ತಮಿಳುನಾಡಿನಲ್ಲಿ ಭಾರೀ ಮಳೆ: ವೆಲ್ಲೂರಿನಲ್ಲಿ ಮನೆ ಕುಸಿದು ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 9 ಜನರು ಸಾವು

ಚೆನ್ನೈ: ಭಾರೀ ಮಳೆಯಿಂದಾಗಿ ಇಂದು (ಶುಕ್ರವಾರ) ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಪೆರ್ನಂಪಟ್ಟು ಪ್ರದೇಶದಲ್ಲಿ ಭಾರೀ ಮಳೆಯಿಂದ ಮನೆ ಕುಸಿದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಒಂಬತ್ತು ಜನರು ಸಾವಿಗೀಡಾದ ದುರಂತ ಘಟನೆ ನಡೆದ ವರದಿಯಾಗಿದೆ.
ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹ 5 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಘೋಷಿಸಿದ್ದಾರೆ. ಮನೆಯ ಕುಸಿದು ಮನೆಯಲ್ಲಿ ವಾಸವಾಗಿದ್ದ ನಾಲ್ವರು ಮಹಿಳೆಯರು, ನಾಲ್ಕು ಮಕ್ಕಳು ಸೇರಿದಂತೆ ಒಂಬತ್ತು ಜನ ಮೃತಪಟ್ಟಿದ್ದಾರೆ. ಇನ್ನೂ ಕೆಲವರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೆರ್ನಂಪಟ್ಟು ಸಮೀಪದ ಎರಿಕುತಿ ಎಂಬಲ್ಲಿನ ಅರಣ್ಯದಂಚಿನ ಫ್ಲಾಟ್‌ನಲ್ಲಿ ಈ ಘಟನೆ ನಡೆದಿದೆ. ಕುಸಿದು ಬಿದ್ದ ಮನೆಯಲ್ಲಿ ಒಂದೇ ಕುಟುಂಬದ 13 ಮಂದಿ ವಾಸವಿದ್ದರು. ಕುಟುಂಬದವರು ಮಲಗಿದ್ದಾಗ ಇಂದು ಮುಂಜಾನೆ ಈ ದುರಂತ ನಡೆದಿದೆ. ಮನೆಯವರು ಗಾಢ ನಿದ್ದೆಯಲ್ಲಿದ್ದಾಗ ಮನೆ ಕುಸಿದಿದ್ದು, ಮೃತರನ್ನು ಅನೀಶಾ ಬೇಗಂ (63), ಕೌಸರ್ (45), ರೋಜಿ ನಾಸ್ (27), ತನ್ಸಿಲಾ (27), ಮಿಸ್ಬಾ ಫಾತಿಮಾ (22), ಮನುಲ್ಲಾ (8), ಅಫ್ರಾ (4), ಅಬಿರಾ (3) ಮತ್ತು ದಾಮೋದ್ (2) ಎಂದು ಗುರುತಿಸಲಾಗಿದೆ. ಮನೆ ಗೋಡೆ ಕುಸಿಯುತ್ತಿದ್ದಂತೆ ಎಲ್ಲರೂ ಅದರಡಿಯಲ್ಲಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕುಸಿದು ಬಿದ್ದ ಮನೆಯಲ್ಲಿ ಒಂದೇ ಕುಟುಂಬದ 13 ಮಂದಿ ವಾಸವಿದ್ದರು. ಮನೆಯ ಉಳಿದ ನಾಲ್ವರು ಹಾಗೂ ಅಕ್ಕಪಕ್ಕದ ಮನೆಯ ಇತರ ನಾಲ್ವರನ್ನು ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ಬಚಾವ್‌ ಮಾಡಿದ್ದಾರೆ. ಸದ್ಯ ಅವರಿಗೆ ಪೆರ್ನಂಪಟ್ಟು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಮಳೆ ಮತ್ತು ನಂತರದ ಜಲಾವೃತದಿಂದಾಗಿ, ಈ ಪ್ರದೇಶದಲ್ಲಿ ವಾಸಿಸುವ ಕುಟುಂಬಗಳಿಗೆ ಕಂದಾಯ ಇಲಾಖೆ ಎಚ್ಚರಿಕೆ ನೀಡಿದ್ದು, ಹತ್ತಿರದ ಕ್ಯಾಂಪ್‌ಗೆ ಸ್ಥಳಾಂತರಿಸಲು ಸೂಚಿಸಿದೆ.
ಸಾವಿಗೆ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸಂತಾಪ ಸೂಚಿಸಿದ್ದಾರೆ. ಭಾರೀ ಮಳೆಯಿಂದಾಗಿ ವೆಲ್ಲೂರು ಜಿಲ್ಲೆಯ ಮಸೀದಿ ಸ್ಟ್ರೀಟ್‌ನಲ್ಲಿರುವ ಮನೆಯೊಂದರ ಅವಶೇಷಗಳಲ್ಲಿ ನಾಲ್ಕು ಮಕ್ಕಳು, ನಾಲ್ವರು ಮಹಿಳೆಯರು ಮತ್ತು ಒಬ್ಬ ಪುರುಷ ಸಿಲುಕಿ ಸಾವನ್ನಪ್ಪಿರುವ ಸುದ್ದಿ ಕೇಳಿ ನನಗೆ ದುಃಖವಾಯಿತು ಎಂದು ಅವರು ಹೇಳಿದ್ದಾರೆ.
ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆಗೆ ಆದೇಶಿಸಿರುವುದಾಗಿ ಮುಖ್ಯಮಂತ್ರಿ ಸ್ಟಾಲಿನ್ ಪ್ರಕಟಿಸಿದ್ದು, ಮೃತಕುಟುಂಬಕ್ಕೆ ಮುಖ್ಯಮಂತ್ರಿಗಳ ಸಾಮಾನ್ಯ ಪರಿಹಾರ ನಿಧಿಯಿಂದ 5 ಲಕ್ಷ ರೂ.ಗಳ ಪರಿಹಾರ ಘೋಷಿಸಲಾಗಿದೆ. ಇಂದು (ಶುಕ್ರವಾರ) ಕೂಡ ಚೆನ್ನೈ, ತಿರುವಳ್ಳೂರು, ಕಾಂಚೀಪುರಂ, ರಾಣಿಪೇಟ್, ದಿಂಡುಗಲ್, ಪುದುಕೊಟ್ಟೈ, ತೇಣಿ, ವೆಲ್ಲೂರು, ಅರಿಯಲ್ಲೂರು, ನಾಗಪಟ್ಟಣಂ, ವಿಲ್ಲುಪುರ, ತಿರುವಾರೂರ್, ಮೈಲಾಡುಧುರೈ, ಕಲ್ಲಕುರಿಚಿ, ಕಡಲೂರು, ವಿಲ್ಲಿಪುರಂ, ತಂಜಾವೂರು ಮತ್ತು ಧರ್ಮಪುರಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಮುಖ ಸುದ್ದಿ :-   ನಾಳೆ ಫಿಲಿಪ್ಪೀನ್ಸ್‌ಗೆ ʼಬ್ರಹ್ಮೋಸ್ ಕ್ಷಿಪಣಿʼಗಳ ಮೊದಲ ಸೆಟ್ ನೀಡಲಿದೆ ಭಾರತ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement