ಬೀಗ ಒಡೆದು ಅಂಗನವಾಡಿಗೆ ನುಗ್ಗಿ, ಅಡುಗೆ ಮಾಡಿ ಊಟ ಮುಗಿಸಿ, ಕಥೆ ಬರೆದಿಟ್ಟು ಹೋದ ವಿಶಿಷ್ಟ ಕಳ್ಳ…!

ಮಂಡ್ಯ: ವ್ಯಕ್ತಿಯೊಬ್ಬ ರಾತ್ರಿ ವೇಳೆ ಅಂಗನವಾಡಿಗೆ ನುಗ್ಗಿ ಅಲ್ಲಿದ್ದ ವಸ್ತುಗಳನ್ನು ಬಳಸಿ ಅಡುಗೆ ಮಾಡಿಕೊಂಡು ಊಟ ಮಾಡಿ, ಕಥೆ, ಕವನ ಗೀಚಿ ಹೋಗಿರುವ ವಿಚಿತ್ರ ಘಟನೆ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಹೆಬ್ಬಣಿ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.

ಫೆಬ್ರವರಿ 22ರ ರಾತ್ರಿ ಕಳ್ಳತನ ಮಾಡಲು ವ್ಯಕ್ತಿಯೊಬ್ಬ ಅಂಗನವಾಡಿ ಬೀಗ ಮುರಿದು ಒಳಹೊಕ್ಕಿದ್ದಾನೆ. ಒಳಗಿದ್ದ ಬೀರುವಿನ ಬೀಗ ಮುರಿದು ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದಾನೆ. ರಾತ್ರಿ ಅಲ್ಲಿಯೇ ಉಳಿದು ಪುಳಿಯೋಗರೆ ತಯಾರಿಸಿ ಊಟ ಮಾಡಿದ್ದಾನೆ. ನಂತರ ಅಂಗನವಾಡಿಯಲ್ಲಿದ್ದ ನೋಟ್ ಪುಸ್ತಕದಲ್ಲಿ ಕಥೆ, ಕವನ ಬರೆದಿದ್ದಾನೆ.
3 ಪುಟದ ಬರಹದಲ್ಲಿ ಕಥೆಯಲ್ಲಿ “ಒಬ್ಬ ಹುಡುಗ ಚಿಕ್ಕ ವಯಸ್ಸಿನಲ್ಲಿ ತನ್ನ ತಾಯಿಯನ್ನು ಕೊಲೆ ಮಾಡಿದ ಎಂಬ ಆರೋಪವನ್ನು ಹೊತ್ತಿಕೊಂಡು ತನ್ನ ಗ್ರಾಮವನ್ನು ಬಿಟ್ಟು ಬರುವುದು ಒಂದು ಕಥೆ 16-07-1991ʼ, “ಎಷ್ಟು ಜನರ ಪಾಲಿಗೆ ಅನ್ನದಾತನಾಗಿ ದೇಶದ ಬೆನ್ನೆಲುಬಾಗಿ ಅನ್ಯಾಯಕ್ಕೆ ತಲೆಬಾಗಿ ತನ್ನ ಸತಿಯ ಗರ್ಭದಿಂದ ಜನಿಸಿ ಬಂದ ಕಂದನನ್ನು ತನ್ನ ವಂಶದ ಕುಡಿಯನ್ನು, ತನ್ನ ವಂಶದ ಚಿಗುರುವ ಬಳ್ಳಿಯನ್ನು ಭೂಮಿ ತಾಯಿಯ ಬಾಯಿಗೆ ತುತ್ತಾಗಿ ನೀಡುವುದು ಇನ್ನೊಂದು ಕಥೆ” ಹೀಗೆ ಹಲವು ಸಾಲುಗಳನ್ನು ಬರೆದಿದ್ದಾನೆ.

ಪ್ರಮುಖ ಸುದ್ದಿ :-   ಕರ್ನಾಟಕದ 12 ಜಿಲ್ಲೆಗಳಲ್ಲಿ ಜೂ.15ರ ವರೆಗೆ ಜೋರಾದ ಮಳೆ ಮುನ್ಸೂಚನೆ

ಬೆಳಿಗ್ಗೆ ಅಂಗನವಾಡಿಗೆ ಬಂದ ಸಿಬ್ಬಂದಿಗೆ ರಾತ್ರಿ ಬೀಗ ಮುರಿದಿರುವುದು, ಪುಳಿಯೋಗರೆ ಮಾಡಿ ತಿಂದಿರುವುದು, ಪುಸ್ತಕದಲ್ಲಿ ಕಥೆ ಬರೆದಿರುವುದು ಗಮನಕ್ಕೆ ಬಂದಿದೆ. ತಕ್ಷಣವೇ ಪಂಡಿತನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಓ ಮಹದೇವು ಸ್ಥಳ ಪರಿಶೀಲನೆ ನಡೆಸಿದ್ದು, ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement