ನವದೆಹಲಿ: ನಾನು ಬಿಜೆಪಿಗೆ ಸೇರುತ್ತಿಲ್ಲ, ಆದರೆ ಖಂಡಿತವಾಗಿಯೂ ಕಾಂಗ್ರೆಸ್ ತೊರೆಯುತ್ತೇನೆ ಎಂದು ಪಂಜಾಬ್ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಚುನಾವಣೆಗೆ ನಾಲ್ಕು ತಿಂಗಳಿರುವಾಗ, ಪಂಜಾಬ್ ಮುಖ್ಯಮಂತ್ರಿಯಿಂದ ರಾಜೀನಾಮೆ ನೀಡಬೇಕಾಗಿ ಬಂದ ನಂತರದ ಪರಿಸ್ಥಿತಿ ಬಗ್ಗೆ ಅವರು ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಇಲ್ಲಿಯವರೆಗೆ ನಾನು ಕಾಂಗ್ರೆಸ್ನಲ್ಲಿದ್ದೇನೆ ಆದರೆ ನಾನು ಕಾಂಗ್ರೆಸ್ನಲ್ಲಿ ಉಳಿಯುವುದಿಲ್ಲ. ನನ್ನನ್ನು ಈ ರೀತಿಯಾಗಿ ನಡೆಸಿಕೊಳ್ಳುವುದನ್ನು ನಾನು ಸಹಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಒಂದು ದಿನದ ನಂತರ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹೇಳಿದ್ದಾರೆ.
ಪಂಜಾಬ್ನಲ್ಲಿ ಕಾಂಗ್ರೆಸ್ ಕುಸಿಯುತ್ತಿದೆ ಎಂದು ಹೇಳಿದ ಅವರು ನವಜೋತ್ ಸಿಂಗ್ ಸಿಧು ಅವರನ್ನು “ಬಾಲಿಶ ವ್ಯಕ್ತಿ” ಎಂದು ಕರೆದಿದ್ದಾರೆ.
ನಾನು 52 ವರ್ಷಗಳಿಂದ ರಾಜಕೀಯದಲ್ಲಿದ್ದೇನೆ. ಆದರೆ ನನ್ನನ್ನು ನಡೆಸಿಕೊಂಡ ರೀತಿ ಬಗ್ಗೆ ಏನು ಹೇಳಬೇಕು. ಬೆಳಿಗ್ಗೆ 10:30 ಕ್ಕೆ ನೀವು ರಾಜೀನಾಮೆ ನೀಡುತ್ತೀರಿ ಎಂದು ಕಾಂಗ್ರೆಸ್ ಅಧ್ಯಕ್ಷರು ಹೇಳುತ್ತಾರೆ. ನಾನು ಯಾವುದೇ ಪ್ರಶ್ನೆಗಳನ್ನು ಕೇಳಲಿಲ್ಲ. ಸಂಜೆ 4 ಗಂಟೆಗೆ ನಾನು ರಾಜ್ಯಪಾಲರ ಬಳಿ ಹೋಗಿ ರಾಜೀನಾಮೆ ನೀಡಿದ್ದೇನೆ. 50 ವರ್ಷಗಳ ನಂತರ ನಿಮಗೆ ಅನುಮಾನವಿದ್ದರೆ ಮತ್ತು ನನ್ನ ವಿಶ್ವಾಸಾರ್ಹತೆ ಬಗ್ಗೆ ನಂಬಿಕೆ ಇಲ್ಲದಿದ್ದರೆ, ನಾನು ಪಕ್ಷದಲ್ಲಿ ಉಳಿಯುವುದರಲ್ಲಿ ಅರ್ಥವೇನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಪಕ್ಷದಿಂದ ನನಗೆ ಮೂರು ಬಾರಿ ಅವಮಾನ ಮಾಡಲಾಗಿದೆ ಎಂದು ಅಮರಿಂದರ್ ಸಿಂಗ್ ಈ ಮೊದಲು ಸೋನಿಯಾ ಗಾಂಧಿಗೆ ಹೇಳಿದ್ದರು.
ನಾನು ಕಾಂಗ್ರೆಸ್ಸಿಗೆ ನನ್ನ ನಿಲುವನ್ನು ಸ್ಪಷ್ಟಪಡಿಸಿದ್ದೇನೆ, ನನ್ನನ್ನು ಈ ರೀತಿ ನಡೆಸುಕೊಳ್ಳುವುದನ್ನು ನಾನು ಸಹಿಸಿಕೊಳ್ಳುವುದಿಲ್ಲ ಎಂದು ನನ್ನ ನಿಲುವನ್ನು ನಾನು ಸ್ಪಷ್ಟಪಡಿಸಿದ್ದೇನೆ. ನಾನು ಕಾಂಗ್ರೆಸ್ಗೆ ರಾಜೀನಾಮೆ ನೀಡಿಲ್ಲ, ಆದರೆ ನನ್ನ ನಂಬಿಕೆ ಬಗ್ಗೆ ಅಪನಂಬಿಕೆಯಿದೆಯೋ ಅಲ್ಲಿ ನಾನು ಹೇಗೆ ಮುಂದುವರಿಯುವುದು ಎಂದು ಅವರು ಕೇಳಿದ್ದಾರೆ.
ಇದೇ ವೇಳೆ ತಾನು ಬಿಜೆಪಿಯನ್ನೂ ಸೇರುತ್ತಿಲ್ಲ ಎಂದು ಅಮರಿಂದರ್ ಸಿಂಗ್ ಹೇಳಿದರು.
ಅಮರಿಂದರ್ ಸಿಂಗ್ ಪ್ರತಿಸ್ಪರ್ಧಿ ನವಜೋತ್ ಸಿಂಗ್ ಸಿಧು, ಮುಖ್ಯಮಂತ್ರಿಯ ಅಮರಿಂದರ್ ಸಿಂಗ್ ಕೆಳಗಿಳಿಯುವಂತೆ ಮಾಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು, ಆದರೆ ಮಂಗಳವಾರ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡುವ ಮೂಲಕ ಪಕ್ಷವನ್ನು ದಿಗ್ಭ್ರಮೆಗೊಳಿಸಿದರು.
ನಿಮ್ಮ ಕಾಮೆಂಟ್ ಬರೆಯಿರಿ