ಹಾಸನ: ಕೋಮು ಸಂಘರ್ಷದ ನಡುವೆ ಭಾವೈಕ್ಯತೆ ಸಾರುವ ಅಪರೂಪದ ಘಟನೆಯೊಂದು ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಹಾಸನ ಜಿಲ್ಲೆಯ ಬೇಲೂರಿನಲ್ಲಿ ಮುಸ್ಲಿಂ ಕುಟುಂಬವೊಂದು ತಮ್ಮ ಜಮೀನಿನಲ್ಲಿರುವ ಚೆನ್ನಕೇಶವನಿಗೆ ಪೂಜೆ ಸಲ್ಲಿಸಿದ್ದಾರೆ.
ರಿಯಾಜ್ ಪಾಷಾ ಹಾಗೂ ಕುಟುಂಬಸ್ಥರು ನೇರಳೆ ಹಾಗೂ ಆಲದ ಮರದ ಬುಡದಲ್ಲಿ ಹಿಂದೂ ಸಂಸ್ಕಾರ, ಸಂಪ್ರದಾಯದಂತೆ ರಿಯಾಜ್ ಪಾಷಾ ಕುಟುಂಬ ಚನ್ನಕೇಶವನಿಗೆ ಪೂಜೆ, ಪುನಸ್ಕಾರ ನೆರವೇರಿಸಿದೆ.
ಬೇಲೂರು ಚೆನ್ನಕೇಶವ ಸ್ವಾಮಿ ಕನಸಿನಲ್ಲಿ ಬಂದು ಜಮೀನಿನ ಬಳಿ ಪೂಜೆ ಸಲ್ಲಿಸಲು ಸೂಚಿಸಿದ ನಂತರ ಪೂಜೆ ಮಾಡುತ್ತಿದ್ದೇವೆ ಎಂದು ರಿಯಾಜ್ ಪಾಷಾ ಕುಟುಂಬದವರು ತಿಳಿಸಿದ್ದಾರೆ.
ಬೇಲೂರಿನ ದೀನ ದಯಾಳ ಬಡಾವಣೆಯಲ್ಲಿ ರಿಯಾಜ್ ಕುಟುಂಬ ಜಮೀನು ಹೊಂದಿದೆ. ರಿಯಾಜ್ ತಂದೆ ಭಾಷಾ ಸಾಹೇಬ್ ಅವರಿಗೆ ಉಳುವವನೇ ಭೂಮಿ ಒಡೆಯ ಕಾನೂನಿನಡಿ ಈ ಜಮೀನು ದೊರಕಿತ್ತಂತೆ. 8 ವರ್ಷಗಳ ಹಿಂದೆ ಈ ಜಮೀನನ್ನು ರಿಯಾಜ್ ಮಾರಾಟ ಮಾಡಿದ್ದರು. ಆದರೆ 3 ತಿಂಗಳಿನಿಂದ ರಿಯಾಜ್ ಸಹೋದರನ ಮಗನ ಕನಸಿನಲ್ಲಿ ಬಂದು ಪೂಜೆ ಮಾಡಿಸುವಂತೆ ಚೆನ್ನಕೇಶವಸ್ವಾಮಿ ಸೂಚನೆ ನೀಡಿದ್ದಾನೆ, ಹೀಗಾಗಿ ಪೂಜಾ ಕಾರ್ಯ ನೆರವೇರಿಸಲಾಗಿದೆ ಎಂದು ಕುಟುಂಸ್ಥರು ಹೇಳಿದ್ದಾರೆ.
ಚೆನ್ನಕೇಶವಸ್ವಾಮಿ ನಿರ್ದೆಶನದಂತೆ ಅಣತಿಯಂತೆ ಜಮೀನಿನ ಮರದ ಬಳಿ ಪೂಜೆ ಸಲ್ಲಿಸಲಾಗಿದೆ. ಅನ್ಯ ಧರ್ಮವಾದರೂ ದೇವರ ಸೂಚನೆ ಎಂದು ಭಕ್ತಿಯಿಂದ ಪೂಜೆ ಸಲ್ಲಿಸಿದ್ದಾರೆ. ಹಾಗೂ ಮುಂದೆಯೂ ಇದನ್ನು ಮುಂದುವರಿಸಿಕೊಂಡು ಹೋಗುವ ಇಚ್ಛೆ ವ್ಯಕ್ತಪಡಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ