ಶರದ್ ಪವಾರ್ ಗೆ ಬ್ಯಾಕ್‌ ಸ್ಟ್ಯಾಬರ್‌ ಎಂದ ಶಿವಸೇನೆ ನಾಯಕ; ಅಘಾಡಿ ಸರ್ಕಾರದ ಬಿರುಕು ಮತ್ತಷ್ಟು ಬಯಲಿಗೆ

ಮುಂಬೈ: ಕಾಂಗ್ರೆಸ್, ಎನ್ ಸಿಪಿ ಹಾಗೂ ಶಿವಸೇನೆಯ ಮಹಾರಾಷ್ಟ್ರದ ಮಹಾ ವಿಕಾಸ ಅಘಡಿ ಸರ್ಕಾರದಲ್ಲಿ‌ (Maha Vikas Aghadi ( government ) ಎಲ್ಲವೂ ಸರಿ ಇಲ್ಲ ಎನ್ನುವುದಕ್ಕೆ ಈಗ ಮತ್ತೊಂದು ಹೇಳಿಕೆ ಹೊರಬಿದ್ದಿದೆ. ಮಾಜಿ ಕೇಂದ್ರ ಸಚಿವ ಮತ್ತು ಶಿವಸೇನಾ ನಾಯಕ ಅನಂತ್ ಗೀತೆ Anant Geete) ಅವರ ಹೇಳಿಕೆ ಮಹಾರಾಷ್ಟ್ರದ ಎಂವಿಎ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಪುಷ್ಟಿ ನೀಡುತ್ತಿದೆ.
ಕಾಂಗ್ರೆಸ್ ಪಕ್ಷದ ಬೆನ್ನಿಗೆ ಇರಿದು ತಮ್ಮದೇ ಪಕ್ಷ ಕಟ್ಟಿಕೊಂಡಿರುವ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಎಂದಿಗೂ ಶಿವಸೇನೆಯವರಿಗೆ ‘ಗುರು’ ಆಗಲು ಸಾಧ್ಯವಿಲ್ಲ ಅನಂತ ಗೀತೆ ಹೇಳಿದ್ದಾರೆ. ಅಲ್ಲದೆ, ‘ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳ ಮಹಾ ವಿಕಾಸ ಅಘಾಡಿ (ಎಂವಿಎ) ಸರ್ಕಾರವು ಕೇವಲ ‘ಹೊಂದಾಣಿಕೆ’ ಅಷ್ಟೆ ಎಂದು ವ್ಯಾಖ್ಯಾನಿಸಿದ್ದಾರೆ‌. ಇದು ಮಹಾರಾಷ್ಟ್ರ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಗಿದೆ.
2014ರಿಂದ 2019ರವರೆಗೆ ಅಧಿಕಾರ ಹಂಚಿಕೊಂಡಿದ್ದ ಶಿವಸೇನೆ (Shivasene) ಮತ್ತು ಬಿಜೆಪಿ (BJP) ನಡುವಿನ ಬಿರುಕನ್ನು ಸದುಪಯೋಗ ಮಾಡಿಕೊಂಡು 2019ರ ವಿಧಾನಸಭಾ ಚುನಾವಣೆಯ ನಂತರ ಮಹಾರಾಷ್ಟ್ರದಲ್ಲಿ ರಚನೆಯಾದ ಕಾಂಗ್ರೆಸ್, ಎನ್ ಸಿಪಿ ಹಾಗೂ ಶಿವಸೇನೆ ಮೈತ್ರಿಯ ಮಹಾ ವಿಕಾಸ ಅಘಾಡಿ ಸರ್ಕಾರದ ಮುಖ್ಯ ಆಂಕರ್ ಎಂದು ಶರದ್ ಪವಾರ್ ಅವರ ಬಗ್ಗೆ ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಶಿವಸೇನೆಯ ನಾಯಕ ಅನಂತ ಗೀತೆ ಈಗ ನೀಡಿರುವ ಹೇಳಿಕೆ ನೇರವಾಗಿ ಶರದ್ ಪವಾರ್ ಅವರನ್ನೇ ಗುರಿಯಾಗಿರಿಸಿಕೊಂಡಿರುವುದರಿಂದ ‘ಹೊಸ ಸಾಧ್ಯತೆಗಳ’ ಬಗೆಗಿನ ಚರ್ಚೆಗಳು ಮತ್ತೆ ಗರಿಗೆದರಿವೆ. ಅಂದರೆ ಶಿವಸೇನೆ ಹಾಗೂ ಬಿಜೆಪಿ ಮೈತ್ರಿ (Alliance) ಚರ್ಚೆಗೆ ಮತ್ತೆ ಗ್ರಾಸ ಒದಗಿಸಿದೆ.
ಇಲ್ಲಿನ ರಾಯಗಡದಲ್ಲಿ ನಡೆದ ಸಾರ್ವಜನಿಕ ಸಮಾರಂಭ ಉದ್ದೇಶಿಸಿ ಮಾತನಾಡಿದ ಅನಂತ್ ಗೀತೆ , “ಶರದ್ ಪವಾರ್ ಎಂದಿಗೂ ನಮ್ಮ ನಾಯಕರಾಗಲು ಸಾಧ್ಯವಿಲ್ಲ ಏಕೆಂದರೆ ಈ ಸರ್ಕಾರ (ಎಂವಿಎ) ಕೇವಲ ಹೊಂದಾಣಿಕೆಯದ್ದಾಗಿದೆ. ಜನರು ಶರದ್ ಪವಾರ್‌ ಕುರಿತು ಅನೇಕ ಗೌರವಾರ್ಥಕ ಪದಗಳನ್ನು ಬಳಸಲಿ, ಆದರೆ ನಮ್ಮ ‘ಗುರು’ ಮಾತ್ರ ದಿವಂಗತ ಬಾಳಾಸಾಹೇಬ್ ಠಾಕ್ರೆ (Late Balasaheb Thackeray) ಎಂದು ಅನಂತ್‌ ಗೀತೆ ಹೇಳಿದ್ದಾರೆ.
“ಈ ಸರ್ಕಾರವು ಕಾರ್ಯನಿರ್ವಹಿಸುವವರೆಗೂ, ಅದು ಮುಂದುವರಿಯುತ್ತದೆ. ನಾವು ಬೇರೆಯಾದರೆ, ನಮ್ಮ ಮನೆ ಶಿವಸೇನೆ ಮತ್ತು ನಾವು ಯಾವಾಗಲೂ ನಮ್ಮ ಪಕ್ಷದ ಜೊತೆ ಇರುತ್ತೇವೆ’ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ರಾಯಗಡದ ಮಾಜಿ ಸಂಸದರೂ ಆಗಿರುವ ಅನಂತ ಗೀತೆ ಅವರು, ತಾವು ಶಿವಸೇನೆ ನೇತೃತ್ವದ ಸರ್ಕಾರದ ಬಗ್ಗೆ ಯಾವುದೇ ಕೆಟ್ಟ ಉದ್ದೇಶ ಹೊಂದಿಲ್ಲ. ಅದು ಯಶಸ್ವಿ ಆಗಬೇಕೆಂದು ಬಯಸುವವನೇ ಆಗಿದ್ದೇನೆ. ಆದರೆ ಶರದ್ ಪವಾರ್ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದು ತಮ್ಮದೇ ಪಕ್ಷವನ್ನು ಸ್ಥಾಪಿಸಿದರು.‌ ಸೋನಿಯಾ ಗಾಂಧಿ ಮುನ್ನಡೆಸಬಾರದೆಂದು ಸಿಡಿದು 1999ರ ಮೇ 25ರಂದು ಶರದ್ ಪವಾರ್, ಪಿಎ ಸಂಗ್ಮಾ ಮತ್ತು ತಾರೀಕ್ ಅನ್ವರ್ ಸ್ಥಾಪಿಸಿದರು.
ಈ ಕಅರಣದಿಂದ ಕಾಂಗ್ರೆಸ್ ಮತ್ತು ಎನ್‌ಸಿಪಿ ಯಾವಾಗಲೂ ಸೌಹಾರ್ದಯುತವಾಗಿರಲು ಸಾಧ್ಯವಿಲ್ಲ. ನಂತರ ಎನ್‌ಸಿಪಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ (UPA Government) ಭಾಗವಾಯಿತು. ಅದರಲ್ಲಿ ಶರದ್ ಪವಾರ್ ಕೃಷಿ ಮಂತ್ರಿಯಾದರು. ಇವರನ್ನುನಾವು ಗುರು ಎಂದು‌ ಸ್ವೀಕರಿಸಲು ಸಾಧ್ಯವಿಲ್ಲ ಎಂದು ಶರದ್ ಪವಾರ್ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸಿದ್ದಾರೆ.

ಪ್ರಮುಖ ಸುದ್ದಿ :-   ಕೋಟಕ್‌ ಮಹೀಂದ್ರಾ ಬ್ಯಾಂಕಿಗೆ ಆರ್‌ಬಿಐ ನಿರ್ಬಂಧ : ಹೊಸ ಗ್ರಾಹಕರ ಆನ್‌ಲೈನ್‌ ಸೇರ್ಪಡೆ, ಹೊಸ ಕ್ರೆಡಿಟ್‌ ಕಾರ್ಡ್‌ ವಿತರಣೆಗೆ ಬ್ರೇಕ್‌

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement