ಬೆಂಗಳೂರು: ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರಿನ ಪ್ರಯಾಣಿಕರೊಬ್ಬರಿಗೆ ತೀವ್ರ ಉಸಿರಾಟದ ಸಮಸ್ಯೆ ಉಂಟಾಗಿ, ಪ್ರಜ್ಞೆ ತಪ್ಪಿದ ಕಾರಣ ಅವರಿಗೆ ತುರ್ತಾಗಿ ವೈದ್ಯಕೀಯ ಚಿಕಿತ್ಸೆ ಕೊಡಿಸಲು ವಿಮಾನವನ್ನು ಇಂದೋರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಲಾಯಿತು. ಆದರೆ ಇಂದೋರ್ ವಿಮಾನ ನಿಲ್ದಾಣದಿಂದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಮೃತಪಟ್ಟ ಘಟನೆ ವರದಿಯಾಗಿದೆ.
ವಿಸ್ತಾರ ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರನ್ನು ಮನೋಜಕುಮಾರ್ ಅಗರ್ವಾಲ್ ಎಮದು ಗುರುತಿಸಲಾಗಿದೆ. 50 ವರ್ಷದ ಮನೋಜಕುಮಾರ್ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸುತ್ತಿದ್ದರು. ನಿನ್ನೆ (ಗುರುವಾರ) ರಾತ್ರಿ 9.30ಕ್ಕೆ ವಿಮಾನ ಇಂದೋರ್ನಲ್ಲಿ ವಿಮಾನವನ್ನು ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಿ, ಆಸ್ಪತ್ರೆಗೆ ಸೇರಿಸಿದರೂ ಪ್ರಯಾಣಿಕ ಬದುಕಲಿಲ್ಲ.
ಮನೋಜ್ ಕುಮಾರ್ ಉದ್ಯಮಿಯಾಗಿದ್ದು, ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದ ಅವರು ವಾಪಸ್ ದೆಹಲಿಗೆ ಹೊರಟಿದ್ದರು. ಬೆಂಗಳೂರಿನಿಂದ ಪ್ರಯಾಣಿಸುತ್ತಿದ್ದ ಮನೋಜ್ ಕುಮಾರ್ ಅಗರವಾಲ್ ಇದ್ದಕ್ಕಿದ್ದಂತೆ ಉಸಿರಾಟದ ತೊಂದರೆಯಾಗಿ ಈ ಬಗ್ಗೆ ವಿಮಾನದ ಸಿಬ್ಬಂದಿಗೆ ಮಾಹಿತಿ ನೀಡಿದರು. ತಕ್ಷಣ ಅವರು ಪ್ರಜ್ಞೆ ತಪ್ಪಿದರು. ಹೀಗಾಗಿ, ಪೈಲಟ್ ವಿಮಾನವನ್ನು ಇಂದೋರ್ನತ್ತ ತಿರುಗಿಸಿದರು. ತಕ್ಷಣ ಮನೋಜ್ ಕುಮಾರ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲೇ ಅವರು ಮೃತಪಟ್ಟಿದ್ದರು ಎಂದು ಇಂದೋರ್ ವಿಮಾನ ನಿಲ್ದಾಣದ ಉಸ್ತುವಾರಿ ನಿರ್ದೇಶಕ ಪ್ರಮೋದ್ ಕುಮಾರ್ ಶರ್ಮಾ ತಿಳಿಸಿದ್ದಾರೆ.ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ