾಯಿತಿ ನೀಡಿ. ಎಲ್ಲಾ ಮೂಲದ ಸಾವಯವ ಗೊಬ್ಬರಗಳಿಗೆ ಹಾಗೂ ರೈತರಿಂದಲೇ ಉತ್ಪಾದಿತ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಿಗೆ ಉತ್ಪಾದನಾ ಜಿ.ಎಸ್.ಟಿಯಿಂದ ವಿನಾಯಿತಿ ಕೊಡಬೇಕು ಎಂದು ಬೇಡಿಕೆ ಸಲ್ಲಿಸಲಾಯಿತು.
ಶ್ರೀಲಂಕಾ ದೇಶವು ರಾಸಾಯನಿಕ ಗೊಬ್ಬರ ಹಾಗೂ ವಿಷಗಳಿಗೆ ಪೂರ್ಣ ನಿಷೇಧ ಹೇರಿ ಸಾವಯವ ದೇಶ ಎಂದು ಘೋಷಿಸಿಕೊಂಡಿದೆ. ಅಧ್ಯಯನಕ್ಕಾಗಿ ಶ್ರೀಲಂಕಾ ದೇಶಕ್ಕೆ ರೈತರನ್ನೊಳಗೊಂಡ ವಿಶೇಷ ತಂಡವನ್ನು ಅಧ್ಯಯನಕ್ಕೆ ಪ್ರವಾಸ ಆಯೋಜಿಸಬೇಕು.
ಕೃಷಿಕರ ತೋಟದಲ್ಲಿ ಬಸಿಕಾಲುವೆ ಮತ್ತು ಮಣ್ಣಿನ ಏರಿ ನಿರ್ಮಾಣಕ್ಕೆ ಎನ್.ಆರ್.ಇ.ಜಿ (ನರೇಗಾ) ಅಡಿ ದೊಡ್ಡ ಹಿಡುವಳಿದಾರರಿಗೆ ಕನಿಷ್ಠ ಎರಡು ಹೆಕ್ಟೇರ್ ಪ್ರದೇಶಕ್ಕೆ ಅವಕಾಶ ಕಲ್ಪಿಸಿಕೊಡಬೇಕು.
*ವಿಮೆ ಮತ್ತು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ನಿಯಮಗಳನ್ನು ಲಿಖಿತಗೊಳಿಸುವಾಗ ಕಂಪ್ಯೂಟರಿನ ಅಕ್ಷರದ ಗಾತ್ರ ಹದಿನಾರಕ್ಕಿಂತ ಹೆಚ್ಚಿರುವಂತೆ ಮತ್ತು ಕೃಷಿಕರಿಗೆ/ಗ್ರಾಹಕರಿಗೆ ಮಾತೃಭಾಷೆಯಲ್ಲಿಯೇ (ಕನ್ನಡ) ನಿಯಮಾವಳಿಗಳನ್ನು ಕನ್ನಡದಲ್ಲಿ ನಮೂದಿಸುವಂತಾಗಬೇಕು.

*ಪ್ರಧಾನ ಮಂತ್ರಿ ಫಸಲ್ ವಿಮೆ ಯೋಜನೆಯು ಹವಾಮಾನ ಆಧಾರಿತವಾಗಿದ್ದು,ಈಗಿರುವ ಹೋಬಳಿ ಮಟ್ಟದ ವರದಿ ಆಧಾರದ ಬದಲು ಗ್ರಾಮವಾರು ಮಳೆ/ಬಿಸಿಲು ಮಾಪನ ಮಾಡಿ ಮಾಹಿತಿ ಒದಗಿಸುವಂತಾಗಬೇಕು. ಬೇರೆಲ್ಲೋ ಸುರಿದ ಮಳೆಯಿಂದಾಗಿ ಬರುವ ಪ್ರವಾಹದಿಂದ ಆಗುವ ಹಾನಿಗೂ ಸಹ ವಿಮೆ ಜಾರಿಯಾಗುವಂತೆ ತಿದ್ದುಪಡಿ ತರಬೇಕು.

ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿಗಳನ್ನು ಎಫ್.ಪಿ.ಓ (ರೈತ ಉತ್ಪಾದಕ ಸಂಸ್ಥೆ) ಎಂದು ಪರಿಗಣಿಸಿ. ಅದರ ಮಾರ್ಗಸೂಚಿಯಲ್ಲಿ ಮಾರ್ಪಾಡುಗಳನ್ನು ಮಾಡಬೇಕು. ಸರ್ಕಾರದ ಅನುದಾನವು ಶೇಕಡಾ 60:40ರ ಅನುಪಾತದಲ್ಲಿ ಕ್ರಮವಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಪಾಲಾಗಿರುತ್ತದೆ. ಅದೇ ರೀತಿ ಎಫ್.ಪಿ.ಓ ಇಂದ 40% ಭಾಗ ಹೂಡಿಕೆಯ ಜೊತೆಗೆ ಕೇಂದ್ರದ 60% ಭಾಗದ ಹೂಡಿಕೆಯ ವಿಧಾನವನ್ನು ಅನುಸರಿಸಬೇಕು.

ವಿಧಾನ ಪರಿಷತ್‌ ಸದಸ್ಯ ಶಾಂತರಾಮ ಸಿದ್ದಿ ಮನವಿ:

ಪ್ರಮುಖ ಸುದ್ದಿ :-   ಬಿಜೆಪಿಯಿಂದ ಕೆ.ಎಸ್‌. ಈಶ್ವರಪ್ಪ ಉಚ್ಚಾಟನೆ

ಬುಡಕಟ್ಟು ಜನಾಂಗದವರು ಅರಣ್ಯಭೂಮಿ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದಾರೆ. 1970ರ ಸುಮಾರಿಗೆ ನಮ್ಮ ತಂದೆ ಏಳು ಎಕರೆ ಜಮೀನು ಹೊಂದಿದ್ದರು. ಈಗ ಅರಣ್ಯ ಕಾಯ್ದೆಯಿಂದಾಗಿ ಕೇವಲ ಐದು ಗುಂಟೆಯಲ್ಲಿ ಜೀವನ ನಡೆಸುತ್ತಿದ್ದೇವೆ’ ಎಂದು ತಮ್ಮ ಹಾಗೂ ತಮ್ಮವರ ಸಮಸ್ಯೆ ಬಗ್ಗೆ ಸಚಿವರಿಗೆ ತಿಳಿಸಿದರು. ಇನ್ಮು ಅರಣ್ಯ ಕಾನೂನಿನಿಂದಾಗಿ ಅರಣ್ಯವನ್ನೇ ನಂಬಿ ತಲಾ ತಲಾಂತರದಿಂದ ಕಾಡಿನಲ್ಲಿ ಜೀವನ ಸಾಗಿಸುತ್ತಿರುವವರಿಗೆ ಹಕ್ಕುಪತ್ರ ನೀಡಬೇಕು ಎಂದು ಸಚಿವವರಿಗೆ ಮನವಿ ಮಾಡಿದರು.
ಸಚಿವ ಹೆಬ್ಬಾರ ಮಾತನಾಡಿ, ಜಿಲ್ಲೆಯಲ್ಲಿ ಅರಣ್ಯಭೂಮಿ ಹಕ್ಕುಪತ್ರಕ್ಕೆ 93,855 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಹಕ್ಕುಪತ್ರಕ್ಕೆ ಮೂರು ತಲೆಮಾರಿನ ದಾಖಲೆ ಸಲ್ಲಿಸಬೇಕು ಎಂದು ಅರಣ್ಯ ಹಕ್ಕು ಕಾಯ್ದೆ 2005ರಲ್ಲಿ ತಿಳಿಸಲಾಗಿದೆ. 75 ವರ್ಷಗಳ ದಾಖಲೆ ನೀಡುವುದು ಸಾಧ್ಯವಾಗದೇ ಸಮಸ್ಯೆಯಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತರಲು ದೆಹಲಿಗೆ ನಿಯೋಗ ಬರುತ್ತೇವೆ. ಇದು ಬಗೆಹರಿದರೆ ರಾಜ್ಯದ ಆರು ಜಿಲ್ಲೆಗಳ 2.39 ಲಕ್ಷ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಎಂದು ಕೇಂದ್ರ ಸಚಿವರಾದ ಕರಂದ್ಲಾಜೆ ಅವರಿಗೆ ಅರಣ್ಯ ಒತ್ತುವರಿದಾರರ ಸಮಸ್ಯೆ ಬಗ್ಗೆ ತಿಳಿಸಿದರು.
ಇದಕ್ಕೆ ಉತ್ತರಿಸಿದ ಕರಂದ್ಲಾಜೆ ,ನಿಮ್ಮ ಎಲ್ಲ ಆಗ್ರಹಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು. ಅರಣ್ಯದ ಬಗ್ಗೆ ನಮ್ಮ ರಾಜ್ಯದಲ್ಲಿ ಇರುವಷ್ಟು ಕಠಿಣವಾದ ನಿಯಮಗಳು ದೇಶದ ಮತ್ತೆಲ್ಲೂ ಇಲ್ಲ, ಸಾವಯವ ಕೃಷಿ ಪ್ರಮಾಣೀಕರಣವನ್ನು ವಾಣಿಜ್ಯ ಇಲಾಖೆಯಿಂದ ತೆಗೆದು ಕೃಷಿ ಇಲಾಖೆಗೆ ಸೇರಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಚರ್ಚಿಸಿತ್ತೇನೆ. ಅರಣ್ಯಭೂಮಿ ಹಕ್ಕುಪತ್ರಕ್ಕೆ 75 ವರ್ಷಗಳ ಬದಲು 15 ವರ್ಷಗಳ ದಾಖಲೆ ನೀಡುವಂತೆ ಮಾಡುವ ಸಾಧ್ಯತೆ ಬಗ್ಗೆಯೂ ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಳ್ಳ ಸಾಗಣೆ ಮಾಡುತ್ತಿದ್ದ 10 ಹಳದಿ ಅನಕೊಂಡ ಹಾವುಗಳು ವಶಕ್ಕೆ, ಓರ್ವನ ಬಂಧನ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement