ಸರ್ಕಾರದ ಹಿಡಿತದಿಂದ ದೇಗುಲಗಳನ್ನು ಮುಕ್ತ ಮಾಡುವ ಸರ್ಕಾರದ ನಡೆಗೆ ನಟಿ ಖುಷ್ಬೂ ಸ್ವಾಗತ

ಬೆಂಗಳೂರು: ಸರ್ಕಾರದ ಹಿಡಿತದಿಂದ ದೇವಸ್ಥಾನಗಳನ್ನು ಮುಕ್ತ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾಯ್ದೆ ತರಲು ಮುಂದಾಗಿರುವುದನ್ನು ಚಿತ್ರ ನಟಿ ಹಾಗೂ ಬಿಜೆಪಿ ವಕ್ತಾರರಾದ ಖುಷ್ಬೂ ಸ್ವಾಗತಿಸಿದ್ದಾರೆ.
ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ನಟಿ ಖುಷ್ಬೂ, ದೇವಸ್ಥಾನಗಳು ಮುಕ್ತವಾಗಬೇಕು. ಈಗ ಸರ್ಕಾರದ ಹಿಡಿತದಿಂದ ಮುಕ್ತ ಮಾಡುತ್ತಿರುವುದಕ್ಕೆ ಸ್ವಾಗತವಿದೆ ಎಂದು ಹೇಳಿದರು.
ತಮಿಳುನಾಡಿನಲ್ಲೂ ಇಂತಹ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಒತ್ತಾಯ ಮಾಡಲಾಗುತ್ತಿದೆ. ತಮಿಳು‌ನಾಡು ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡುತ್ತಿದ್ದೇವೆ. ವಿಧಾನಸಭೆ ಚುನಾವಣೆ ವೇಳೆ ತಮಿಳುನಾಡಿನಲ್ಲೂ ದೇವಸ್ಥಾನಗಳನ್ನು ಸರ್ಕಾರದ ಹಿಡಿತದಿಂದ ಮುಕ್ತ ಗೊಳಿಸುವ ಭರವಸೆ ಕೊಡಲಾಗಿತ್ತು ಎಂದು ತಿಳಿಸಿದರು.
ಪ್ರಧಾನಿ ನೇತೃತ್ವದ ಪೋಷಣ್ ಅಭಿಯಾನದಲ್ಲಿ ನಾನೂ ಪಾಲ್ಗೊಂಡಿದ್ದೇನೆ. ಸ್ವಸ್ಥ ಬಾಲಕ್, ಸ್ವಸ್ಥ ಬಾಲಿಕಾ ಸ್ಪರ್ಧೆ ಇದೆ. ಅಪೌಷ್ಟಿಕತೆಯುಳ್ಳ 0-6 ವರ್ಷದ ಮಕ್ಕಳನ್ನು ದೇಶಾದ್ಯಂತ ಪತ್ತೆ ಮಾಡಲಾಗುತ್ತಿದೆ. ಆಶಾವಾಡಿ, ಅಂಗನವಾಡಿಗಳಲ್ಲಿ ಈ ಮಕ್ಕಳ ನೋಂದಣಿ ಮಾಡುವ ಕಾರ್ಯ ನಡೆಯುತ್ತಿದೆ. ಈ ಅಭಿಯಾನವನ್ನು ಕರ್ನಾಟಕ ರಾಜ್ಯದಲ್ಲಿ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ‌ ಜತೆ ಚರ್ಚೆ ನಡೆಸಿದ್ದೇನೆ ಎಂದು ತಿಳಿಸಿದರು.
ಬುಧವಾರ ಹುಬ್ಬಳ್ಳಿಯಲ್ಲಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಿಂದೂ ದೇವಾಲಯಗಳ ಮೇಲಿನ ಸರ್ಕಾರದ ಹಿಡಿತ ಸಡಿಲಗೊಳಿಸಿ ಕಾನೂನು ಕಟ್ಟುಪಾಡುಗಳಿಂದ ಮುಕ್ತಗೊಳಿಸುವ ನಿಟ್ಟಿನಲ್ಲಿ ಕಾಯ್ದೆ ತರಲು ಸರ್ಕಾರ ಮುಂದಾಗಿದೆ. ಬಜೆಟ್‌ನ ಜಂಟಿ ಅಧಿವೇಶನಕ್ಕೂ ಮೊದಲು ಕಾಯ್ದೆ ತರಲು ಸರ್ಕಾರ ಮುಂದಾಗಿದೆ.

ಪ್ರಮುಖ ಸುದ್ದಿ :-   ಕರ್ನಾಟಕ ಬಿಜೆಪಿ ಹಂಚಿಕೊಂಡ ಅನಿಮೇಟೆಡ್ ವೀಡಿಯೊ ತೆಗೆದುಹಾಕಿ ; ಎಕ್ಸ್​ ಗೆ ಚುನಾವಣಾ ಆಯೋಗ ಸೂಚನೆ

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement