ಹೊನ್ನಾವರ ಬಂದರು ಅಭಿವೃದ್ಧಿಗೆ ಕರ್ನಾಟಕ ಹೈಕೋರ್ಟ್‌ ಸಮ್ಮತಿ

ಬೆಂಗಳೂರು: ದೇಶದ ಆರ್ಥಿಕತೆಗೆ ಮಾರಕವಾಗುವ ಪ್ರಕರಣಗಳಲ್ಲಿ ಮಧ್ಯಪ್ರವೇಶಿಸಲಾಗದು” ಎಂದು ಬುಧವಾರ ಹೇಳೀರುವ ಹೈಕೋರ್ಟ್‌, ಹೊನ್ನಾವರ ಬಂದರು ಅಭಿವೃದ್ಧಿಗೆ ವಿರೋಧ ವ್ಯಕ್ತಪಡಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿ ವಿಲೇವಾರಿ ಮಾಡಿದೆ.
ಹೊನ್ನಾವರ ತಾಲ್ಲೂಕು ಹಸಿಮೀನು ವ್ಯಾಪರಸ್ಥರ ಸಂಘ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಇಡೀ ಪ್ರಕರಣವನ್ನು ಪರಿಗಣಿಸಿ ರಿಟ್‌ ಮನವಿಯನ್ನು ನಾವು ವಿಲೇವಾರಿ ಮಾಡಿದ್ದು, ಅರ್ಜಿದಾರರು ಐದನೇ ಪ್ರತಿವಾದಿಯಾದ ಲೋಕೋಯೋಗಿ, ಬಂದರು ಮತ್ತು ಒಳಸಾರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರ ಬಳಿ ತಮ್ಮ ಅಹವಾಲು ಮಂಡಿಸಬಹುದು. ಅವರು ಅರ್ಜಿದಾರರ ಅಹವಾಲನ್ನು ಪರಿಗಣಿಸಿ ಅಗತ್ಯ ಕಂಡುಬಂದರೆ ಕಾನೂನಿನ ಅನುಸಾರ ಅಗತ್ಯ ಆದೇಶ ಹೊರಡಿಸಬೇಕು” ಎಂದು ಪೀಠವು ಆದೇಶದಲ್ಲಿ ಹೇಳಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ.
ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯಡಿ ಕೆಲಸ ಮಾಡುವ ರಾಷ್ಟ್ರೀಯ ಸುಸ್ಥಿರ ಕರಾವಳಿ ನಿರ್ವಹಣೆ ಕೇಂದ್ರಕ್ಕೆ (ಎನ್‌ಸಿಎಸ್‌ಸಿಎಂ) ಸರ್ವೆ ನಡೆಸುವಂತೆ ಜುಲೈ 13ರಂದು ನ್ಯಾಯಾಲಯ ಆದೇಶಿಸಿತ್ತು. ಇದರ ಭಾಗವಾಗಿ ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸಿದ ಪೀಠವು “ಸರ್ವೆಯ ಸಂದರ್ಭದಲ್ಲಿ ಪ್ರಸ್ತಾವಿತ 45 ಹೆಕ್ಟೇರ್‌ ಪ್ರದೇಶದಲ್ಲಿ ಕಡಲಾಮೆಯ ಗೂಡು, ಕಡಲಾಮೆ ಅಥವಾ ಸತ್ತ ಕಡಲಾಮೆ ಪತ್ತೆಯಾಗಲಿಲ್ಲ ಎಂದು ಹೇಳಲಾಗಿದೆ” ಎಂದು ಪೀಠ ಹೇಳಿತು ಎಂದು ವರದಿ ತಿಳಿಸಿದೆ.
ಆಕ್ಷೇಪಿತ ಬಂದರಿನ ಬೇಡಿಕೆ ಮತ್ತು ಅಗತ್ಯವನ್ನು ಆಧರಿಸಿ ಸ್ಥಳ ನಿರ್ಧರಿಸಲಾಗಿರುತ್ತದೆ. ಅಗತ್ಯವನ್ನು ಆಧರಿಸಿ ಎಲ್ಲಿ ಬಂದರು ನಿರ್ಮಿಸಬೇಕು ಎಂಬುದನ್ನು ತಜ್ಞರು ನಿರ್ಧರಿಸುತ್ತಾರೆ. ಬಂದರಿನ ಅಭಿವೃದ್ಧಿಗೆ ಭೋಗ್ಯಕ್ಕೆ ನೀಡಲಾಗಿರುವ ಪ್ರದೇಶವು ಕಡಲಾಮೆಗಳು ಗೂಡು ಕಟ್ಟುವ ಸ್ಥಳ ಎಂದು ಅರ್ಜಿದಾರರು ಹೇಳಿದ್ದಾರೆ. ಎನ್‌ಸಿಎಸ್‌ಸಿಎಂ ಸರ್ವೆ ವರದಿಯ ಪ್ರಕಾರ ಕಡಲಾಮೆಯ ಗೂಡು, ಕಡಲಾಮೆ ಅಥವಾ ಸತ್ತ ಕಡಲಾಮೆ ಪತ್ತೆಯಾಗಲಿಲ್ಲ ಎಂದು ಹೇಳಲಾಗಿದೆ. ಅದಾಗ್ಯೂ, ಕಡಲಾಮೆಗಳು ಗೂಡುಕಟ್ಟುವುದು ಮತ್ತು ಕಣ್ಮರೆಯಾಗುತ್ತಿರುವ ಜೀವಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಖಾತರಿವಹಿಸುವುದು ಸಂಬಂಧಪಟ್ಟ ಇಲಾಖೆಗಳ ಕೆಲಸ ಎಂದು ಪೀಠ ಹೇಳಿದೆ.
ಆಕ್ಷೇಪಾರ್ಹವಾದ ಬಂದರು ನಿರ್ಮಿಸುವುದಕ್ಕೂ ಮುನ್ನ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಹಾಗೂ ಸಂಬಂಧ ಸಂಸ್ಥೆಗಳ ಅನುಮತಿಗೆ ಸಂಬಂಧಿಸಿದಂತೆ ಪ್ರತಿವಾದಿಗಳು ಅಗತ್ಯ ಒಪ್ಪಿಗೆ, ಅನುಮತಿ ಪಡೆಯಬೇಕು” ಎಂದು ನ್ಯಾಯಾಲಯವು ಇದೇ ಸಂದರ್ಭದಲ್ಲಿ ಸ್ಪಷ್ಟವಾಗಿ ಹೇಳಿದೆ.
ಕಡಲಾಮೆಗಳು ಗೂಡು ಕಟ್ಟುವ ಬೀಚ್‌ನಲ್ಲಿ ಬಂದರು ನಿರ್ಮಿಸುವ ಸಾಧ್ಯತೆ ಇದೆ ಎಂಬುದು ಸೇರಿದಂತೆ ಹಲವು ವಿಚಾರಗಳ ಮೇಲೆ ಬಂದರು ನಿರ್ಮಾಣ ಭೋಗ್ಯದ ಒಪ್ಪಂದವನ್ನು ಅರ್ಜಿದಾರರ ಪರ ವಕೀಲ ಮೂರ್ತಿ ನಾಯ್ಕ್‌ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಆರನೇ ಪ್ರತಿವಾದಿಯು 2012ರ ಸೆಪ್ಟೆಂಬರ್‌ 21ರಂದು ನೀಡಿರುವ ಪರಿಸರ ಅನುಮೋದನೆ ಮತ್ತು 2019ರ ಜುಲೈ 1ರಂದು ನೀಡಿರುವ ಪರಿಸರ ಒಪ್ಪಿಗೆ ವಿಸ್ತರಿಸಿರುವುದು ಹಾಗೂ ಸಿಆರ್‌ಜಡ್‌-1 ಪ್ರದೇಶದಲ್ಲಿ ಬಂದರು ನಿರ್ಮಾಣ ಚಟುವಟಿಕೆ ನಿಷೇಧಿಸಲಾಗಿದೆ ಎಂಬುದನ್ನು ಅರ್ಜಿದಾರರು ತಮ್ಮ ಮನವಿಯಲ್ಲಿ ಉಲ್ಲೇಖಿಸಿದ್ದರು.
ಹೊನ್ನಾವರ ಪೋರ್ಟ್‌ ಪ್ರೈ. ಲಿ ಅನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ್‌ ಹೊಳ್ಳ, ಬಂದರು ನಿರ್ಮಾಣ ಪ್ರದೇಶದಲ್ಲಿ ನೆಲೆಸಿರುವ ಕೆಲವರ ಹಿತಾಸಕ್ತಿ ಕಾಯುವುದಕ್ಕಾಗಿ ಮನವಿ ಸಲ್ಲಿಸಲಾಗಿದೆ. ಮೀನುಗಾರರು, ಮೀನುಗಾರಿಕೆ ಮತ್ತು ಇತರೆ ಚಟುವಟಿಕೆಯಲ್ಲಿ ತೊಡಗಿರುವವರ ಪರವಾಗಿ ಮನವಿ ಸಲ್ಲಿಸಲಾಗಿದೆ. ಬಂದರು ನಿರ್ಮಾಣ ಅವರಿಗೆ ಬೇಕಿಲ್ಲ” ಎಂದರು.ಯೋಜನೆ ಉದ್ದೇಶಿಸಿರುವ ಪ್ರದೇಶವು ಅರಣ್ಯ ಪ್ರದೇಶದ ವ್ಯಾಪ್ತಿಯಿಂದ ಹೊರಗಿದೆ. ಒಂದೊಮ್ಮೆ ಆ ಅಗತ್ಯವಿದ್ದರೆ, ಔಪಚಾರಿಕತೆ ಪೂರ್ಣಗೊಳಿಸದೇ ನಿರ್ಮಾಣ ಕಾಮಗಾರಿ ಆರಂಭಿಸಲಾಗದು ಎಂದು ತಿಳಿಸಿದರು.
ಸರ್ಕಾರದ ವಕೀಲರು “ಉತ್ತರ ಕನ್ನಡ ಜಿಲ್ಲಾಧಿಕಾರಿ ಸರ್ವೆ ನಡೆಸಿದ್ದು, ಬಂದರು ನಿರ್ಮಾಣಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರದೇಶ ನೀಡಿಲ್ಲ ಎಂದು ವರದಿಯಲ್ಲಿ ಹೇಳಿದ್ದಾರೆ” ಎಂದರು

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement