ಮದುವೆಗೆ ಬಟ್ಟೆ ಖರೀದಿಸಲು ಹೋಗುತ್ತಿದ್ದಾಗ ಅಪಘಾತ: ಮದುಮಗ ಸೇರಿ ಮೂವರು ಸಾವು, ನಾಲ್ವರಿಗೆ ಗಾಯ

ಮೈಸೂರು: ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಗೂಡ್ಸ್‌ ಆಟೋ ನಡುವೆ ಅಪಘಾತ ಸಂಭವಿಸಿ, ದಸರಾ ದೀಪಾಲಂಕಾರ ನೋಡಲು ಬರುತ್ತಿದ್ದ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಭಾನುವಾರ ನಡೆದಿದೆ ಎಂದು ವರದಿಯಾಗಿದೆ.
ಇಮ್ರಾನ್ ಪಾಷಾ (30), ಯಾಸ್ಮಿನ್ (28), ಅಫ್ನಾನ್ (2) ಮೃತಪಟ್ಟವರು ಎಂದು ಗುರುತಿಸಲಾಗಿದೆ. ಇಮ್ರಾನ್‌ ಪಾಷಾ ಅವರಿಗೆ ಮದುವೆ ನಿಶ್ಚಯವಾಗಿತ್ತು. ನಗರದಲ್ಲಿ ಬಟ್ಟೆ ಖರೀದಿಸಿ, ದೀಪಾಲಂಕಾರ ನೋಡಿಕೊಂಡು ಹೋಗಲು ಆಟೋ ರಿಕ್ಷಾದಲ್ಲಿ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.
ವರಕೋಡು ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆ ಸಮೀಪದ ತಿರುವಿನಲ್ಲಿ ಅಪಘಾತ ನಡೆದಿದ್ದು, ಗೂಡ್ಸ್‌ ಆಟೋದಲ್ಲಿದ್ದ ಇನ್ನೂ ನಾಲ್ವರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗೂಡ್ಸ್‌ ಆಟೋದಲ್ಲಿದ್ದವರು ತಿ.ನರಸೀಪುರದಿಂದ ಮೈಸೂರಿಗೆ ಲೈಟಿಂಗ್ಸ್ ನೋಡಲು ಬರುತ್ತಿದ್ದರು. ಈ ವೇಳೆ ಮೈಸೂರಿನಿಂದ ನರಸೀಪುರದ ಕಡೆಗೆ ಹೋಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ಗೆ ಆಟೋ ಡಿಕ್ಕಿ ಹೊಡೆದಿದೆ.

ನಿಮ್ಮ ಕಾಮೆಂಟ್ ಬರೆಯಿರಿ

advertisement