ವಿಧಾನ ಪರಿಷತ್ತಿನ 25 ಕ್ಷೇತ್ರಗಳಿಗೆ ಚುನಾವಣೆ: 90 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

ಬೆಂಗಳೂರು: ರಾಜ್ಯದ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿನ 25 ಕ್ಷೇತ್ರಗಳಿಗೆ ಇಂದು, ಶುಕ್ರವಾರ ನಡೆದ ಚುನಾವಣೆಯಲ್ಲಿ ಭರ್ಜರಿ ಮತದಾನವಾಗಿದೆ.
ವಿಧಾನ ಪರಿಷತ್ ಸಭಾನಾಯಕ ಹಾಗೂ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಉಪ ಸಭಾಪತಿ ಎಂ.ಕೆ.ಪ್ರಾಣೇಶ್, ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ್ ಕವಟಗಿ ಮಠ್ ಸೇರಿದಂತೆ ಒಟ್ಟು 90 ಅಭ್ಯರ್ಥಿಗಳ ಭವಿಷ್ಯ ಭವಿಷ್ಯವನ್ನು ಮತದಾರರು ನಿರ್ಧರಿಸಿದ್ದಾರೆ.
ಸಂಸದರು, ಶಾಸಕರು, ಮಹಾನಗರ ಪಾಲಿಕೆ ಸದಸ್ಯರು, ಪುರಸಭೆ, ನಗರಸಭೆ, ಗ್ರಾಪಂ ಸದಸ್ಯರು ತಮ್ಮ ಮತಗಟ್ಟೆಗಳಿಗೆ ಆಗಮಿಸಿ ಸರದಿ ಸಾಲಿನಲ್ಲಿ ನಿಂತು ಬೆಳಗ್ಗೆಯೇ ಮತದಾನ ಮಾಡಿದರು. ಗ್ರಾಮ ಪಂಚಾಯತ, ನಗರಸಭೆ, ಪುರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಒಟ್ಟು 98,846 ಮತದಾರರಿದ್ದು, 6073 ಮತಗಟ್ಟೆಗಳಲ್ಲಿ ಬೆಳಗ್ಗೆ 8 ರಿಂದ ಮತದಾನ ಆರಂಭವಾಗಿದೆ.
ಬೆಳಗ್ಗೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಶಾಸಕರು, ಸಂಸದರು, ಸಚಿವರು ಸೇರಿದಂತೆ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಪಂ ಸದಸ್ಯರು ಮತದಾನ ಮಾಡಿದರು. ಬಸವರಾಜ ಬೊಮ್ಮಾಯಿ ಶಿಗ್ಗಾವಿ ತಾಲ್ಲೂಕಿನ ಮತಗಟ್ಟೆ 297ರಲ್ಲಿ ಮತ ಚಲಾಯಿಸಿದರು. ಯಡಿಯೂರಪ್ಪ ಶಿಕಾರಪುರದ ಪುರಸಭೆಯಲ್ಲಿ ಮತದಾನ ಮಾಡಿದರು. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಮತ ಚಲಾಯಿಸಿದರೆ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ರಾಮನಗರದಲ್ಲಿ ಮತ ಚಲಾವಣೆ ಮಾಡಿದರು.
ಪ್ರತಿ ಗ್ರಾಪಂನಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು ಮತಗಟ್ಟೆಗೆ ಹೋಗುವವರೆಗೂ ಪ್ರಥಮ-ದ್ವಿತೀಯ ಪ್ರಾಶಸ್ತ್ಯದ ಮತದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದುದು ಕಂಡುಬಂತು.
ಈ ಹಿಂದೆ ನಡೆದ ಚುನಾವಣೆಗಳಿಗಿಂತ ಈ ಬಾರಿಯ ಚುನಾವಣೆಯಲ್ಲಿ ಭಾರೀ ಹಣ, ಉಡುಗೊರೆಗಳ ಹಂಚಿಕೆ ವ್ಯಾಪಕವಾಗಿ ನಡೆದಿತ್ತು. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳವರು ಪೈಪೋಟಿಗೆ ಬಿದ್ದವರಂತೆ ಮತದಾರರನ್ನು ಸೆಳೆಯಲು ಲಕ್ಷಗಟ್ಟಲೆ ಹಣ, ಸೀರೆ, ಪಂಚೆ, ಒಡವೆಗಳನ್ನು ನೀಡಿದ್ದು ಗುಟ್ಟಾಗೇನೂ ಉಳಿದಿಲ್ಲ. ಮತಗಳನ್ನು ಖಚಿತಪಡಿಸಿಕೊಳ್ಳಲು ಆಣೆ, ಪ್ರಮಾಣಗಳನ್ನೂ ಮಾಡಿಸಿಕೊಳ್ಳಲಾಯಿತು.
ಅಲ್ಲದೆ, ಹಣ ಪಡೆದ ಬೆಂಬಲಿತ ಸದಸ್ಯರು ಕೊನೆ ಕ್ಷಣದಲ್ಲಿ ಮನಸ್ಸು ಬದಲಾಯಿಸಿ ಬೇರೆಯವರಿಗೆ ಮತ ಹಾಕಿ ಬಿಡಬಹುದು ಎಂಬ ಹಿನ್ನೆಲೆಯಲ್ಲಿ ಕಳೆದೆರಡು ದಿನಗಳ ಹಿಂದೆ ಹಲವು ಕಡೆ ಸದಸ್ಯರನ್ನು ಪ್ರವಾಸದ ನೆಪದಲ್ಲಿ ಹೊಟೇಲ್, ತೋಟದ ಮನೆಗಳಿಗೆ ಕರೆದುಕೊಂಡು ಹೋಗಿ ಇಡಲಾಗಿತ್ತು. ಮತದಾನದ ವೇಳೆ ಅವರನ್ನು ನೇರ ಮತಗಟ್ಟೆಗೆ ಕರೆದುಕೊಂಡು ಬಂದು ಮತ ಹಾಕಿಸುವ ವ್ಯವಸ್ಥೆ ಹಲವೆಡೆ ಮಾಡಲಾಗಿತ್ತು.
ಬೊಮ್ಮನಹಳ್ಳಿ ಪುರಸಭೆ ಸದಸ್ಯರೊಬ್ಬರು ಅಂಬುಲೆನ್ಸ್‌ನಲ್ಲಿ ಬಂದು ಮತದಾನ ಮಾಡಿದ್ದು ವಿಶೇಷವಾಗಿತ್ತು. ನಿನ್ನೆ ಹುಷಾರಿಲ್ಲದೆ ಆಸ್ಪತ್ರೆಗೆ ದಾಖಲಾಗಿದ್ದ ನಜ್ಮಾ ಫಾರೂಖ್ ಅವರು ಇಂದು ಬೆಳಗ್ಗೆ ನೇರವಾಗಿ ಅಂಬುಲೆನ್ಸ್‌ನಲ್ಲಿ ಬಂದು ಮತದಾನ ಮಾಡಿದರು.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಪೂರ್ವ ಮುಂಗಾರು ಚುರುಕು; ಏಪ್ರಿಲ್‌ 19 ರಿಂದ ಮೂರು ದಿನ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement