ಮೈಸೂರು: ಸ್ವಯಂ ಉದ್ಯೋಗಕ್ಕಾಗಿ ಸಾಲ ಪಡೆಯಲು ಬ್ಯಾಂಕಿಗೆ ಅಲೆದಾಡಿದರೂಆರ್ಥಿಕ ನೆರವು ದೊರೆಯದಿದ್ದಾಗ ಮಹಿಳೆಯೊಬ್ಬರು ಬ್ಯಾಂಕಿನ ಮುಂಭಾಗದಲ್ಲಿಯೇ ಧರಣಿಗೆ ಕುಳಿತು ನ್ಯಾಯ ಪಡೆದ ಘಟನೆ ಮೈಸೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಮಹಿಳೆಯ ಹೋರಾಟದಿಂದ ಎಚ್ಚೆತ್ತ ಬ್ಯಾಂಕಿನ ಅಧಿಕಾರಿಗಳು ಆ ಮಹಿಳೆಗೆ ಸಾಲ ಸೌಲಭ್ಯ ನೀಡುವ ಭರವಸೆ ನೀಡಿದ್ದಾರೆ. ಮೈಸೂರಿನ ನೀಲಿ ಕಲಾ ಕ್ರಿಯೇಷನ್ಸ್ನ ಸಂಸ್ಥಾಪಕಿ, ಮಣ್ಣಿನ ಆಭರಣಗಳ ವಿನ್ಯಾಸಕಿ ಹಾಗೂ ಶಿಕ್ಷಕಿಯಾದ ಜೆ.ಮಂಜುಳಾ ಬ್ಯಾಂಕಿನಿಂದ ಸಾಲ ಪಡೆಯಲು ಬ್ಯಾಂಕ್ ಎದುರೇ ಧರಣಿ ನಡೆಸಿದರು.
ಮೈಸೂರಿನ ಬಂಬೂ ಬಜಾರಿನಲ್ಲಿರುವ ಎಸ್ಬಿಐ ಶಾಖೆಯಲ್ಲಿ ಆರ್ಥಿಕ ನೆರವಿಗಾಗಿ ಅವರು ಅರ್ಜಿ ಸಲ್ಲಿಸಿದ್ದರು. ತಿಂಗಳು ಗಟ್ಟಲೆ ಅಲೆಸಿದ ನಂತರ ಸಾಲ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ತಾವು ಅನುಭವಿಸಿದ ಕಿರಿಕಿರಿಯನ್ನು ತಮ್ಮ ಫೇಸ್ಬುಕ್ ಪುಟದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದ ಅವರು ನಂತರ ಬ್ಯಾಂಕಿನ ಮುಂಭಾಗ ಏಕಾಂಗಿಯಾಗಿ ಧರಣಿಗೆ ಕುಳಿತರು. ಇದಾದ ಕೆಲವೇ ಸಮಯದಲ್ಲಿ, ಬ್ಯಾಂಕಿನ ಹಿರಿಯ ಅಧಿಕಾರಿಗಳು ಅವರೊಂದಿಗೆ ಸಮಾಲೋಚನೆ ನಡೆಸಿ, ಸಾಲ ಸೌಲಭ್ಯಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ. ಬ್ಯಾಂಕಿನ ಹಿರಿಯ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ ಎಂದು ಖುದ್ದು ಮಂಜುಳಾ ಅವರೇ ಫೇಸ್ಬುಕ್ ಪುಟದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅವರ ಈ ಏಕಾಂಗಿ ಹೋರಾಟಕ್ಕೆ ಆಕ್ಟ್ 1978 ಚಿತ್ರದ ಪ್ರೇರಣೆ ಎಂದು ಅವರು ಬರೆದುಕೊಂಡಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ