ನವದೆಹಲಿ: ಕರ್ನಾಟಕದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ಕುರಿತು ಉಂಟಾದ ತೀವ್ರ ವಿವಾದದ ಹಿನ್ನೆಲೆಯಲ್ಲಿ, ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರು ಹಿಜಾಬ್ ಎಂಬುದು ಇಸ್ಲಾಂ ಧರ್ಮದ ಆಚರಣೆಯಲ್ಲಿ ಅಂತರ್ಗತವಾಗಿಲ್ಲ ಎಂದು ಹೇಳಿದ್ದಾರೆ.
ಕೆಲವು ಕಾಲೇಜುಗಳು ಮತ್ತು ಶಾಲೆಗಳಲ್ಲಿ ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದನ್ನು ನಿಷೇಧಿಸಿದರೆ ಸಿಖ್ಖರಿಗೆ ಟರ್ಬನ್ ಧರಿಸಲು ಅವಕಾಶವಿದೆಯಲ್ಲ ಎಂದು ಹೇಳುವ ವಾದವು “ಅಪರಾಧ” ಎಂದು ಅವರು ಹೇಳಿದ್ದಾರೆ.
ಸಿಖ್ ಧರ್ಮದಲ್ಲಿ, ಪೇಟವನ್ನು ಧರ್ಮಕ್ಕೆ ಅತ್ಯಗತ್ಯವೆಂದು ಪರಿಗಣಿಸಲಾಗಿದೆ ಮತ್ತು ಸ್ವೀಕರಿಸಲಾಗಿದೆ. ಮತ್ತೊಂದೆಡೆ, ಮಹಿಳೆಯರ ಉಡುಪಿನ ಸಂದರ್ಭದಲ್ಲಿ ಹಿಜಾಬ್ ಬಗ್ಗೆ ಕುರಾನ್ನಲ್ಲಿ ಯಾವುದೇ ಉಲ್ಲೇಖವನ್ನು ಕಾಣುವುದಿಲ್ಲ ಎಂದು ಆರಿಫ್ ಮೊಹಮ್ಮದ್ ಖಾನ್ ಅವರು ಇಂಡಿಯಾ ಟುಡೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.
“ಪಟ್ಟಭದ್ರ ಹಿತಾಸಕ್ತಿಗಳು” ಯುವ ಮುಸ್ಲಿಂ ಮಹಿಳೆಯರನ್ನು ಹಿಜಾಬ್ ಧರಿಸುವ ಹಕ್ಕಿಗಾಗಿ ಪ್ರತಿಭಟಿಸಲು ಪ್ರಚೋದಿಸುತ್ತಿವೆ ಎಂದು ಅವರು ಆರೋಪಿಸಿದರು.
ಈ “ಪಟ್ಟಭದ್ರ ಹಿತಾಸಕ್ತಿಗಳು” ಮುಸ್ಲಿಂ ಮಹಿಳೆಯರನ್ನು “ಅಂಧಕಾರ ಯುಗಕ್ಕೆ ತಳ್ಳಲು” ಬಯಸುತ್ತವೆ ಎಂದು ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. ಹೊರಗಿನವರ ಪ್ರಚೋದನೆಗೆ ಒಳಗಾಗಬೇಡಿ, ಓದಿನ ಕಡೆ ನೀವು ಗಮನ ಹರಿಸಿ’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾರ್ಥಿನಿಯರು ಪ್ರವೇಶಕ್ಕಾಗಿ ಅರ್ಜಿ ಸಲ್ಲಿಸಿದಾಗ ಈ ಡ್ರೆಸ್ ಕೋಡ್ ಜಾರಿಯಲ್ಲಿರಲಿಲ್ಲವೇ ಎಂಬುದು ನನ್ನ ಮನಸ್ಸಿನಲ್ಲಿರುವ ಮೂಲಭೂತ ಪ್ರಶ್ನೆಯಾಗಿದೆ. ಅದು ಜಾರಿಯಲ್ಲಿದ್ದರೆ ಈ ವಿದ್ಯಾರ್ಥಿನಿಯರು ಏಕೆ ಈಗ ಈ ವಿಷಯವನ್ನು ಎತ್ತುತ್ತಿದ್ದಾರೆಂದು ನನಗೆ ಅರ್ಥವಾಗುವುದಿಲ್ಲ ಎಂದು ಅವರು ಹೇಳಿದರು.
ಮುಸ್ಲಿಂ ಮಹಿಳೆಯರಿಗೇ ಹಾನಿ
ಕೇರಳದ ಗವರ್ನರ್ ಆರಿಫ್ ಮೊಹಮ್ಮದ್ ಖಾನ್ ಪ್ರಕಾರ, ಹಿಜಾಬ್ ಧರಿಸುವ ಹಕ್ಕಿಗಾಗಿ ಪ್ರತಿಭಟಿಸುವವರ ವಾದವನ್ನು ಒಪ್ಪಿಕೊಂಡರೆ “ಸೋಲುವವರು” ಮುಸ್ಲಿಂ ಮಹಿಳೆಯರು.
ಅವರನ್ನು [ಪ್ರತಿಭಟಿಸುವ ಮುಸ್ಲಿಂ ಮಹಿಳೆಯರನ್ನು] ಸಮಾಜವನ್ನು ವಿಭಜಿಸಲು ಮತ್ತು ಸರ್ಕಾರವನ್ನು ಮುಜುಗರಕ್ಕೀಡುಮಾಡಲು ಏನು ಬೇಕಾದರೂ ಮಾಡುವವರು ಬಳಸಿಕೊಳ್ಳುತ್ತಿದ್ದಾರೆ. ಈ ಜನರು ಮುಸ್ಲಿಂ ಲೀಗ್ನ ಪರಂಪರೆಯನ್ನು ಅನುಸರಿಸುತ್ತಿದ್ದಾರೆ. ಈ ಅನುಪಯುಕ್ತವಲ್ಲದ ವಿಷಯಗಳಲ್ಲಿ ಎಷ್ಟು ದಿನ ತೊಡಗುತ್ತಾರೆ ಎಂದು ಅವರು ಪ್ರಶ್ನಿಸಿದರು.
ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ನಿಷೇಧದ ಕುರಿತು ನೊಬೆಲ್ ಪ್ರಶಸ್ತಿ ವಿಜೇತೆ ಮಲಾಲಾ ಯೂಸುಫ್ಜಾಯ್ ಅವರ ಟೀಕೆಗೆ ಪ್ರತಿಕ್ರಿಯಿಸಿದ ಅವರು, “ಅವರಿಗೆ ತಪ್ಪು ಮಾಹಿತಿ ನೀಡಿರಬಹುದು. ಈ ವಾದವನ್ನು ಒಪ್ಪಿಕೊಂಡರೆ, ಮುಸ್ಲಿಂ ಮಹಿಳೆಯರು ಹೆಚ್ಚು ತೊಂದರೆ ಅನುಭವಿಸುತ್ತಾರೆ ಎಂದು ಅವರು ತಿಳಿದಿರುವುದಿಲ್ಲ. ಮಹಿಳೆಯರನ್ನು ನಿಗ್ರಹಿಸುವ” ಮನಸ್ಥಿತಿಯನ್ನು ಇದರ ಹಿಂದಿರುವವರು ಹೊಂದಿದ್ದಾರೆ ಎಂದು ಅವರು ಹೇಳಿದರು.
ಹಿಜಾಬ್ ಧರಿಸಿದ ಕಾರಣಕ್ಕೆ ಉಡುಪಿಯಲ್ಲಿರುವ ತಮ್ಮ ಕಾಲೇಜಿಗೆ ಮುಸ್ಲಿಂ ಯುವ ವಿದ್ಯಾರ್ಥಿಗಳ ಗುಂಪನ್ನು ಪ್ರವೇಶಿಸಲು ಅನುಮತಿ ನೀಡದ ನಂತರ ಕರ್ನಾಟಕ ಹಿಜಾಬ್ ವಿವಾದ ಉಂಟಾಗಿದೆ. ಹೆಚ್ಚಿನ ಕಾಲೇಜುಗಳು ಮತ್ತು ಶಾಲೆಗಳು ಇದೇ ರೀತಿಯ ಆದೇಶಗಳನ್ನು ನೀಡಿದ್ದರಿಂದ ಈ ಸಮಸ್ಯೆ ರಾಜ್ಯಾದ್ಯಂತ ಹರಡಿತು. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ಗಳನ್ನು ಧರಿಸುವ ಹಕ್ಕಿನ ಪರವಾಗಿ ಮತ್ತು ವಿರುದ್ಧವಾಗಿ ಪ್ರತಿಭಟನೆಗಳು ನಡೆದವು. ಹಿಜಾಬ್ ವಿರೋಧಿಸುವವರು ಕೇಸರಿ ಸ್ಕಾರ್ಫ್ ಧರಿಸಿದ್ದರು.
ರಾಷ್ಟ್ರೀಯ ರಾಜಕೀಯ ಪಕ್ಷಗಳು ಈ ವಿಷಯದ ಬಗ್ಗೆ ಪರಸ್ಪರ ವಾಗ್ದಾಳಿ ನಡೆಸುವುದರೊಂದಿಗೆ ವಿವಾದವು ಮತ್ತಷ್ಟು ಉಲ್ಬಣವಾಯಿತು. ಇದೀಗ ಪ್ರತಿಭಟನೆಗಳು ರಾಷ್ಟ್ರದ ವಿವಿಧ ಭಾಗಗಳಿಗೆ ವ್ಯಾಪಿಸಿದ್ದು, ಸದ್ಯ ಪ್ರಕರಣ ಹೈಕೋರ್ಟ್ನಲ್ಲಿದೆ.
ನಿಮ್ಮ ಕಾಮೆಂಟ್ ಬರೆಯಿರಿ