ಪ್ರತಿಪಕ್ಷಗಳ ವಿರೋಧದ ನಡುವೆ ವಿಧಾನಸಭೆಯಲ್ಲಿ ಮತಾಂತರ ನಿಷೇಧ ವಿಧೇಯಕ ಮಂಡನೆ…

ಸುವರ್ಣಸೌಧ(ಬೆಳಗಾವಿ): ಬಹುನಿರೀಕ್ಷಿತ ಮತಾಂತರ ನಿಷೇಧ ವಿಧೇಯಕ ಇಂದು, ಮಂಗಳವಾರ ವಿಧಾನಸಭೆಯಲ್ಲಿ ಮಂಡನೆ ಮಾಡಲಾಯಿತು. ಭೋಜನ ವಿರಾಮದ ನಂತರ ಸದನ ಆರಂಭವಾಗುತ್ತಿದ್ದಂತೆ ವಿಪಕ್ಷಗಳ ವಿರೋಧದ ನಡುವೆ ವಿಧಾನಸಭೆಯಲ್ಲಿ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2021 ಅನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ವಿಧೇಯಕವನ್ನು ಮಂಡಿಸಿದರು
ಸದಸ್ಯರು ಧ್ವನಿ ಮತಗಳ ಮೂಲಕ ಮಸೂದೆಗೆ ಬೆಂಬಲ ಸೂಚಿಸಲಾಯಿತು. ವಿಧೇಯಕ ಮಂಡನೆ ಬಳಿಕ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ-2021 ಮಂಡನೆ ಆಗಿದೆ. ನಾಳೆ ಪ್ರಶ್ನೋತ್ತರ ಅವಧಿಯ ಬಳಿಕ ವಿಧೇಯಕದ ಬಗ್ಗೆ ಚರ್ಚೆಗೆ ಅವಕಾಶ ನೀಡಲಾಗುವುದು ಎಂದು ಸದನಕ್ಕೆ ತಿಳಿಸಿದರು.
ಕಾಂಗ್ರೆಸ್  ಗದ್ದಲ:
ವಿಧೇಯಕದ ಪ್ರತಿ ಕೊಟ್ಟಿಲ್ಲ, ಚರ್ಚೆ ಮಾಡಿಲ್ಲ ಎಂದು ವಿರೋಧ ಪಕ್ಷಗಳ ಸದಸ್ಯರು ಆಕ್ಷೇಪಿಸಿದರು. ಮತಾಂತರ ನಿಷೇಧ ವಿಧೇಯಕ ಮಂಡನೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಸದನದ ಗಮನಕ್ಕೆ ತರದೇ ತರಾತುರಿಯಲ್ಲಿ ವಿಧೇಯಕ ಮಂಡಿಸುವ ಅವಶ್ಯಕತೆ ಏನಿತ್ತು? ವಿಧೇಯಕ ಜಾರಿಗೆ ನಮ್ಮ ವಿರೋಧವಿದೆ ಎಂದರು.
ನಾವೇನು ತರಾತುರಿಯಲ್ಲಿ ವಿಧೇಯಕ ಮಂಡಿಸಿಲ್ಲ. ಸದನಕ್ಕೆ ಬರುವುದಕ್ಕೆ ನೀವೇ ತಡ ಮಾಡಿದ್ದೀರಿ ಎಂದು ಬಿಜೆಪಿ ಶಾಸಕರು ಹೇಳುತ್ತಿದ್ದಂತೆ ಪ್ರತಿಪಕ್ಷ ನಾಯಕರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಜನ ವಿರೋಧಿ ವಿಧೇಯಕವನ್ನು ತರಾತುರಿಯಲ್ಲಿ ಮಂಡಿಸಿರುವುದನ್ನು ನಾವು ಖಂಡಿಸುತ್ತೇವೆ. ಸರ್ಕಾರಕ್ಕೆ ಅಷ್ಟೊಂದು ಆಸಕ್ತಿ ಇದ್ದಿದ್ದರೆ ರಾಜಾರೋಷವಾಗಿ ಮಂಡಿಸಬೇಕಿತ್ತು ಎಂದು ಹೇಳಿದರು. ವಿಧೇಯಕದ ಪ್ರತಿ ಹರಿದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ ಆಕ್ರೋಶ ವ್ಯಕ್ತಪಡಿಸಿದರು.
ಮತಾಂತರ ನಿಷೇಧ ವಿಧೇಯಕವನ್ನು ಬೆಳಗ್ಗೆ ಏಕೆ ಮಂಡಿಸಲಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿರುವುದು ಸಮಂಜವಾಗಿದೆ. ಇಂದು ಸದನದ ವೇಳಾ ಪಟ್ಟಿ ನಿನ್ನೆಯೇ ಸಿದ್ಧಗೊಳ್ಳುತ್ತದೆ. ನಿನ್ನೆ ಅಜೆಂಡಾ ಸಿದ್ಧಗೊಳ್ಳುವ ವೇಳೆ ವಿಧೇಯಕದ ಪ್ರತಿ ಸಿದ್ಧವಾಗಿರಲಿಲ್ಲ. ಅಜೆಂಡಾ ಸಿದ್ಧಪಡಿಸುವುದು ಹಾಗೂ ಅಜೆಂಡಾದಲ್ಲಿ ಏನಿರಬೇಕು ಎಂಬುವುದನ್ನು ನಾನೇ ನಿರ್ಧರಿಸುತ್ತೇನೆ. ಇಂದು ಬೆಳಗ್ಗೆ ವಿಧೇಯಕದ ಪ್ರತಿ ಸಿದ್ಧವಾಗಿರುವ ಮಾಹಿತಿ ಬಂತು. ಅದಕ್ಕೆ ನಿಯಮಾವಳಿ ಪ್ರಕಾರ ಇಂದು ವಿಧೇಯಕವನ್ನು ಮಂಡಿಸಲಾಗಿದೆ. ಈ ಬಗ್ಗೆ ನಾಳೆ ಚರ್ಚೆಗೆ ಅವಕಾಶ ನೀಡುತ್ತೇನೆ ಎಂದರು.

ಪ್ರಮುಖ ಸುದ್ದಿ :-   ಮಂಗಳೂರಲ್ಲಿ ಅಭೂತಪೂರ್ವ ರೋಡ್ ಶೋ : ಕರಾವಳಿ ಜನರ ಬಗ್ಗೆ ಪ್ರಧಾನಿ ಮೋದಿ ಟ್ವೀಟ್‌

 
ರಾಜ್ಯ ಸರ್ಕಾರವು ಪ್ರಸ್ತಾಪಿಸಿರುವ ಮತಾಂತರ ನಿಷೇಧ ಮಸೂದೆಯ ಕೆಲವು ಮಾಹಿತಿ ಇಲ್ಲಿದೆ.

* ಬಲವಂತ, ವಂಚನೆ, ಒತ್ತಾಯ ಹಾಗೂ ಆಮಿಷದ ಮೂಲಕ ಮತಾಂತರ ಹಾಗೂ ಮದುವೆಯ ಭರವಸೆಯ ಮೂಲಕ ನಡೆಸುವ ಮತಾಂತರಕ್ಕೆ ನಿಷೇಧ.‌
* ವ್ಯಕ್ತಿಯು ಆತನ ನಿಕಟ ಪೂರ್ವ ಧರ್ಮಕ್ಕೆ ಮರು ಮತಾಂತರಗೊಂಡರೆ ಅದನ್ನು ಈ ಅಧಿನಿಯಮದ ಅಡಿಯಲ್ಲಿ ಮತಾಂತರವೆಂದು ಪರಿಗಣಿಸಲಾಗುವುದಿಲ್ಲ
*ಮತಾಂತರಗೊಂಡ ವ್ಯಕ್ತಿಯ ಪೋಷಕರು, ಸಹೋದರ, ಸಹೋದರಿ, ಸಹವರ್ತಿ ಮತಾಂತರದ ಬಗ್ಗೆ ದೂರು ನೀಡಬಹುದಾಗಿದೆ.
*ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಐದು ವರ್ಷಗಳ ವರೆಗೆ ಜೈಲು ಶಿಕ್ಷೆ ಹಾಗೂ ೨೫೦೦೦ ಸಾವಿರ ರೂ.ಗಳ ದಂಡ‌ ವಸೂಲಾತಿಗೆ ಅವಕಾಶ.
*ಅಪ್ರಾಪ್ತ ವ್ಯಕ್ತಿ, ಮಹಿಳೆ, ಎಸ್ ಸಿ/ ಎಸ್ ಟಿ ಸೇರಿದ ವ್ಯಕ್ತಿಯ ಬಲವಂತದ ಮತಾಂತರಕ್ಕೆ ಮೂರು ವರ್ಷದಿಂದ ಹತ್ತು ವರ್ಷಗಳ ವರೆಗೆ ಜೈಲು ಶಿಕ್ಷೆ, 50 ಸಾವಿರ ರೂ. ದಂಡ.
* ಮತಾಂತರದ ಉದ್ದೇಶದಿಂದ ಆದ ಮದುವೆಯನ್ನು ಅಸಿಂಧು ಎಂದು ಘೋಷಿಸಲು ನ್ಯಾಯಾಲಯಕ್ಕೆ ಅಧಿಕಾರ
*ಮತಾಂತರವಾಗಲು‌ ಮುಂದಾಗಿರುವ ವ್ಯಕ್ತಿ ಕನಿಷ್ಠ ಮೂವತ್ತು ದಿನಗಳ ಮೊದಲು ಜಿಲ್ಲಾ ದಂಡಾಧಿಕಾರಿಗೆ ಈ ಬಗ್ಗೆ ತಿಳಿಸಬೇಕು.
* ಮತಾಂತರ ಮಾಡುವ ವ್ಯಕ್ತಿಯೂ ಈ ಬಗ್ಗೆ ಜಿಲ್ಲಾ ದಂಡಾಧಿಕಾರಿಗೆ ಮೂವತ್ತು ದಿನಗಳ ಮೊದಲೇ ಈ ಬಗ್ಗೆ ಮಾಹಿತಿ ಕೊಡಬೇಕು.
* ಮತಾಂತರಗೊಂಡ ವ್ಯಕ್ತಿಯೂ ಮತಾಂತರಗೊಂಡ ದಿನಾಂಕದಿಂದ‌ ಹಿಡಿದು ಮೂಲ ಧರ್ಮ, ಮತಾಂತರಗೊಂಡ ಧರ್ಮ ಹಾಗೂ ಇನ್ನಿತರ ಮಾಹಿತಿಯನ್ನು ಜಿಲ್ಲಾಧಿಕಾರಿಗೆ ನೀಡಬೇಕು. ಮತಾಂತರಗೊಂಡ ವ್ಯಕ್ತಿ ತನ್ನ ಗುರುತನ್ನು ಸ್ಥಾಪಿಸಲು ಮತ್ತು ಘೋಷಣೆ ಅಂಶಗಳನ್ನು ಸ್ವೀಕರಿಸಲು ಘೋಷಣೆ ಕಳುಹಿಸಿರುವ/ಸಲ್ಲಿಸಿರುವ ದಿನಾಂಕದಿಂದ 20 ದಿನದೊಳಗೆ ಜಿಲ್ಲಾ ದಂಡಾಧಿಕಾರಿ ಮುಂದೆ ಹಾಜರಾಗಬೇಕು.
*ಈ ಮಾಹಿತಿಯನ್ನು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರ್ ಕಚೇರಿ ಸೂಚನಾ ಫಲಕದಲ್ಲಿ ಹಾಕಬೇಕು. ಇದಕ್ಕೆ 30 ದಿನಗಳ ಒಳಗಾಗಿ ಆಕ್ಷೇಪಣೆ ಬಂದರೆ ಕಂದಾಯ ಅಥವಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳ ಮೂಲಕ ವಿಚಾರಣೆ ನಡೆಸಬೇಕು. ವಿಚಾರಣೆ ವೇಳೆ ತಪ್ಪು ಕಂಡು ಬಂದಲ್ಲಿ ಜಿಲ್ಲಾ ದಂಡಾಧಿಕಾರಿ ಕ್ರಿಮಿನಲ್‌ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆಗೆ ಸೂಚಿಸಲು ಅವಕಾಶವಿದೆ.
*ಬಲವಂತದ ಮತಾಂತರ ಅಲ್ಲ ಎಂಬುದನ್ನು ರುಜುವಾತು ಮಾಡುವ ಹೊಣೆ ಮತಾಂತರ ಮಾಡಿದ ವ್ಯಕ್ತಿ, ಮತಾಂತರಕ್ಕೆ ನೆರವು ನೀಡಿದ ವ್ಯಕ್ತಿ ಮೇಲಿರಲಿದೆ. ಅಪರಾಧಕ್ಕೆ ನೆರವು ಹಾಗೂ ದುಷ್ಪ್ರೇರಣೆ ನೀಡಿ ವ್ಯಕ್ತಿಯನ್ನು ಆರೋಪಿಯನ್ನಾಗಿ ಪರಿಗಣಿಸುವ ಅವಕಾಶವೂ ಇದೆ.

(ಮಂಡನೆಯಾಗಿರುವ ವಿಧೇಯಕದಲ್ಲಿ ಕೆಲ ಅಂಶಗಳು ಬದಲಾವಣೆ ಆಗಿರಬಹುದು)

ಪ್ರಮುಖ ಸುದ್ದಿ :-   ಆರೋಗ್ಯದಲ್ಲಿ ಏರುಪೇರು : ಸಚಿವ ಜಮೀರ್‌ ಅಹ್ಮದ್‌ ಆಸ್ಪತ್ರೆಗೆ ದಾಖಲು

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement