ಉಡುಪಿ: ಉಡುಪಿಯಲ್ಲಿ ಹಿಜಾಬ್, ಕೇಸರಿ ಶಾಲು ವಿವಾದ ಜೋರಾಗಿದ್ದು, ಹೈಕೋರ್ಟ್ನಲ್ಲಿ ಇಂದು ಮಹತ್ವದ ವಿಚಾರಣೆ ನಡೆಯಲಿರುವ ಮಧ್ಯೆ ಉಡುಪಿಯ ಎಂಜಿಎಂ ಕಾಲೇಜಿನಲ್ಲಿ ಹಿಜಾಬ್ ಧರಿಸಿ ವಿದ್ಯಾರ್ಥಿನಿಯರು ಬಂದರೆ, ವಿದ್ಯಾರ್ಥಿಗಳು ಕೇಸರಿ ಪೇಟ, ಶಾಲು ಧರಿಸಿ ಕಾಲೇಜಿಗೆ ಆಗಮಿಸಿದ್ದರಿಂದ ಉದ್ವಿಗ್ವ ಪರಿಸ್ಥಿತಿ ನಿರ್ಮಾಣವಾಗಿದೆ.
ವಿದ್ಯಾರ್ಥಿನಿಯರು ಬುರ್ಖಾ, ಹಿಜಾಬ್ ಧರಿಸಿ ಬಂದಿದ್ದು ಇದಕ್ಕೆ ಪ್ರತಿಯಾಗಿ ಕೇಸರಿ ಪೇಟ, ಕೇಸರಿ ಶಾಲು ತೊಟ್ಟು ವಿದ್ಯಾರ್ಥಿಗಳು ಕಾಲೇಜಿಗೆ ಬಂದಿದ್ದಾರೆ. ಆಡಳಿತ ಮಂಡಳಿ ಕಾಲೇಜ್ ಗೇಟಿಗೆ ಬೀಗ ಹಾಕಿದ್ದು, ಕೇಸರಿ ಪೇಟ ತೊಟ್ಟ ವಿದ್ಯಾರ್ಥಿಗಳು ಹಾಗೂ ಹಿಜಾಬ್ ಹಾಗೂ ಬುರ್ಖಾ ಧರಿಸಿ ಬಂದ ವಿದ್ಯಾರ್ಥಿನಿಯರು ಆವರಣದ ಹೊರಗೆ ಕಾಯುತ್ತಿದ್ದಾರೆ.
ವಿಶ್ರಾಂತಿ ಕೊಠಡಿಯಲ್ಲಿ ಬುರ್ಖಾ ತೆಗೆದಿರಿಸಿ ಬರಲು ಕಾಲೇಜು ಸೂಚನೆ ನೀಡಿದೆ. ಹಿಜಾಬ್ಗೆ ಅವಕಾಶ ನೀಡಿದರೆ ನಮಗೂ ಕೇಸರಿ ಶಾಲು ಧರಿಸಲು ಅವಕಾಶ ನೀಡಿ ಎಂದು ವಿದ್ಯಾರ್ಥಿಗಳು ಪಟ್ಟುಹಿಡಿದಿದ್ದಾರೆ. ಕಾಲೇಜು ಆವರಣ ಒಳಗಡೆ ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ಪ್ರಾಂಶುಪಾಲ ಡಾ. ದೇವಿದಾಸ್ ನಾಯಕ್ ಆಗಮಿಸಿದ್ದು, ಪ್ರಾಧ್ಯಾಪಕರು ಕೂಡ ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸುತ್ತಿದ್ದಾರೆ.
ಹಿಜಾಬ್ ಧರಿಸುವ ಹಕ್ಕಿಗಾಗಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ 8 ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದು, ಇಂದು ಪ್ರಕರಣದ ವಿಚಾರಣೆ ನಡೆಯಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ