ತೆಲಂಗಾಣ ಬಿಜೆಪಿ ಮುಖ್ಯಸ್ಥ, ಸಂಸದ ಬಂಡಿ ಸಂಜಯ್​ ಕುಮಾರಗೆ 14 ದಿನಗಳ ನ್ಯಾಯಾಂಗ ಬಂಧನ

ತೆಲಂಗಾಣ: ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯಕುಮಾರ್​ ಅವರನ್ನು ನಿನ್ನೆ (ಜ.2) ಪೊಲೀಸರು ವಶಕ್ಕೆ ಪಡೆದಿದ್ದು, ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ನೀಡಿದೆ.
ಈ ಕ್ರಮವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಬಲವಾಗಿ ಖಂಡಿಸಿದ್ದು, ಇದು ಅಮಾನವೀಯ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ತೆಲಂಗಾಣದಲ್ಲಿ ಪ್ರಜಾಪ್ರಭುತ್ವ ಸತ್ತುಹೋಗಿದೆ ಎಂದು ಕಿಡಿಕಾರಿದ್ದಾರೆ. ಸುದ್ದಿಗೋಷ್ಠಿ ನಡೆಸಿದ ಜೆ.ಪಿ.ನಡ್ಡಾ, ತೆಲಂಗಾಣ ಪೊಲೀಸರು ಅಲ್ಲಿನ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ನೇತೃತ್ವದ ಸರ್ಕಾರದ ಒತ್ತಡಕ್ಕೆ ಒಳಗಾಗಿದ್ದಾರೆ. ಹೀಗಾಗಿ ಬಂಡಿ ಸಂಜಯಕುಮಾರ್ ಮನೆಗೆ ತೆರಳಿ, ಅವರ ಮೇಲೆ ಲಾಠಿ ಚಾರ್ಜ್ ನಡೆಸಿ ಬಂಧಿಸಿದ್ದಾರೆ ಎಂದು ಜೆ.ಪಿ. ನಡ್ಡಾ ಹೇಳಿದ್ದಾರೆ.
ಇತ್ತೀಚೆಗೆ ತೆಲಂಗಾಣದ ಕೆ.ಚಂದ್ರಶೇಖರ ರಾವ್‌ ಸರ್ಕಾರ, ಉದ್ಯೋಗ ಹಂಚಿಕೆಯಲ್ಲಿ ವಲಯವಾರು ವ್ಯವಸ್ಥೆ ಮಾಡಿ ಆದೇಶ ಹೊರಡಿಸಿತ್ತು. ಆದರೆ ಇದರ ವಿರುದ್ಧ ಶಿಕ್ಷಕರು ಮತ್ತು ಇತರ ಸರ್ಕಾರಿ ಉದ್ಯೋಗಿಗಳು, ಕರೀಂನಗರ ಲೋಕಸಭಾ ಸಂಸದರೂ ಆಗಿರುವ ಬಂಡಿ ಸಂಜಯ್ ಕುಮಾರ್ ಅವರ ಕಚೇರಿಗೆ ಹೋಗಿ ದೂರು ನೀಡಿದ್ದರು. ಇದು ಉದ್ಯೋಗಿಗಳ ವಿರೋಧಿ ಯೋಜನೆ ಎಂಬ ಕಾರಣಕ್ಕೆ ಸಂಜಯ್ ಕುಮಾರ್​, ತಮ್ಮ ಕೆಲವು ಬೆಂಬಲಿಗರೊಂದಿಗೆ ಸೇರಿ ಜನವರಿ 2ರ ರಾತ್ರಿ 9 ರಿಂದ, ಜನವರಿ 3ರ ಮುಂಜಾನೆ 5ಗಂಟೆ ವರೆಗೆ ಪ್ರತಿಭಟನೆ ಮಾಡಲು ನಿರ್ಧರಿಸಿದ್ದರು. ರಾತ್ರಿ ಪೂರ್ತಿ ಮಾಡಲು ಯೋಜಿಸಿದ್ದ ಈ ಪ್ರತಿಭಟನೆಗೆ ಜಾಗರಣ ದೀಕ್ಷಾ ಎಂದು ಹೆಸರಿಡಲಾಗಿತ್ತು. ಆದರೆ ಪ್ರತಿಭಟನೆ ಶುರುಮಾಡುತ್ತಿದ್ದಂತೆ ಪೊಲೀಸರು ಬಂಡಿ ಸಂಜಯಕುಮಾರ್​ರನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಸರ್ಕಾರದ ಕೊವಿಡ್ 19 ನಿರ್ಬಂಧ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಬಂಧಿಸಲಾಗಿದೆ ಎಂದು ಹೇಳಲಾಗಿದೆ.
ಬಂಡಿ ಸಂಜಯಕುಮಾರ್​ ಅವರನ್ನು ನಿನ್ನೆ ಇಡೀ ರಾತ್ರಿ ಮನಾಕೊಂಡೂರ್​ ಪೊಲೀಸ್​ ಠಾಣೆಯಲ್ಲಿಯೇ ಇರಿಸಲಾಗಿತ್ತು. ಇಂದು ಬೆಳಗ್ಗೆ ಹೊತ್ತಿಗೆ ಕರೀಂನಗರ ಪಟ್ಟಣದಲ್ಲಿರುವ ಪೊಲೀಸ್ ತರಬೇತಿ ಕೇಂದ್ರಕ್ಕೆ ಅವರನ್ನು ಕಳುಹಿಸಲಾಗಿತ್ತು. ಬಂಡಿ ಸಂಜಯಕುಮಾರ್ ಜತೆ ಅವರ ಬೆಂಬಲಿಗರನ್ನೂ ಬಂಧಿಸಲಾಗಿದ್ದು, ಅವರೆಲ್ಲರಿಗೂ ಕೊವಿಡ್​ 19 ತಪಾಸಣೆ ಮಾಡಲಾಗುವುದು. ಕರೀಂನಗರ ಪೊಲೀಸ್ ಆಯುಕ್ತ ಸತ್ಯನಾರಾಯಣ ಹೇಳಿದ್ದಾರೆ. ಇನ್ನು ಪೊಲೀಸ್ ತರಬೇತಿ ಕೇಂದ್ರಕ್ಕೆ ಬಂಡಿಯವರನ್ನು ಕರೆದುಕೊಂಡು ಹೋಗುತ್ತಿದ್ದಂತೆ ಅಲ್ಲಿಗೆ ಅನೇಕ ಬಿಜೆಪಿ ಕಾರ್ಯಕರ್ತರು ತೆರಳಿ, ಗಲಾಟೆ-ಪ್ರತಿಭಟನೆ ನಡೆಸಿದ್ದರು. ಇ ಸದ್ಯ ಬಂಧಿತರ ವಿರುದ್ಧ ಎರಡು-ಮೂರು ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement