ಬೆಂಗಳೂರು: ಖ್ಯಾತ ಗಾಯಕಿ ಹರಿಣಿ ಅವರ ತಂದೆ ಎ.ಕೆ. ರಾವ್ ಅವರ ಮೃತದೇಹ ಬೆಂಗಳೂರಿನ ರೈಲ್ವೆ ಹಳಿ ಮೇಲೆ ಪತ್ತೆಯಾಗಿದೆ.
ಈ ಸಂಬಂಧ ಹರಿಣಿ ಕುಟುಂಬದವರು ದೂರು ನೀಡಿದ್ದಾರೆ. ಸಾವು ಅನುಮಾನಕ್ಕೆ ಕಾರಣವಾಗಿದೆ. ಯಲಹಂಕ ರೈಲ್ವೆ ನಿಲ್ದಾಣದಿಂದ ಅರ್ಧ ಕಿಲೋಮೀಟರ್ ದೂರದಲ್ಲಿ ಎ.ಕೆ. ರಾವ್ ಅವರ ಮೃತದೇಹ ಸಿಕ್ಕಿದ್ದು, ನವೆಂಬರ್ 22ರ ರಾತ್ರಿಯೇ ಈ ಘಟನೆ ನಡೆದಿದೆ. ಹರಿಣಿ ಮತ್ತು ಅವರ ಕುಟುಂಬದವರು ಹೈದರಾಬಾದ್ನಲ್ಲಿ ವಾಸವಾಗಿದ್ದರು. ಆದರೆ ಕೆಲವು ದಿನಗಳಿಂದ ಇಡೀ ಕುಟುಂಬ ನಾಪತ್ತೆಯಾಗಿತ್ತು. ಈ ಎಲ್ಲ ಕಾರಣಗಳಿಂದಾಗಿ ಎ.ಕೆ. ರಾವ್ ಸಾವಿನ ಕೇಸ್ ಅನುಮಾನ ಮೂಡಿಸಿದೆ.
ಮೃತದೇಹದ ಜೊತೆ ಆಧಾರ್ ಕಾರ್ಡ್ ಸಿಕ್ಕಿದೆ. ಅಲ್ಲದೇ, ದೂರು ನೀಡಲು ಸಿದ್ಧಪಡಿಸಿರುವ ಪತ್ರ ಹಾಗೂ ಕೆಲವು ಡಾಕ್ಯುಮೆಂಟ್ಗಳು ಸಹ ಪತ್ತೆಯಾಗಿವೆ. ತಂದೆಯ ಸಾವಿನ ಬಗ್ಗೆ ಅನುಮಾನವಿದೆ ಎಂದು ಪುತ್ರಿ ಶಾಲಿನಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ‘ನಮ್ಮ ತಂದೆ ಕೊಲೆಯಾಗಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ’ ಎಂದು ದೂರಿನಲ್ಲಿ ಹೇಳಲಾಗಿದೆ. ಅದರ ಅನ್ವಯ 174 C, 302 ಸೆಕ್ಷನ್ ಅಡಿಯಲ್ಲಿ ದೂರು ದಾಖಲಾಗಿದೆ. ಸದ್ಯ ಕೇಸ್ ದಾಖಲು ಮಾಡಿಕೊಂಡಿರುವ ಬೆಂಗಳೂರು ರೈಲ್ವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ