ಜೆಎಸ್‌ಎಸ್‌ ಅಂಗಸ್ಥೆಗಳ 28 ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಡಾ.ವೀರೇಂದ್ರ ಹೆಗ್ಗಡೆ ಸನ್ಮಾನ

ಧಾರವಾಡ: ಜೆ.ಎಸ್.ಎಸ್ ಶಿಸ್ತು ಹಾಗೂ ಗುಣಮಟ್ಟದ ಶಿಕ್ಷಣಕ್ಕೆ ಹೆಸರುವಾಸಿಯಾದ ಸಂಸ್ಥೆ, ಇಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದೊಂದಿಗೆ, ಉತ್ತಮ ವ್ಯಕ್ತಿತ್ವ ಹಾಗೂ ಮಾನವೀಯ ಮೌಲ್ಯಗಳನ್ನು ಕಲಿಸಿಕೊಡಲಾಗುತ್ತದೆ ಆದ್ದರಿಂದ ಇಲ್ಲಿ ಪ್ರತಿ ವಿದ್ಯಾರ್ಥಿಯ ಭವಿಷ್ಯ ಉಜ್ವಲಾವಾಗುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ಜೆ.ಎಸ್.ಎಸ್ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಜೆ.ಎಸ್.ಎಸ್ ಎಂಬಿಎ ಸಭಾಭವನದಲ್ಲಿ ಜೆ.ಎಸ್.ಎಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ೨೦೧೯-೨೦ನೇ ಸಾಲಿನಲ್ಲಿ ಕರ್ನಾಟಕ ವಿಶ್ವ ವಿದ್ಯಾಲಯಕ್ಕೆ ರ‍್ಯಾಂಕುಗಳನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಬಂಗಾರದ ಪದಕಗಳನ್ನು ಮತ್ತು ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದಿಸಿ ಅವರು ಮಾತನಾಡಿದರು.
೧೯೭೩ ರಲ್ಲಿ ಧರ್ಮಸ್ಥಳ ಸಂಸ್ಥೆಯು ಜೆ.ಎಸ್.ಎಸ್ ನ ಚುಕ್ಕಾಣಿ ಹಿಡಿದಾಗ ಅದನ್ನು ಮುನ್ನಡೆಸಿಕೊಂಡು ಹೋಗಲು ಒಬ್ಬ ಸಾರಥಿಯ ಅವಶ್ಯಕತೆಯಿತ್ತು. ಆ ಪಾತ್ರವನ್ನಯ ಡಾ. ನ. ವಜ್ರಕುಮಾರವರು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅದರ ಫಲವೇ ಇಂದು ಜೆ.ಎಸ್.ಎಸ್ ಸಂಸ್ಥೆ ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ. ಅಲ್ಲದೇ ಪ್ರತಿ ವಿದ್ಯಾರ್ಥಿ ಸಾಧನೆಯ ಹಿಂದೆ ಶಿಕ್ಷಕರು ಎಲೆ ಮರೆಯ ಕಾಯಿಯಂತೆ ಕಾರ್ಯನಿರ್ವಹಿಸುತ್ತಿದ್ದು ಗುರು ಇಲ್ಲದೇ ಗುರಿ ಇಲ್ಲ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳಿಗೆ ಅಂಕಗಳೊಂದಿಗೆ ಚಾರಿತ್ರ್ಯವೂ ಮುಖ್ಯ. ಶಿಕ್ಷಕ ಕಣ್ಣಿಗೆ ಕಾಣುವ ದೇವರು, ಆ ಕಾಯಕವನ್ನು ನಿಷ್ಠೆಯಿಂದ ನಿರ್ವಹಿಸಿರಿ ಎಂದು ಶಿಕ್ಷಕರಿಗೆ ಕಿವಿ ಮಾತು ಹೇಳಿದರು.
ಡಾ. ಅಜಿತ ಪ್ರಸಾದರವರು ಸ್ವಾಗತಿಸಿ ಮಾತನಾಡಿ ಪೂಜ್ಯರ ಆಶೀರ್ವಾದ ಹಾಗು ನ. ವಜ್ರಕುಮಾರರ ಮಾರ್ಗದರ್ಶನದಿಂದ ಪ್ರತಿ ವರ್ಷ ನಮ್ಮಲ್ಲಿ ವಿದ್ಯಾರ್ಥಿಗಳು ರ‍್ಯಾಂಕುಗಳನ್ನು ಗಳಿಸುತ್ತಿದ್ದಾರೆ. ಈ ಪರಂಪರೆ ಮುಂದುವರೆಯಲಿದೆ. ಧಾರವಾಡಕ್ಕೆ ಶಿಕ್ಷಣ ಕಾಶಿ ಎಂದು ಹೆಸರು ಬರಲು ಜೆ.ಎಸ್.ಎಸ್ ನ ಕಾಣಿಕೆ ಬಹಳ ದೊಡ್ಡದು ಎಂದು ಹೇಳಿದರು.
ಕಾರ್ಯದರ್ಶಿಗಳಾದ ಡಾ. ನ. ವಜ್ರಕುಮಾರರವರು ಶಿಕ್ಷಕರ ನಿಷ್ಠಾವಂತ ಸೇವೆ ಪಾಲಕರ ಸಹಕಾರ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಮುಟ್ಟಿಸಲು ಸಾಧನವಾಗಿದೆ. ಪೂಜ್ಯರ ಆಶೀರ್ವಾದ ಸದಾ ನನ್ನ ಮೇಲೆ, ನನ್ನ ಸಿಬ್ಬಂದಿ ಮೇಲೆ ಇರಲಿ. ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಉನ್ನತ ಹುದ್ದೆಯಲ್ಲಿ ನಿಷ್ಠಾವಂತರಾಗಿ ಸೇವೆ ಸಲ್ಲಿಸುವಂತಾಗಲಿ ಎಂದು ಆಶಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಅಂಗ ಸಂಸ್ಥೆಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಒಟ್ಟು ೨೮ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸನ್ಮಾನಿಸಿದರು. ಮಹಾವೀರ ಉಪಾದ್ಯೆ ನಿರೂಪಿಸಿದರು. ಜೆ.ಎಸ್.ಎಸ್ ನ ವಿವಿಧ ಸಮೂಹ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರು ಉಪಸ್ಥಿತರಿದ್ದರು.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement