ಬೆಂಗಳೂರು: ಕೊರೊನಾದ ಮೂರನೇ ಅಲೆ ಅಷ್ಟೊಂದು ದೀರ್ಘವಾಗಿ ಇರುವುದಿಲ್ಲ. ವೇಗವಾಗಿ ಹರಡುತ್ತದೆ ಹಾಗೂ ವೇಗವಾಗಿಯೇ ಮುಕ್ತಾಯವಾಗುತ್ತದೆ. ಹೀಗಾಗಿ ಕನಿಷ್ಠ 4ರಿಂದ 6 ವಾರಗಳು ಜನ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಸಚಿವ ಡಾ.ಸುಧಾಕರ ಹೇಳಿದ್ದಾರೆ
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಅಲೆ ಬೇಗ ಹರಡಿದ್ದರೂ ಅಷ್ಟೇ ವೇಗವಾಗಿ ಕಡಿಮೆ ಆಗುತ್ತದೆ ಎಂದು ಬೇರೆ ದೇಶಗಳಿಂದ ಬಂದ ಮಾಹಿತಿಗಳು ತಿಳಿಸಿವೆ. ಓಮಿಕ್ರಾನ್ ಸೋಂಕು ತಗುಲಿದರೆ ಯಾರೂ ಆತಂಕಪಡಬೇಕಾಗಿಲ್ಲ. ಯಾಕೆಂದರೆ ಓಮಿಕ್ರಾನ್ ಶ್ವಾಸಕೋಶಕ್ಕೆ ಹೋಗುವುದು ಕಡಿಮೆ. ಅದು ಗಂಟಲಲ್ಲಿ ಮಾತ್ರ ಇದು ಇರುತ್ತದೆ ಎಂದು ತಜ್ಞರು ಹೇಳಿದ್ದಾರೆ. ಹೀಗಾಗಿ ಯಾರೂ ಆತಂಕಕ್ಕೆ ಒಳಗಾಗುವುದು ಬೇಡ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಓಮಿಕ್ರಾನ್ ಬಂದರೂ ಎರಡು ಕೋವಿಡ್ ಡೋಸ್ ಲಸಿಕೆ ಪಡೆದವರ ಮೇಲೆ ಪ್ರಭಾವ ಕಡಿಮೆ ಇರುತ್ತದೆ. ಹೀಗಾಗಿ ಜನ ಎರಡು ಡೋಸ್ ಲಸಿಕೆ ಪಡೆಯಬೇಕು. 15-18 ವಯಸ್ಸಿನವರಿಗೆ ನಿನ್ನೆ 3.50 ಲಕ್ಷ ಲಸಿಕೆ ನೀಡಲಾಗಿದೆ. ದೇಶದಲ್ಲಿ ಲಸಿಕೆ ನಿಡೋದ್ರಲ್ಲಿ 3ನೇ ಸ್ಥಾನದಲ್ಲಿ ಇದ್ದೇವೆ. ಈಗಾಗಲೇ 25% ಲಸಿಕೆ ಮಕ್ಕಳಿಗೆ ಕೊಡಲಾಗಿದೆ. 28 ದಿನಗಳು ಆದ ಮೇಲೆ ಮೊದಲ ಡೋಸ್ ಪಡೆದವರಿಗೆ ಎರಡನೇ ಡೋಸ್ ನೀಡಲಾಗುತ್ತದೆ. 10-15 ದಿನಗಳಲ್ಲಿ ಎಲ್ಲಾ ಮಕ್ಕಳಿಗೂ ಮೊದಲ ಡೋಸ್ ಲಸಿಕೆ ಕೊಡುವ ಕೆಲಸ ಮಾಡುತ್ತೇವೆ ಎಂದರು.
60 ವರ್ಷ ಮೇಲ್ಪಟ್ಟವರಿಗೆ 3ನೇ ಡೋಸ್ ಜನವರಿ 10 ರಿಂದ ನೀಡಲಾಗುತ್ತದೆ. ಕೊರೊನಾ ವಾರಿಯರ್ಸ್ ಹಾಗೂ ಮುಂಚೂಣಿ ಕಾರ್ಯಕರ್ತರಿಗೆ 3ನೇ ಡೋಸ್ ಲಸಿಕೆ ನೀಡುತ್ತೇವೆ. ಜನರು, ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳ ಸಹಕಾರ ಮುಖ್ಯ. ಆರೋಗ್ಯದ ತುರ್ತು ಪರಿಸ್ಥಿತಿ ಇರುವುದರಿಂದ ಜನರು, ರಾಜಕೀಯ ಪಕ್ಷಗಳು ಸಹಕಾರ ಕೊಡಬೇಕು ಎಂದು ಮನವಿ ಮಾಡಿದರು.
ನಿಮ್ಮ ಕಾಮೆಂಟ್ ಬರೆಯಿರಿ