ಲಕ್ನೋ: ಸಮಾಜವಾದಿ ಪಕ್ಷದ (ಎಸ್ಪಿ) ಅಧ್ಯಕ್ಷ ಅಖಿಲೇಶ್ ಯಾದವ್ 2022ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮೈನ್ಪುರಿ ಜಿಲ್ಲೆಯ ಕರ್ಹಾಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ವರದಿಗಳು ಗುರುವಾರ ತಿಳಿಸಿವೆ.
ಅಜಂಗಢ ಕ್ಷೇತ್ರದ ಸಂಸದರಾಗಿರುವ ಅಖಿಲೇಶ ಅವರು ತಮ್ಮ ಕ್ಷೇತ್ರದ ಜನರೊಂದಿಗೆ ಮಾತನಾಡಿದ ನಂತರ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ನಿರ್ಧರಿಸುವುದಾಗಿ ಬುಧವಾರ ಹೇಳಿದ್ದಾರೆ. ಪಕ್ಷದ ಅಧ್ಯಕ್ಷರು ಮೈನ್ಪುರಿಯ ಕರ್ಹಾಲ್ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು ಅಶುತೋಷ್ ವರ್ಮಾ ಗುರುವಾರ ತಿಳಿಸಿದ್ದಾರೆ. ಎಸ್ಪಿ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರು ಸಂಸತ್ತಿನಲ್ಲಿ ಮೈನ್ಪುರಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ ಇಂದು ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.
ಕರ್ಹಾಲ್ ಸಮಾಜವಾದಿ ಭದ್ರಕೋಟೆಯಾಗಿದೆ ಮತ್ತು ಮುಲಾಯಂ ಸಿಂಗ್ ಯಾದವ್ ಲೋಕಸಭೆಯಲ್ಲಿ ಮೈನ್ಪುರಿ ಸಂಸದೀಯ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ. ಕರ್ಹಾಲ್ ಕ್ಷೇತ್ರದಲ್ಲಿ 1.44 ಲಕ್ಷ ಯಾದವ ಮತದಾರರಿದ್ದಾರೆ ಮತ್ತು ಸಮಾಜವಾದಿ ನಾಯಕತ್ವಕ್ಕೆ ‘ಸುರಕ್ಷಿತ’ ಎಂದು ಪರಿಗಣಿಸಲಾಗಿದೆ.
ಅಖಿಲೇಶ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಇದೇ ಮೊದಲು.
ಎಸ್ಪಿ ವಕ್ತಾರ ಅನುರಾಗ್ ಭದೌರಿಯಾ ಮಾತನಾಡಿ, ಅಖಿಲೇಶ ಅವರು ಚುನಾವಣೆಗೆ ಸ್ಪರ್ಧಿಸುವುದರಿಂದ ಇಡೀ ಪಕ್ಷದ ಕಾರ್ಯಕರ್ತರು ಉತ್ಸುಕರಾಗಿದ್ದಾರೆ ಮತ್ತು ಅವರು ಶಾಸಕರನ್ನು ಅಲ್ಲ, ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ ಎಂಬುದು ಜನರಿಗೆ ತಿಳಿದಿದೆ ಎಂದು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ