ಶಿರಸಿ ಜಾತ್ರಾ ವೈಭವ: ಗದ್ದುಗೆಯಲ್ಲಿ ವಿರಾಜಮಾನಳಾದ ಮಾರಿಕಾಂಬೆ … ವೀಕ್ಷಿಸಿ

ಶಿರಸಿ: ಕರ್ನಾಟಕದ ಅತಿದೊಡ್ಡ ಜಾತ್ರೆ ಎಂದು ಪ್ರಸಿದ್ದಿ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಎರಡನೇ ದಿನವಾದ ಇಂದು ಲಕ್ಷಾಂತರ ಭಕ್ತರ ನಡುವೆ ಮಾರಿಕಾಂಬಾ ದೇವಿ ಮಾರಿಗುಡಿಯಿಂದ ರಥದಲ್ಲಿ ಗದ್ದುಗೆಗೆ ಬಂದು ವಿರಾಜಮಾನಳಾಗಿದ್ದಾಳೆ.

ನೂರಾರು ವರ್ಷಗಳ ಇತಿಹಾಸವಿರುವ ಶಿರಸಿಯ ಮಾರಿಕಾಂಬಾ ದೇವಿಯ ಜಾತ್ರೆ ಎರಡು ವರ್ಷಕ್ಕೊಮ್ಮೆ ಒಂಬತ್ತು ದಿನಗಳ ಕಾಲ ಅದ್ಧೂರಿಯಾಗಿ ನಡೆಯುತ್ತದೆ. ರಾಜ್ಯದಿಂದಷ್ಟೇ ಅಲ್ಲದೆ, ದೇಶದ ವಿವಿಧೆಡೆಯಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಹರಕೆ ಸಲ್ಲಿಸಿ ಕೃತಾರ್ಥರಾಗುತ್ತಾರೆ. ಈ ಬಾರಿಯ ಜಾತ್ರಾ ಮಹೋತ್ಸವ ಮಂಗಳವಾರ ಮಾರಿಗುಡಿಯಲ್ಲಿ ಮಾರಿಕಾಂಬೆಯ ಕಲ್ಯಾಣೋತ್ಸವದ ಮೂಲಕ ಅಧಿಕೃತವಾಗಿ ಆರಂಭಗೊಂಡಿತು.

ಬುಧವಾರ ಬೆಳಿಗ್ಗೆ 7:23 ಕ್ಕೆ ಮಾರಿಕಾಂಬೆಯ ರಥವನ್ನೇರಿದ್ದು, 8:36 ಕ್ಕೆ ದೇವಾಲಯದ ರಥ ಆವರಣದಿಂದ ಹೊರಟಿದ್ದು, ಬಿಡ್ಕಿಬೈಲಿನಲ್ಲಿರುವ ಜಾತ್ರಾ ಗದ್ದುಗೆಗೆ ಬರುವ ವೇಳೆಗಾಗಲೇ ಸೂರ್ಯ ನೆತ್ತಿ ಸುಡುತ್ತಿದ್ದ. ಉರಿವ ಬಿಸಿಲನ್ನು ಲೆಕ್ಕಿಸದೇ ಮಾರಿಕಾಂಬೆಯ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡರು. ರಥೋತ್ಸವದುದ್ದಕ್ಕೂ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ಜನಸ್ತೋಮ ಮಾರಿಕಾಂಬೆ ಜಾತ್ರಾ ಗದ್ದುಗೆಗೆ ಆಸೀನಳಾಗುವವರೆಗೂ ಪಾಲ್ಗೊಂಡು ಭಕ್ತಿ-ಭಾವದಲ್ಲಿ ಮಿಂದೆದ್ದರು.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಬಾಲಕಿ ಮೇಲೆ ಅತ್ಯಾಚಾರ ಪ್ರಕರಣ ; ಆರೋಪಿ ಕಾಲಿಗೆ ಗುಂಡೇಟು

ಬುಧವಾರ ರಥದಲ್ಲಿ ಗದ್ದುಗೆಗೆ ಬರುವಾಗ ಒಂದೂವರೆ ತಾಸುಗಳ ಕಾಲ ರಸ್ತೆಯಲ್ಲೇ ನಿಂತ ದೇವಿ, 12:57ಕ್ಕೆ ಗದ್ದುಗೆಗೆ ತೆರಳಿ ಪೀಠದಲ್ಲಿ ವಿರಾಜಮಾನಳಾದಳು. ಮಾರಿಕಾಂಬೆ ಆಸೀನಳಾಗಿದ್ದ ರಥವನ್ನು ಸಾವಿರಾರು ಭಕ್ತರು ಅರ್ಧ ಕಿಲೋ ಮೀಟರ್ ನಷ್ಟು ದೂರಕ್ಕೆ ಎಳೆದ ಕೃತಾರ್ಥರಾದರು. ಜಯಘೋಷಗಳು ಮೊಳಗಿದವು.
ಸಂಪ್ರದಾಯದಂತೆ ಹರಕೆ ಹೊತ್ತಿದ್ದ ಸಾವಿರಾರು ಜನ ರಥಕ್ಕೆ ಬಾಳೆಹಣ್ಣು, ಕೋಳಿ, ಎಳ್ಳು, ಕಡಲೆ, ಹೂವುಗಳನ್ನು ಎಸೆದು ಭಕ್ತಿ ಭಾವ ಮೆರೆದರು. ಮೂಗುತಿ ಸುಂದರಿ ಮಾರಿಕಾಂಬೆ ಸದ್ಯ ಗದ್ದುಗೆಯಲ್ಲಿ ವಿರಾಜಮಾನಳಾಗಿದ್ದು, ನಾಳೆ, ಗುರುವಾರದಿಂದ ಭಕ್ತರ ಸೇವೆಗೆ ಅವಕಾಶ ನೀಡಲಾಗುತ್ತಿದೆ. ಮಾರ್ಚ್ 23ರಂದು ಗದ್ದುಗೆಯಿಂದ ಏಳುವ ಮೂಲಕ ಒಂಬತ್ತು ದಿನಗಳ ಶಿರಸಿ ಮಾರಿಕಾಂಬಾ ಜಾತ್ರಾ ಮೆರವಣಿಗೆ ಸಂಪನ್ನಗೊಳ್ಳಲಿದೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement