ಮುಂಬೈ : ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ಗೆ ಸದ್ಯಕ್ಕೆ ಬಿಡುಗಡೆ ಭಾಗ್ಯವಿಲ್ಲ. ಡ್ರಗ್ಸ್ ಪ್ರಕರಣದಲ್ಲಿ ಬಂಧಿತನಾಗಿರುವ ಆರ್ಯನ್ ಖಾನ್ಗೆ ಕಿಲ್ಲಾ ನ್ಯಾಯಾಲಯ ಅಕ್ಟೋಬರ್ 9ರ ವರೆಗೆ ಎನ್ಸಿಬಿ ಕಸ್ಟಡಿಗೆ ವಹಿಸಿ ಆದೇಶ ಮಾಡಿದೆ. ಜಾಮೀನು ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಶಾರೂಖ್ ಖಾನ್ ದಂಪತಿಗೆ ನಿರಾಸೆಯಾಗಿದೆ.
ಮುಂಬೈ ಸಮುದ್ರದ ಮಧ್ಯದಲ್ಲಿ ಹಡಗಿನಲ್ಲಿ ನಡೆದಿದ್ದ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾರೂಖ್ ಖಾನ್ ಪುತ್ರ ಸೇರಿ ೧೬ ಮಂದಿಯನ್ನು ಎನ್ಸಿಬಿ ಅಧಿಕಾರಿಗಳು ಬಂಧಿಸಿದ್ದರು. ಆರ್ಯನ್ ಖಾನ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ದ ಎನ್ಸಿಬಿ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಇಂದು (ಗುರುವಾರ) ಕಿಲ್ಲಾ ನ್ಯಾಯಾಲಯಕ್ಕೆ ಆರೋಪಿಗಳನ್ನು ಕರೆತರಲಾಗಿತ್ತು. ಆರ್ಯನ್ ಪರ ವಕೀಲರು ಆರ್ಯನ್ಗೆ ಜಾಮೀನು ನೀಡುವಂತೆ ಮನವಿ ಮಾಡಿದರು.
ಆರ್ಯನ್ ಪರ ವಕೀಲರು ಜಾಮೀನಿಗಾಗಿ ಮನವಿ ಮಾಡುತ್ತಿದ್ದಂತೆಯೇ ಎನ್ಸಿಬಿ ಇನ್ನೂ ಹಲವು ದಿನಗಳ ಕಾಲ ಕಸ್ಟಡಿ ಅವಶ್ಯಕತೆ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿದರು. ಕನಿಷ್ಠ ಅಕ್ಟೋಬರ್ 11ರ ವರೆಗೆ ಕಸ್ಟಡಿಗೆ ನೀಡುವಂತೆ ಕೇಳಿಕೊಂಡಿದ್ದು, ಅಂತಿಮವಾಗಿ ಕಿಲ್ಲಾ ಕೋರ್ಟ್ ಅಕ್ಟೋಬರ್ 9ರ ವರೆಗೆ ಆರ್ಯನ್ ಖಾನ್ ಸೇರಿದಂತೆ ಮೂವರು ಆರೋಪಿಗಳನ್ನು ಎನ್ಸಿಬಿ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿದೆ.
ಆರ್ಯನ್ ಖಾನ್ಗೆ ಅಂಚಿತ್ ಜೊತೆ ಡ್ರಗ್ಸ್ ಲಿಂಕ್ ಇರುವುದು ದೃಢಪಟ್ಟಿದೆ ಎನ್ನಲಾಗುತ್ತಿದೆ. ತಾಂತ್ರಿಕ ಸಾಕ್ಷ್ಯಗಳನ್ನು ಇಟ್ಟುಕೊಂಡು ವಿಚಾರಣೆಯನ್ನು ನಡೆಸುತ್ತಿರುವ ಎನ್ಸಿಬಿ ಅಧಿಕಾರಿಗಳು ಮಹತ್ವದ ಸಾಕ್ಷ್ಯಗಳನ್ನು ಕಲೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಜಾಮೀನು ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಶಾರೂಖ್ ಖಾನ್ ದಂಪತಿಗೆ ನಿರಾಸೆಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ