ಹಿಜಾಬ್‌ ನಿಷೇಧ ಪ್ರಕರಣ: ಕರ್ನಾಟಕ ಹೈಕೋರ್ಟ್‌ನಿಂದ ನಾಳೆ ತೀರ್ಪು ಪ್ರಕಟ

ಬೆಂಗಳೂರು: ಹಿಜಾಬ್‌ ಧರಿಸಿ ಕಾಲೇಜಿಗೆ ತೆರಳುವುದನ್ನು ನಿರ್ಬಂಧಿಸಿ ರಾಜ್ಯ ಸರ್ಕಾರವು ಹೊರಡಿಸಿರುವ ಆದೇಶದ ಹಿನ್ನೆಲೆಯಲ್ಲಿ ತಮ್ಮನ್ನು ಕಾಲೇಜಿಗೆ ಪ್ರವೇಶಿಸಲು ಬಿಡುತ್ತಿಲ್ಲ ಎಂದು ಆಕ್ಷೇಪಿಸಿ ಮುಸ್ಲಿಮ್‌ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಮನವಿ ಅರ್ಜಿಗಳಿಗೆ ಸಂಬಂಧಿಸಿದ ತೀರ್ಪನ್ನು ನಾಳೆ. ಮಂಗಳವಾರ ಬೆಳಿಗ್ಗೆ 10.30ಕ್ಕೆ ಕರ್ನಾಟಕ ಹೈಕೋರ್ಟ್‌ ಪ್ರಕಟಿಸಲಿದೆ.

ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ಜೆ ಎಂ ಖಾಜಿ ಅವರನ್ನು ಒಳಗೊಂಡ ಪೀಠವು ತೀರ್ಪು ಪ್ರಕಟಿಸಲಿದೆ ಎಂದು ಬಾರ್‌ ಅಂಡ್‌ ಬೆಂಚ್‌ ವರದಿ ಮಾಡಿದೆ. 11 ದಿನ ಸುದೀರ್ಘ ವಿಚಾರಣೆ ನಡೆಸಿದ್ದ ಪೂರ್ಣ ಪೀಠವು ಫೆಬ್ರವರಿ 25ರಂದು ತೀರ್ಪು ಕಾಯ್ದಿರಿಸಿತ್ತು. ಸರಿ ಸುಮಾರು 23.5 ತಾಸು ವಿಚಾರಣೆ ಆಲಿಸಿರುವ ಪೀಠವು 17 ದಿನಗಳ ಬಳಿಕ ತೀರ್ಪು ಪ್ರಕಟಿಸಲಿದೆ.
ವಿಚಾರಣೆಯ ಮೊದಲ ದಿನವೇ ಪೀಠವು ವಿದ್ಯಾರ್ಥಿಗಳಿಗೆ ಹಿಜಾಬ್, ಕೇಸರಿ ಶಾಲು ಅಥವಾ ನಿಗದಿತ ಸಮವಸ್ತ್ರವನ್ನು ಹೊಂದಿರುವ ಕಾಲೇಜುಗಳಲ್ಲಿ ತರಗತಿಗಳಿಗೆ ಹಾಜರಾಗುವಾಗ ಯಾವುದೇ ಧಾರ್ಮಿಕ ಧಿರಿಸುಗಳನ್ನು ಬಳಸದಂತೆ ಮಧ್ಯಂತರ ಆದೇಶವನ್ನು ನೀಡಿತ್ತು.ನಂತರ ಪೀಠವು 11 ದಿನಗಳ ಕಾಲ ಸುದೀರ್ಘ ವಿಚಾರಣೆ ನಡೆಸಿತು.

ಪ್ರಮುಖ ಸುದ್ದಿ :-   ವೀಡಿಯೊ...| ಹೆಗಲ ಮೇಲೆ ಕೈಹಾಕಿದ ಕಾಂಗ್ರೆಸ್​ ಮುಖಂಡನಿಗೆ ಕಪಾಳಕ್ಕೆ ಹೊಡೆದ ಡಿಸಿಎಂ ಡಿ.ಕೆ.ಶಿವಕುಮಾರ

ಕರ್ನಾಟಕ ಹೈಕೋರ್ಟ್ ಹಿಜಾಬ್ ಪ್ರಕರಣದ ವಕೀಲರನ್ನು ಫೆಬ್ರವರಿ 25 ರೊಳಗೆ ತಮ್ಮ ವಾದವನ್ನು ಮುಕ್ತಾಯಗೊಳಿಸುವಂತೆ ಕೇಳಿತ್ತು.. ತ್ರಿಸದಸ್ಯ ಪೀಠದ ಭಾಗವಾಗಿರುವ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ಅವರು ಕಕ್ಷಿದಾರರಿಗೆ ಎರಡು ಮೂರು ದಿನಗಳಲ್ಲಿ ಸಲ್ಲಿಕೆಗಳನ್ನು ಲಿಖಿತವಾಗಿ ನೀಡುವಂತೆ ಕೇಳಿಕೊಂಡರು.

ಏನಿದು ಹಿಜಾಬ್‌ ವಿವಾದ..?
ಉಡುಪಿಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಡಳಿತ ಮಂಡಳಿಯು ಹಿಜಾಬ್ ಧರಿಸಿದ್ದಕ್ಕಾಗಿ ಆರು ಮುಸ್ಲಿಂ ಹುಡುಗಿಯರನ್ನು ತರಗತಿಗಳಿಗೆ ಹಾಜರಾಗದಂತೆ ನಿರ್ಬಂಧಿಸಿದ ನಂತರ ಕರ್ನಾಟಕದಲ್ಲಿ ಹಿಜಾಬ್ ವಿವಾದ ಜನವರಿ 1 ರಂದು ಪ್ರಾರಂಭವಾಯಿತು.
ಇದಾದ ನಾಲ್ಕು ದಿನಗಳ ನಂತರ ಅವರು ತರಗತಿಗಳಲ್ಲಿ ಹಿಜಾಬ್ ಧರಿಸಲು ಅನುಮತಿಯನ್ನು ಕೋರಿದರು, ಆದರೆ ಅನುಮತಿಸಲಾಗಿಲ್ಲ. ಅಲ್ಲಿಯ ವರೆಗೆ ವಿದ್ಯಾರ್ಥಿಗಳು ಸ್ಕಾರ್ಫ್ ಧರಿಸಿ ಕ್ಯಾಂಪಸ್‌ಗೆ ಬರುತ್ತಿದ್ದರು. ಆದರೆ ಅದನ್ನು ತೆಗೆದು ತರಗತಿಗೆ ಪ್ರವೇಶಿಸಿದ್ದರು ಎಂದು ಕಾಲೇಜು ಪ್ರಾಂಶುಪಾಲ ರುದ್ರೇಗೌಡ ತಿಳಿಸಿದ್ದರು.
ಕಳೆದ 35 ವರ್ಷಗಳಲ್ಲಿ ಯಾರೂ ಹಿಜಾಬ್ ಧರಿಸುವುದನ್ನು ತರಗತಿಗೆ ಬಳಸದ ಕಾರಣ ಸಂಸ್ಥೆಯು ಯಾವುದೇ ನಿಯಮವನ್ನು ಹೊಂದಿಲ್ಲ. ಬೇಡಿಕೆಯೊಂದಿಗೆ ಬಂದ ವಿದ್ಯಾರ್ಥಿಗಳಿಗೆ ಹೊರಗಿನ ಶಕ್ತಿಗಳ ಬೆಂಬಲವಿದೆ” ಎಂದು ಗೌಡ ಹೇಳಿದ್ದರು.

ಪ್ರಮುಖ ಸುದ್ದಿ :-   ನೇತ್ರಾವತಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕಿಯರು ಸಾವು

ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ, ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲೆಗಳನ್ನು ಧರಿಸಿ ಕಾಲೇಜಿಗೆ ಬಂದರು. ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅನ್ನು ಅನುಮತಿಸಿದರೆ ಅವರ ಧಾರ್ಮಿಕ ಉಡುಗೆ ಮತ್ತು ಚಿಹ್ನೆಗಳನ್ನು ಪ್ರದರ್ಶಿಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿದರು.
ಈ ವಿವಾದವು ನಂತರ ಕರ್ನಾಟಕದ ಭಾಗಗಳಿಗೆ ಹರಡಿತು. ಇದರಿಂದ ಕೆಲ ದಿನಗಳ ಕಾಲ ರಾಜ್ಯದ ಶಾಲೆ-ಕಾಲೇಜುಗಳನ್ನು ಬಂದ್‌ ಮಾಡಲಾಗಿತ್ತು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement