ಧಾರ್ಮಿಕ ಕೇಂದ್ರಗಳ ತೆರವು ತಡೆಗೆ ಸರ್ಕಾರದಿಂದ ಹೊಸ ವಿಧೇಯಕ ಮಂಡನೆ

ಬೆಂಗಳೂರು: ರಾಜ್ಯದ ಸಾರ್ವಜನಿಕ ಸ್ಥಳಗಳಲ್ಲಿರುವ ದೇವಾಲಯಗಳನ್ನು ತೆರವು ಮಾಡುವ ವಿಚಾರ ವಿವಾದಕ್ಕೆ ಎಡೆ ಮಾಡಿಕೊಟ್ಟಿರುವ ಬೆನ್ನಲ್ಲೇ ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಕೇಂದ್ರಗಳನ್ನು ಸಂರಕ್ಷಿಸಲು ಹೊಸ ವಿಧೇಯಕ ಕರ್ನಾಟಕ ಧಾರ್ಮಿಕ ಕಟ್ಟಡಗಳ ವಿಧೇಯಕ-೨೦೨೧ ವಿಧಾನಸಭೆಯಲ್ಲಿ ಮಂಡಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿರುವ ದೇಗುಲಗಳನ್ನು ತೆರವು ಮಾಡದಿರುವ ತೀರ್ಮಾನ ಕೈಗೊಳ್ಳಲಾಗಿದ್ದು, ಸಾರ್ವಜನಿಕ ಸ್ಥಳಗಳಲ್ಲಿರುವ ಧಾರ್ಮಿಕ ಕೇಂದ್ರಗಳ ಸಂರಕ್ಷಣೆಗೆ ಪ್ರತ್ಯೇಕ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ.
ದೇವಾಲಯಗಳ ರಕ್ಷಣೆಗೆ ಹೊಸ ಕಾಯ್ದೆ ರೂಪಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆದು ಹೊಸ ವಿಧೇಯಕ ಮಂಡಿಸಲಾಗಿದ್ದು, ಈ ನೂತನ ಕಾಯ್ದೆಯಲ್ಲಿ ದೇಗುಲ ಮತ್ತು ಧಾರ್ಮಿಕ ಸ್ಥಳಗಳನ್ನು ಸಂರಕ್ಷಿಸುವ ಅಂಶಗಳಿವೆ ಎಂದು ಹೇಳಲಾಗಿದೆ.
ಈ ಮೊದಲು ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿರುವ ದೇಗುಲಗಳ ತೆರವಿಗೆ ಸಂಬಂಧಿಸಿದಂತೆ ಹೈಕೋರ್ಟ್ ನೀಡಿರುವ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ತೀರ್ಮಾನಿಸಿತ್ತು. ಆದರೆ ಅದರ ಬದಲು ಹೊಸ ಕಾಯ್ದೆ ಜಾರಿ ಮಾಡುವುದು ಸೂಕ್ತ ಎಂಬ ಕಾನೂನು ತಜ್ಞರ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ರಾಜ್ಯದಲ್ಲಿ ದೇವಾಲಯಗಳ ತೆರವು ವಿಚಾರ ವಿವಾದದ ಸ್ವರೂಪ ಪಡೆದು ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ಹಿಂದೂಪರ ಸಂಘಟನೆಗಳು ಆಕ್ರೋಶ ಹೊರ ಹಾಕಿದ್ದವು. ಈಗ ಹೊಸ ವಿಧೇಯಕ ಮಂಡನೆ ಮಾಡುವ ಮೂಲಕ ಸರ್ಕಾರ ದೇವಾಲಯಗಳ ಸಂರಕ್ಷಣೆಗೆ ಮುಂದಾಗಿದೆ.
ಇದರಡಿಯಲ್ಲಿ ಏನೇ ನಿಯಮಗಳಿದ್ದರೂಯಾವುದೇ ಕೋರ್ಟ್‌, ನ್ಯಾಯಾಧಿರಕಣ ಅಥವಾ ಪ್ರಾಧಿಕಾರಗಳು ಯಾವುದೇ ತೀರ್ಪು ನೀಡಿದ್ದರೂ ಸರ್ಕಾರ ಈಗ ಮಂಡಿಸಿರುವ ಹೊಸ ವಿಧೇಯಕದಿಂದ ಇವುಗಳಿಗೆ ರಕ್ಷಣೆ ಸಿಗಲಿದೆ ಎಂದು ಹೇಳಲಾಗಿದೆ.
ನಂಜನಗೂಡಿನಲ್ಲಿ ತೆರವುಗೊಳಿಸಿರುವ ಹುಚ್ಚುಗಣಿ ದೇವಿಯ ದೇವಸ್ಥಾನವನ್ನು ಮರು ನಿರ್ಮಾಣದ ಹೊಣೆಯನ್ನು ಬಿಜೆಪಿ ಪಕ್ಷವೇ ಹೊರಲಿದ್ದು, ಬಿಜೆಪಿಯೇ ನಂಜನಗೂಡಿನಲ್ಲಿ ಈ ದೇವಾಲಯದ ಮರು ನಿರ್ಮಾಣ ಕಾರ್ಯ ಮಾಡಲಿದೆ ಎಂದು ಹೇಳಲಾಗಿದೆ

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement