ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ರಿಯಾಜ್ ಭಾಟಿ ಜತೆ ನಿಕಟ ಸಂಪರ್ಕ ಇದೆ ಎಂದು ಹೈಡ್ರೋಜನ್ ಬಾಂಬ್ ಸಿಡಿಸುತ್ತೇನೆ ಎಂದು ಹೇಳಿದ್ದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ತಿಳಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನವಾಬ್ ಮಲಿಕ್, ರಿಯಾಜ್ ಭಾಟಿ ಯಾರು? ದಾವೂದ್ ಜತೆ ನಿಕಟ ಸಂಪರ್ಕ ಹೊಂದಿರುವ ಹಾಗೂ ನಕಲಿ ಪಾಸ್ ಪೋರ್ಟ್ ಜಾಲದ ಪ್ರಕರಣದಲ್ಲಿ ಬಂಧಿಸಲ್ಪಿಟ್ಟಿದ್ದ. ಆದರೆ ಎರಡೇ ದಿನಗಳಲ್ಲಿ ಆತನನ್ನು ಬಿಡುಗಡೆ ಮಾಡಲಾಗಿದೆ. ಆತ(ಭಾಟಿ) ನಿಮ್ಮ ಜತೆಯೇ ಸಮಾರಂಭದಲ್ಲಿ ಕಾಣಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ ಬಿಜೆಪಿ ಕಾರ್ಯಕ್ರಮಗಳಲ್ಲೂ ಭಾಗಿಯಾಗಿದ್ದ ಎಂದು ಆರೊಪಿಸಿದ್ದಾರೆ.
ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರನ್ನು ಎಳೆಯುವುದು ಬೇಕಾಗಿಲ್ಲ ಎಂದಿರುವ ಮಲಿಕ್, ಈ ರಿಯಾಜ್ ಭಾಟಿಗೆ ಪ್ರಧಾನ ಮಂತ್ರಿಗಳ ಸಮಾರಂಭದಲ್ಲಿಯೂ ಭಾಗಿಯಾಗಲು ಅವಕಾಶ ಮಾಡಿಕೊಡಲಾಗಿದೆ. ಮೋದಿ ಜತೆ ಫೋಟೋವನ್ನೂ ತೆಗೆಸಿಕೊಂಡಿದ್ದಾನೆ. ಭೂಗತ ಪಾತಕಿಗಳ ದೂರವಾಣಿಯಲ್ಲಿನ ಆದೇಶದಂತೆ ನಕಲಿ ಪಾಸ್ ಪೋರ್ಟ್ ಪ್ರಕರಣವನ್ನು ದೇವೇಂದ್ರ ಫಡ್ನವೀಸ್ ಮುಚ್ಚಿಹಾಕಿದ್ದಾರೆ ಎಂದು ಆರೋಪಿಸಿದರು.
ಫಡ್ನವೀಸ್ ಅವರ ಅಧಿಕಾರಾವಧಿಯಲ್ಲಿ ನಡೆದ ನೇಮಕಾತಿಗಳನ್ನು ಅವರು ಪ್ರಶ್ನಿಸಿದರು ಮತ್ತು “ಸಂಶಯಾಸ್ಪದ ಪಾಕಿಸ್ತಾನ ಸಂಪರ್ಕ” ಹೊಂದಿರುವ ಜನರನ್ನು ಪ್ರಮುಖ ಹುದ್ದೆಗಳಲ್ಲಿ ನೇಮಿಸಲಾಗಿದೆ ಎಂದು ಆರೋಪಿಸಿದರು. ಮಹಾರಾಷ್ಟ್ರದಲ್ಲಿ ಫಡ್ನವಿಸ್ ರಕ್ಷಣೆಯಲ್ಲಿ ನಕಲಿ ಕರೆನ್ಸಿ ದಂಧೆ ನಡೆಯುತ್ತಿದೆ ಎಂದೂ ಮಲಿಕ್ ಹೇಳಿದ್ದಾರೆ.
2016ರಲ್ಲಿ ನೋಟು ಅಮಾನ್ಯೀಕರಣಗೊಂಡ ಸಂದರ್ಭದಲ್ಲಿ ದೇವೇಂದ್ರ ಫಡ್ನವೀಸ್ ಸಮೀರ್ ವಾಂಖೇಡೆ ಸಹಾಯದಿಂದ ನಕಲಿ ನೋಟುಗಳ ಜಾಲದಲ್ಲಿದ್ದವರನ್ನು ರಕ್ಷಿಸುವ ಕೆಲಸ ಮಾಡಿರುವುದಾಗಿ ಮಲಿಕ್ ದೂರಿದರು.
ನಾಗ್ಪುರದ ನಟೋರಿಯಸ್ ಕ್ರಿಮಿನಲ್ ಮುನ್ನಾ ಯಾದವನನ್ನು ದೇವೇಂದ್ರ ಫಡ್ನವೀಸ್ ನೇತೃತ್ವದ ಸರ್ಕಾರ ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿತ್ತು. ಬಾಂಗ್ಲಾದೇಶಿಗಳ ಅಕ್ರಮ ವಲಸೆ ಪ್ರಕರಣದಲ್ಲಿ ಶಾಮೀಲಾಗಿದ್ದ ಹೈದರ್ ಅಝಂನನ್ನು ಮೌಲಾನಾ ಆಜಾದ್ ಫೈನಾನ್ಸ್ ಕಾರ್ಪೋರೇಶನ್ ನ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದು ಫಡ್ನವೀಸ್ ಎಂದು ಮಲಿಕ್ ಆರೋಪಿಸಿದರು.
ಕ್ರಿಮಿನಲ್ ಹಿನ್ನೆಲೆಯುಳ್ಳವರನ್ನು ಸರ್ಕಾರಿ ಹುದ್ದೆಗಳಲ್ಲಿ ನೇಮಿಸುವ ಮೂಲಕ ಫಡ್ನವೀಸ್ ರಾಜಕೀಯದ ಅಪರಾಧೀಕರಣಕ್ಕೆ ಮೊರೆ ಹೋಗಿದ್ದಾರೆ ಎಂದು ಸಚಿವರು ಆರೋಪಿಸಿದ್ದಾರೆ.
ಮಲಿಕ್ ಮತ್ತು ಫಡ್ನವಿಸ್ ಅವರು ಭೂಗತ ಜಗತ್ತಿನ ಸಂಪರ್ಕದ ಆರೋಪದಲ್ಲಿ ಪರಸ್ಪರ ಗುರಿಯಾಗಿಸಿಕೊಂಡಿದ್ದಾರೆ. ಇಬ್ಬರೂ ಭೂಗತ ಜಗತ್ತಿನೊಂದಿಗೆ ಯಾವುದೇ ಸಂಪರ್ಕವನ್ನು ನಿರಾಕರಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ