ದೊಡ್ಡಬಳ್ಳಾಪುರ: ಪಟ್ಟಣದಲ್ಲಿ ಬೆಳೆದಿದ್ದ ಹೆಂಡತಿಗೆ ವಾರಕ್ಕೊಮ್ಮೆ ಹೊಟೇಲ್ನಲ್ಲಿ ಊಟ ಮಾಡುವ ಆಸೆಗೆ ಹಳ್ಳಿಯವನಾದ ತನ್ನ ಗಂಡ, ತಣ್ಣೀರು ಎರೆಚಿದ ಎಂಬ ಕಾರಣಕ್ಕೆ ಜುಗುಪ್ಸೆಗೊಂಡ ಮಹಿಳೆ, ಎರಡು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ಎಸ್. ಎಂ. ಗೊಲ್ಲಹಳ್ಳಿಯಲ್ಲಿ ಘಟನೆ ನಡೆದಿದ್ದು, ಹಳ್ಳಿ ಗಂಡನ ವರ್ತನೆಗೆ ಬೇಸತ್ತ ಹೆಂಡತಿ ತನ್ನ ಎರಡು ಮಕ್ಕಳ ಜೊತೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹೊತ್ತಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಸಂಧ್ಯಾ (33 ) ಆತ್ಮಹತ್ಯೆಗೆ ಶರಣಾದ ತಾಯಿ, ತನ್ನ ಮಕ್ಕಳಾದ ಕುಸುಮಾ (4 ) ಮತ್ತು ರೋಹಿತ್ (2) ಮಕ್ಕಳನ್ನೂ ಜೊತೆಯಲ್ಲಿ ಸೇರಿಸಿಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ.
ಎಸ್ ಎಂ ಗೊಲ್ಲಹಳ್ಳಿಯಲಹಂಕದ ಮಾರುತಿ ನಗರದ ಸಂಧ್ಯಾ, ಪಟ್ಟಣದಲ್ಲಿ ಬೆಳೆದ ಹುಡುಗಿ. ಕಳೆದ 5 ವರ್ಷದ ಹಿಂದೆ ಎಸ್ ಎಂ ಗೊಲ್ಲಹಳ್ಳಿಯ ಶ್ರೀಕಾಂತ್ ಎಂಬವರಿಗೆ ಸಂಧ್ಯಾಳ ಅವರನ್ನು ಮದುವೆ ಮಾಡಿ ಕೊಡಲಾಗಿತ್ತು. ಶ್ರೀಕಾಂತನ ಅಪ್ಪ- ಅಮ್ಮ ಸಹ ಇವರ ಜೊತೆಯಲ್ಲೇ ವಾಸವಾಗಿದ್ದರು. ಪಟ್ಟಣದಲ್ಲಿ ಬೆಳೆದಿದ್ದ ಸಂಧ್ಯಾಳಿಗೆ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಹೊರಗಡೆ ಹೋಗಿ ಹೊಟೇಲ್ನಲ್ಲಿ ಊಟ-ತಿಂಡಿ ತಿನ್ನುವ ಅಭ್ಯಾಸ. ಮದುವೆಯಾದ ನಂತರ ತನ್ನ ಗಂಡನಿಗೆ ಹೊರಗಡೆ ಊಟಕ್ಕೆ ಕರೆದುಕೊಂಡು ಹೋಗುವಂತೆ ನಿತ್ಯ ಹೇಳುತ್ತಿದ್ದಳು. ಆದರೆ ಹಳ್ಳಿಯವನಾದ ಶ್ರೀಕಾಂತ್, ಹೊಟೇಲ್ಗೆ ಊಟಕ್ಕೆ ಕರೆದುಕೊಂಡು ಹೋಗುತ್ತಿರಲಿಲ್ಲ. ಈ ಬಗ್ಗೆ ಸಂಧ್ಯಾ ತನ್ನ ತಂದೆ-ತಾಯಿ ಬಳಿ ಹೇಳಿಕೊಂಡಿದ್ದಳು ಎನ್ನಲಾಗಿದೆ. ಗಂಡನ ವರ್ತನೆಯಿಂದ ಬೇಸತ್ತ ಸಂಧ್ಯಾ, ಮನೆಯಲ್ಲಿ ಗಂಡ, ಅತ್ತೆ, ಮಾವ ಇಲ್ಲದ ಸಮಯದಲ್ಲಿ ನಿನ್ನೆ ಮಧ್ಯಾಹ್ನ 1 ಗಂಟೆಗೆ ಸುಮಾರಿಗೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾಳೆ. ಬೆಂಕಿಹಚ್ಚಿಕೊಂಡ ವೇಳೆ ತನ್ನ ಮಕ್ಕಳನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದಳು ಎನ್ನಲಾಗಿದೆ. ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ನೆರೆಹೊರೆಯವರು ಬಾಗಿಲನ್ನು ತೆಗೆದು ಒಳ ಹೋದಾಗ ಮಕ್ಕಳು ಸೇರಿದಂತೆ ತಾಯಿ ಅರ್ಧ ಬೆಂದು ಹೋಗಿದ್ದರು. ಕೂಡಲೇ ಸಂಧ್ಯಾ ಮತ್ತು ಆಕೆಯ ಮಕ್ಕಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಮೂವರೂ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ನಿಮ್ಮ ಕಾಮೆಂಟ್ ಬರೆಯಿರಿ