ಪ್ರೀತಿಸಿ ಮದುವೆಯಾದ ತಂಗಿಯನ್ನು ಕೊಚ್ಚಿ ಕೊಲೆ ಮಾಡಿದ ಅಣ್ಣ,ತಾನೇ ಠಾಣೆಗೆ ಬಂದು ಶರಣು..

ನವಲಗುಂದ: ಮನೆಯವರು ಮಾತು ಕೇಳದೆ ಪ್ರೀತಿಸಿ ಬೇರೆ ಸಮುದಾಯದ ಯುವಕನೊಂದಿಗೆ ಮದುವೆಯಾಗಿದ್ದ ತಂಗಿಯನ್ನು ಸ್ವಂತ ಸಹೋದರನೇ ಮಂಗಳವಾರ ಮಧ್ಯಾಹ್ನ ಕೊಲೆ ಮಾಡಿದ ಘಟನೆ ವರದಿಯಾಗಿದೆ.
ಯಾರೂ ಇಲ್ಲದ ಸಮಯ ನೋಡಿ ತಂಗಿಯ ಗಂಡನ ಮನೆಗೆ ನುಗ್ಗಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರದಿಂದ ಬರ್ಬರವಾಗಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಶಿಕಲಾ(32) ಬರ್ಬರವಾಗಿ ಕೊಲೆಯಾದವಳು. ಕಳೆದ 9 ದಿನದ ಹಿಂದಷ್ಟೆ ಶಶಿಕಲಾ, ರವಿ ಪಾಠಕ ಎಂಬವರನ್ನು ಪ್ರೀತಿಸಿ ಹುಬ್ಬಳ್ಳಿಯ ಸಿದ್ಧಾರೂಡ ಮಠದಲ್ಲಿ ಮದುವೆಯಾಗಿ ದಾಂಪತ್ಯಕ್ಕೆ ಕಾಲಿಟ್ಟಿದ್ದಳು. ಈ ವಿಷಯ ಶಶಿಕಲಾ ಅವರ ಮನೆಯವರಿಗೆ ಗೊತ್ತಾಗಿರಲಿಲ್ಲ. ನಿಮ್ಮ ಅಕ್ಕ ಬೇರೊಬ್ಬ ಜಾತಿಯ ಯುವಕನೊಂದಿಗೆ ಮದುವೆಯಾಗಿದ್ದಾಳೆಂದು ಶಶಿಕಲಾ ಸಹೋದರ ಮಹಾಂತೇಶಗೆ ಗೆಳೆಯರಿಂದ ತಿಳಿದಿದೆ. ಮಹಾಂತೇಶ ಕೆಂಡಾಮಂಡಲನಾಗಿದ್ದ. ಸಹೋದರಿಯ ಗಂಡನ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ನೋಡಿಕೊಂಡು ಸಹೋದರಿ ಶಶಿಕಲಾಗೆ ಖಾರದ ಪುಡಿ ಎರಚಿ ಬರ್ಬರವಾಗಿ ಮಚ್ಚಿನಿಂದ ಕೊಲೆ ಮಾಡಿ, ಸ್ವತಃ ತಾನೆ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲವಾದರು, ತಂಗಿಯ ಹೆಸರಿಗಿದ್ದ ಆಸ್ತಿಗಾಗಿಯೋ ಅಥವಾ ಮರ್ಯಾದೆಗಾಗಿ ಕೊಲೆ ಮಾಡಲಾಗಿದೆಯೋ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಬೇಕಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ಚಂದ್ರಶೇಖರ ಮಠಪತಿ, ಪಿಎಸ್‍ಐ ಕಲ್ಮೇಶ ಬನ್ನೂರ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ : ಕರ್ನಾಟಕದ ಮೊದಲ ಹಂತದಲ್ಲಿ ಶೇ. 69.23 ಮತದಾನ ; 14 ಕ್ಷೇತ್ರಗಳ ಮತದಾನದ ಪ್ರಮಾಣದ ವಿವರ...

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement