ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಭಾನುವಾರ ಸಂಪುಟ ವಿಸ್ತರಣೆ ಮಾಡಿದ್ದು, 15 ಶಾಸಕರು ಪಂಜಾಬ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇವರಲ್ಲಿ ಏಳು ಹೊಸ ಮುಖಗಳು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಬ್ರಹ್ಮ ಮೊಹಿಂದ್ರಾ, ಮನ್ ಪ್ರೀತ್ ಸಿಂಗ್ ಬಾದಲ್ ಮೊಹಿಂದ್ರಾ , ಟ್ರಿಪ್ಟ್ ರಾಜಿಂದರ್ ಸಿಂಗ್ ಬಾಜ್ವಾ, ಅರುಣಾ ಚೌಧರಿ ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಸುಖಬಿಂದರ್ ಸಿಂಗ್ ಸರ್ಕಾರಿಯಾ, ಶಾಸಕ ಗುರ್ಜಿತ್ ಸಿಂಗ್ ರಾಣಾ ಕೂಡ ಪಂಜಾಬ್ ಕ್ಯಾಬಿನೆಟ್ ಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ.
ಕಪುರ್ತಲಾ ಪ್ರತಿನಿಧಿಸುವ ಶಾಸಕ ಗುರ್ಜಿತ್ ಸಿಂಗ್, ಪಂಜಾಬ್ ರಾಜ್ಯ ಸಂಪುಟಕ್ಕೆ ಸೇರ್ಪಡೆಯಾಗುವುದಕ್ಕೆ ಹಲವಾರು ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ. ಶಾಸಕ ಗುರ್ಜಿತ್ ಸಿಂಗ್ ಈ ಹಿಂದಿನ ಅಮರೀಂದರ್ ಸರ್ಕಾರದಲ್ಲಿ ಸಚಿವರಾಗಿದ್ದರು. ಆದರೆ 2018 ರಲ್ಲಿ ಅವರ ವಿರುದ್ದ ಮರಳು ಗಣಿಗಾರಿಕೆಯ ಹರಾಜಿನಲ್ಲಿ ಹಗರಣದ ಆರೋಪ ಕೇಳಿ ಬಂದಿದ್ದು, ಈ ಹಿನ್ನೆಲೆ ರಾಜೀನಾಮೆ ನೀಡಿದ್ದಾರೆ. ಈಗ ಮತ್ತೆ ಹಗರಣದ ಆರೋಪವಿರು ಗುರ್ಜಿತ್ ಸಿಂಗ್ರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿರುವ ವಿವಾದಕ್ಕೆ ಕಾರಣವಾಗಿದೆ.
ಗುರ್ಜಿತ್ ಸಿಂಗ್ರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡುವುದನ್ನು ಆರು ಪಂಜಾಬ್ ಶಾಸಕರು ತೀವ್ರವಾಗಿ ವಿರೋಧಿಸಿದ್ದಾರೆ. ಹಾಗೆಯೇ ಪಂಜಾಬ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಮಹೀಂದರ್ ಸಿಂಗ್ ಕೂಡಾ ಗುರ್ಜಿತ್ ಸಿಂಗ್ರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಆರು ಶಾಸಕರು ಹಾಗೂ ಪಂಜಾಬ್ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಮಹೀಂದರ್ ಸಿಂಗ್ ಭಾನುವಾರ ಗುರ್ಜಿತ್ ಸಿಂಗ್ರನ್ನು ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡುವುದನ್ನು ವಿರೋಧ ಮಾಡಿ ಕಾಂಗ್ರೆಸ್ ಪಂಜಾಬ್ ರಾಜ್ಯ ಮುಖ್ಯಸ್ಥ ನವ್ಜೋತ್ ಸಿಂಗ್ ಸಿಧು ಹಾಗೂ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿಗೆ ಪತ್ರ ಬರೆದಿದ್ದಾರೆ.
ಶಾಸಕಿ ರಜಿಯಾ ಸುಲ್ತಾನಾ, ಅಮರಿಂದರ್ ಸಿಂಗ್ ರಾಜಾ ವಾರಿಂಗ್, ನವಜೋತ್ ಸಿಂಗ್ ಸಿಧು ಆಪ್ತ ಪರ್ಗತ್ ಸಿಂಗ್, ರಾಜ್ ಕುಮಾರ್ ವರ್ಕಾ ಮತ್ತು ಸಂಗತ್ ಸಿಂಗ್ ಗಿಲ್ಜಿಯಾನ್, ಗುರ್ಕೀರತ್ ಕೊಟ್ಲಿ ಪಂಜಾಬ್ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಇತ್ತೀಚೆಗೆ ಪಂಜಾಬ್ ಮುಖ್ಯಮಂತ್ರಿ ಸ್ಥಾನದಿಂದ ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಲವಾರು ತಿಂಗಳುಗಳಿಂದ ಪಂಜಾಬ್ನಲ್ಲಿ ನಾಯಕತ್ವದ ವಿಚಾರದಲ್ಲಿ ಉಂಟಾಗಿದ್ದ ಬಿಕ್ಕಟ್ಟು ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಾರ್ಕಿಕ ಅಂತ್ಯ ಕಂಡಿತ್ತು.ಆ ಬಳಿಕ ಚರಂಜಿತ್ ಸಿಂಗ್ ಚನ್ನಿರನ್ನು ಮುಖ್ಯಮಂತ್ರಿ ಆಗಿ ಆಯ್ಕೆ ಮಾಡಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ