ಪ್ರಕರಣ ಹೊರಬಂದು 8 ತಿಂಗಳಾದ್ರೂ ಮಾತಾಡದ ಕಾಂಗ್ರೆಸ್‌ನವರಿಗೆ ಈಗ ಶ್ರೀಕಿ ಬಂಧಿಸಿದ್ದು ನೋವಾಗಿದ್ಯಾ..?: ಅರಗ ಜ್ಞಾನೇಂದ್ರ ಪ್ರಶ್ನೆ

ಶಿವಮೊಗ್ಗ:ಬಿಟ್‌ ಕಾಯಿನ್‌  ಪ್ರಕರಣ ಹೊರಗೆಬಂದು 8 ತಿಂಗಳಾದರೂ ಮಾತನಾಡದ ಕಾಂಗ್ರೆಸ್ಸಿನವರು ಅಧಿವೇಶನದಲ್ಲೂ ಸಹ ಮಾತಾಡಿಲ್ಲ. ಆದರೆ ಶ್ರೀಕಿ ಬಂಧಿಸಿದ ನಂತರ ಅವರ ಮಾತು ಶುರುವಾಗಿದೆ. ಶ್ರೀಕಿ ಬಂಧಿಸಿದ್ದು ಕಾಂಗ್ರೆಸ್ಸಿಗೆ ನೋವಾಗಿದೆಯಾ ಎಂದು ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ಪ್ರಶ್ನಿಸಿದರು.
2018ರಲ್ಲಿಯೇ ಹ್ಯಾಕರ್‌ ಶ್ರೀಕಿ ಬಗ್ಗೆ ಮಾಹಿತಿ ಗೊತ್ತಿದ್ದರೂ ಕಾಂಗ್ರೆಸ್‌ನವರು ಆಗ ಸುಮ್ಮನೆ ಕುಳಿತರು. ನಾವು ಶ್ರೀಕಿಯನ್ನು ಬಂಧಿಸಿದ್ದೇವೆ. ಆತನ ವಿರುದ್ಧ ಪ್ರಕರಣ ದಾಖಲಿಸಿ ಆರೋಪ ಪಟ್ಟಿ ಸಹ ಸಲ್ಲಿಸಿದ್ದೇವೆ. ನಾವು ಬಂಧಿಸುವ ಮುನ್ನ ಆತ ಕಾಂಗ್ರೆಸ್‌ ಮುಖಂಡರ ಮಕ್ಕಳ ಜತೆ ಇದ್ದ ಎನ್ನುವುದನ್ನೂ ಗಮನಿಸಬೇಕು ಎಂದು ಹೇಳಿದರು.
ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ. ಸೈಬರ್‌ ತಂತ್ರಜ್ಞರ ನೆರವು ಪಡೆದು ಪ್ರಕರಣದ ಆಳದ ವರೆಗೂ ಹೋಗುತ್ತಿದ್ದೇವೆ. ಪ್ರಕರಣ ಹೊರಗೆ ಬಂದು 8 ತಿಂಗಳಾದರೂ ಕಾಂಗ್ರೆಸ್ಸಿಗರು ಯಾಕೆ ಮಾತನಾಡಿಲ್ಲ. ಅಧಿವೇಶನದಲ್ಲೂ ಮಾತಾಡಿಲ್ಲ. ಶ್ರೀಕಿ ಬಂಧಿಸಿದ್ದು ಕಾಂಗ್ರೆಸ್ಸಿಗೆ ನೋವಾಗಿದೆಯಾ ಎಂದು ಪ್ರಶ್ನಿಸಿದ ಅವರು, ಆತನ ಬಗ್ಗೆ ಹೆಚ್ಚಿನ ಮಾಹಿತಿ ಇದ್ದರೆ ದಾಖಲೆಗಳ ಸಮೇತ ದೂರು ಕೊಟ್ಟರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ರಾಜ್ಯ ಸರ್ಕಾರ ಎಲ್ಲಾ ಪೊಲೀಸ್ ಠಾಣೆಗಳಿಗೆ ಸ್ವಂತ ಕಟ್ಟಡ ಒದಗಿಸಲು ತೀರ್ಮಾನಿಸಿದೆ ಹಾಗೂ ಪ್ರತಿವರ್ಷ 4 ಸಾವಿರ ಪೊಲೀಸರ ನೇಮಕ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿ 12 ಸಾವಿರ ಪೊಲೀಸ್‌ ಹುದ್ದೆಗಳು ಖಾಲಿ ಇದ್ದು, ಪ್ರತಿ ವರ್ಷ 4 ಸಾವಿರ ಪೊಲೀಸರ ನೇಮಿಸಲು ನಿರ್ಧರಿಸಲಾಗಿದೆ. ಮೂರು ವರ್ಷಗಳ ಹಿಂದೆ 35 ಸಾವಿರ ಹುದ್ದೆಗಳು ಖಾಲಿ ಇದ್ದವು. ಪ್ರತಿ ವರ್ಷ ಭರ್ತಿ ಮಾಡಿಕೊಳ್ಳುತ್ತಿದ್ದುದರಿಂದ ಈಗ ಸಂಖ್ಯೆ 12 ಸಾವಿರಕ್ಕೆ ಇಳಿದಿದೆ. ರಾಜ್ಯದಲ್ಲಿ ಈಗ 970 ಎಸ್‌ಐಗಳ ಹುದ್ದೆ ಭರ್ತಿಯಾಗುತ್ತಿದ್ದು, ಕಾಲಮಿತಿಯೊಳಗೆ ಭರ್ತಿ ಮಾಡಲಾಗುವುದು. ಹೊಸದಾಗಿ 100 ಠಾಣೆಗಳನ್ನು ನಿರ್ಮಿಸಲಾಗುತ್ತಿದ್ದು, ಇದಕ್ಕೆ 200 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಹೊಸದಾಗಿ 10 ಸಾವಿರ ಮನೆಗಳನ್ನು ನಿರ್ಮಿಸಲಾಗುತ್ತಿದ್ದು, ಪ್ರಕ್ರಿಯೆ ಆರಂಭವಾಗಿದೆ ಎಂದುಅವರು ಹೇಳಿದರು.
ಎಲ್ಲಾ ಪೊಲೀಸ್ ಠಾಣೆಗಳಿಗೆ ಸ್ವಂತ ಕಟ್ಟಡ ಒದಗಿಸಲು 200 ಕೋಟಿ ರೂಪಾಯಿ ವೆಚ್ಚದಲ್ಲಿ 113 ಪೊಲೀಸ್ ಟಕ್ ಗಳನ್ನು ನಿರ್ಮಿಸಲಾಗುತ್ತಿದೆ ಹಾಗೂ ಹಾಲಿ ಕಟ್ಟಡಗಳನ್ನು ಮೇಲ್ದರ್ಜೆಗೇರಿಸಲು ಯೋಜನೆ ಹಾಕಿಕೊಂಡಿದೆ ಎಂದರು.
ಅಗ್ನಿಶಾಮಕ ಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಗಿದ್ದು, ಅಗ್ನಿ ಅವಘಡಗಳನ್ನು ನಿಯಂತ್ರಿಸಲು 100 ಮೀಟರ್‌ವರೆಗೆ ಎತ್ತರದವರೆಗೆ ಹೋಗಿ ಬೆಂಕಿ ನಂದಿಸುವ ವಾಹನಗಳನ್ನು ಖರೀದಿಸಲು ಟೆಂಡರ್‌ ಕರೆಯಲಾಗಿದೆ. ಈ ಕುರಿತು ಫಿನ್ಲೆಂಡ್‌ ಸಂಸ್ಥೆಯೊಂದಕ್ಕೆ ಕಾರ್ಯಾದೇಶ ನೀಡಲಾಗಿದೆ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ ಇನ್ನಿಲ್ಲ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement