ಚೆಂಬೆಳಕಿನ‌ ಕವಿ, ನಾಡೋಜ ಚೆನ್ನವೀರ ಕಣವಿ ಅಸ್ತಂಗತ

ಹುಬ್ಬಳ್ಳಿ: ಚೆಂಬೆಳಕಿನ‌ ಕವಿ ಎಂದೇ ಹೆಸರಾಗಿದ್ದ ನಾಡೋಜ ಚೆನ್ನವೀರ ಕಣವಿ(93) ಅಸ್ತಂಗತರಾಗಿದ್ದಾರೆ.
ಅನಾರೋಗ್ಯದಿಂದ ದಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಾಗಿದ್ದ ನಾಡೋಜ ಚೆನ್ನವೀರ ಕಣವಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕಣವಿ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಧಾರವಾಡದ ಎಸ್​ಡಿಎಂ ಆಸ್ಪತ್ರೆ ಹೆಲ್ತ್ ಬುಲೆಟಿನ್​ ಬಿಡುಗಡೆ ಮಾಡಿತ್ತು.

ಉಸಿರಾಟ ಸಮಸ್ಯೆಯಿಂದ ಸರಿಯಾಗಿ ತಿಂಗಳು ಹಿಂದೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಹಿರಿಯ ಕವಿ ನಾಡೋಜ ಚೆನ್ನವೀರ ಕಣವಿ ಅವರ ಆರೋಗ್ಯ ತೀರಾ ಹದಗೆಟ್ಟಿತ್ತು. ಜೊತೆಗೆ ಕಣವಿ ಅವರಿಗಿದ್ದ ಎದೆಯ ಸೋಂಕು ಕಡಿಮೆಯಾಗಿರಲಿಲ್ಲ. ಜೊತೆಗೆ ರಕ್ತದೊತ್ತಡವು ಕಡಿಮೆಯಾಗುತ್ತಿದ್ದು ನಿಯಂತ್ರಣಕ್ಕೆ ಬಂದಿರಲಿಲ್ಲ,. ಹೀಗಾಗಿ ಚಿಕಿತ್ಸೆ ಫಲಿಸದೇ ಕಣವಿಯವರು ನಿಧನರಾಗಿದ್ದಾರೆ.ಕಣವಿಯವರ ಶ್ವಾಸಕೋಶದಲ್ಲಿ ಸೋಂಕಿನ ತೀವ್ರತೆ ಹೆಚ್ಚಾಗಿದ್ದು, ಎದೆ ಭಾಗದಲ್ಲಿ ಹೆಚ್ಚಿನ ಸೋಂಕು ಹರಡಿ ಶ್ವಾಸಕೋಶ ಉಸಿರಾಟದ ಶಕ್ತಿ ಕಳೆದುಕೊಂಡಿತ್ತು.
ಅಕ್ಯೂಟ್​ ರೆಸ್ಪಿರೇಟರಿ ಡಿಸ್ಟ್ರೆಸ್​ ಸಿಂಡ್ರೋಮ್​ನಿಂದ (ARDS) ಚೆನ್ನವೀರ ಕಣವಿ ಬಳಲುತ್ತಿದ್ದರು. ಸುಮಾರು ಒಂದು ತಿಂಗಳಿನಿಂದ ಎಸ್​ಡಿಎಂ ಆಸ್ಪತ್ರೆಯಲ್ಲಿ ಕಣವಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು. ನಂತರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದರೂ ಮತ್ತೆ ಆರೋಗ್ಯ ಕ್ಷೀಣಿಸಿತ್ತು. ಕಣವಿಯವರಿಗೆ ಕೊರೊನಾ ಸೋಂಕು ಕೂಡ ದೃಢಪಟ್ಟಿತ್ತು. ಕೊರೊನಾ ಕಾರಣಕ್ಕೆ ಜನವರಿ 14ರಂದು ಆಸ್ಪತ್ರೆಗೆ ದಾಖಲಾಗಿದ್ದ ಚನ್ನವೀರ ಕಣವಿ ಅವರು ಕೆಲವು ದಿನಗಳ ಹಿಂದೆಯೇ ಕೋವಿಡ್​ನಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದರು. ನಂತರ ಅಲ್ಲಿಯೇ ಇನ್ನಿತರ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯುತ್ತಿದ್ದರು.

ಚನ್ನವೀರ ಕಣವಿ ಜೀವನ
ಕಣವಿ ಅವರು 28-6-1928ರಂದು ಗದಗ ತಾಲೂಕಿನ ಹೊಂಬಳದಲ್ಲಿ ಜನಿಸಿದರು. ತಂದೆ ಸಕ್ಕರೆಪ್ಪ ಹಾಗೂ ತಾಯಿ ಪಾರ್ವತವ್ವ. ತಂದೆ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ನಾಲ್ಕನೇ ತರಗತಿವರೆಗೆ ಶಿರುಂದದಲ್ಲಿಯೇ ಶಿಕ್ಷಣ ಪಡೆದು ಬಳಿಕ ಧಾರವಾಡ ತಾಲೂಕಿನ ಗರಗ ಶಾಲೆಯಲ್ಲಿ 7ನೇ ತರಗತಿವರೆಗೆ ಶಿಕ್ಷಣ ಪಡೆದರು. ಮುಲ್ಕಿ ಪರೀಕ್ಷೆಯಲ್ಲಿ ಧಾರವಾಡ ಕೇಂದ್ರಕ್ಕೆ ಪ್ರಥಮ ಸ್ಥಾನ ಪಡೆದ್ದ ಅವರು, ಧಾರವಾಡದ ಮುರುಘಾಮಠದಲ್ಲಿದ್ದುಕೊಂಡು ಹೈಸ್ಕೂಲ್ ಶಿಕ್ಷಣ ಮುಗಿಸಿ ಕರ್ನಾಟಕ ಕಾಲೇಜ್​ನಲ್ಲಿ ಬಿಎ ಶಿಕ್ಷಣ ಪಡೆದಿದ್ದಾರೆ. ಕಾಲೇಜ್ ವಿದ್ಯಾರ್ಥಿಯಾಗಿದ್ದಾಗ ಕಣವಿಯವರ ಕವನಗಳನ್ನು ನೋಡಿ ಡಿವಿಜಿಯವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರಂತೆ.
1952ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂಎ ಪದವಿ ಪಡೆದ ಅವರು ಅದೇ ವಿವಿಯ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿ ಕೆಲಸ ಆರಂಭಸಿದ್ದರು. ಬಳಿಕ 1956ರಲ್ಲಿ ಅದೇ ಪ್ರಸಾರಾಂಗ ವಿಭಾಗದ ನಿರ್ದೇಶಕರಾಗಿ 1983ರವರೆಗೆ ಸೇವೆ ಸಲ್ಲಿಸಿದರು. ಪತ್ನಿ ಶಾಂತಾದೇವಿ ಕೂಡ ಸಾಹಿತಿ, ಕನ್ನಡದ ಖ್ಯಾತಿ ಕತೆಗಾರ್ತಿ ಪತ್ನಿ ನಿಧನದ ಬಳಿಕ ಸ್ವಲ್ಪ ಲವಲವಿಕೆ ಕಳೆದುಕೊಂಡಿದ್ದರು.
ಚೆನ್ನವೀರ ಕಣವಿಯವರು ಸುಮಾರು 36ಕ್ಕೂ ಹೆಚ್ಚು ಗ್ರಂಥಗಳನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ್ದಾರೆ. ಇದರಲ್ಲಿ 16 ಕವನ ಸಂಕಲನ, 5 ವಿಮರ್ಷಾ ಗ್ರಂಥಗಳು, ಹಕ್ಕಿ ಪುಕ್ಕ ಹಾಗೂ ಚಿಣ್ಣರ ಲೋಕವ ತೆರೆಯೋಣ ಎಂಬ ಎರಡು ಮಕ್ಕಳ ಪುಸ್ತಕ ಸೇರಿವೆ. ಇದಲ್ಲದೆ ಅನೇಕ ಅಮೂಲ್ಯ ಗ್ರಂಥಗಳನ್ನು ರಚಿಸಿದ್ದಾರೆ.ಡಾ. ಚನ್ನವೀರ ಕಣವಿ ಮೊದಲ ಕವಲ ಸಂಕಲನ ಕಾವ್ಯಾಕ್ಷಿ 1949ರಲ್ಲಿ ಬಿಡುಗಡೆಯಾಗಿತ್ತು. ಆಕಾಶಬುಟ್ಟಿ, ಮಧುಚಂದ್ರ, ಮಣ್ಣಿನ ಮೆರವಣಿಗೆ, ದಾರಿ ದೀಪ, ನೆಲ ಮುಗಿಲು, ಎರಡು ದಡ, ನಗರದಲ್ಲಿ ನೆರಳು, ಜೀವಧ್ವನಿ, ಕಾರ್ತಿಕದ ಮೋಡ, ಜೀನಿಯಾ, ಹೊಂಬೆಳಕು, ಶಿಶಿರದಲ್ಲಿ ಬಂದ ಸ್ನೇಹಿತ, ಚಿರಂತನ ದಾಹ, ವಿಶ್ವಭಾರತಿಗೆ ಕನ್ನಡದಾರತಿ, ಮುಂಜಾವದಲಿ ಹಸಿರು ಹುಲ್ಲು ಮಕಮಲ್ಲಿನಲಿ, ಹೂವು ಹೊರಳುವವು ಸೂರ್ಯನ ಕಡೆಗೆ, ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ, ಜನಪ್ರಿಯ ಕಾವ್ಯಗಳು ಕವನ ಸಂಕಲನ ಮಾಡಿದ್ದಾರೆ. ಕಾವ್ಯಾಕ್ಷಿ, ಭಾವಜೀವಿ, ಸೇರಿ 15ಕ್ಕೂ ಹೆಚ್ಚು ಕವನ ಸಂಕಲನ ಪ್ರಕಟಗೊಂಡಿವೆ.
1996ರಲ್ಲಿ ಹಾಸನದಲ್ಲಿ ನಡೆದ 65ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದರು ಹಾಗೂ 2008ರ ಆಳ್ವಾಸ್ ನುಡಿಸಿರಿ ಸಮ್ಮೇಳನಾಧ್ಯಕ್ಷರಾಗಿದ್ದರು.

ಪ್ರಮುಖ ಸುದ್ದಿ :-   ತಾಯಿಯ ಸಂಪತ್ತು ಉಳಿಸಿಕೊಳ್ಳಲು ಪಿತ್ರಾರ್ಜಿತ ತೆರಿಗೆ ಕಾನೂನು ರದ್ದುಗೊಳಿಸಿದ ರಾಜೀವ ಗಾಂಧಿ : ಪ್ರಧಾನಿ ಮೋದಿ ಆರೋಪ

ವಿಮರ್ಶಾ ಕೃತಿಗಳು
ಸಾಹಿತ್ಯಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಮಧುರಚೆನ್ನ, ಸಮತೋಲನ ವಿಮರ್ಶಾತ್ಮಕ ಕೃತಿಗಳು

ಮಕ್ಕಳ ಕೃತಿ
ಹಕ್ಕಿ ಪುಕ್ಕ ಮತ್ತು ಚಿಣ್ಣರ ಲೋಕವ ತೆರೆಯೋಣ ಕವನ ಸಂಕಲನ

ಪ್ರಶಸ್ತಿ ಮತ್ತು ಪುರಸ್ಕಾರಗಳು
1981ರಲ್ಲಿ ಜೀವಧ್ವನಿ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಜೀವಧ್ವನಿ ಕವನ ಸಂಗ್ರಹಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ಪಂಪ ಪ್ರಶಸ್ತಿ, ಬಸವ ಗುರು ಕಾರುಣ್ಯ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಕರ್ನಾಟಕ ಕವಿರತ್ನ ಪ್ರಶಸ್ತಿ, ಅನಕೃ ನಿರ್ಮಾಣ ಪ್ರಶಸ್ತಿ, 2020ರಲ್ಲಿ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಗೌರವಕ್ಕೆ ಭಾಜನರಾಗಿದ್ದಾರೆ.

1967ರಲ್ಲಿ ನಿಡುಮಾಮಿಡಿ ಜಗದ್ಗುರುಗಳಿಂದ ‘ಕವನ ಕಲಾರವಿ’ ಹಾಗೂ ಚಿತ್ರದುರ್ಗದ ಬೃಹನ್ಮಠದಿಂದ 1990 ಹಾಗೂ 1996ರಲ್ಲಿ ಕ್ರಮವಾಗಿ ‘ಕವಿರತ್ನ’ ಮತ್ತು ‘ಸಾಹಿತ್ಯ ಭಾಸ್ಕರ’ ಬಿರುದುಗಳು ಲಭಿಸಿವೆ.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement