25 ಕೋಟಿ ರೂ.ಗಳಿಗೆ ಇಸ್ರೇಲಿ ಸ್ಪೈವೇರ್ ಪೆಗಾಸಸ್ ಖರೀದಿ ಪ್ರಸ್ತಾಪವನ್ನು ನಮ್ಮ ಸರ್ಕಾರ ತಿರಸ್ಕರಿಸಿತ್ತು : ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಕೆಲವು ವರ್ಷಗಳ ಹಿಂದೆ ಇಸ್ರೇಲಿ ಸ್ಪೈವೇರ್ ಪೆಗಾಸಸ್ (Israeli spyware Pegasus) ಖರೀದಿಸುವ ಪ್ರಸ್ತಾಪವನ್ನು ತಮ್ಮ ಸರ್ಕಾರ ತಿರಸ್ಕರಿಸಿತ್ತು ಎಂದು ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಜಕೀಯ ಪ್ರತಿಸ್ಪರ್ಧಿಗಳ ಮೇಲೆ ಕಣ್ಣಿಡಲು ಸ್ಪೈವೇರ್ ಬಳಕೆ “ಸ್ವೀಕಾರಾರ್ಹವಲ್ಲ” ಎಂದು ಬಂಗಾಳ ಮುಖ್ಯಮಂತ್ರಿ ತಿಳಿಸಿದರು. “ಅವರು ಸ್ಪೈವೇರ್ ಮಾರಾಟ ಮಾಡಲು ನಮ್ಮ ಪೊಲೀಸ್ ಇಲಾಖೆಗೆ ಬಂದರು. ಅವರು ಐದು ವರ್ಷಗಳ ಹಿಂದೆ 25 ಕೋಟಿ ರೂ.ಗಳಿಗೆ ಬೇಡಿಕೆಯಿಟ್ಟರು. ಈ ಪ್ರಸ್ತಾಪ ನನ್ನ ಬಳಿಗೆ ಬಂದಿತ್ತು, ಆಗ ನಾವು ಅದನ್ನು ಖರೀದಿಸಲು ಬಯಸುವುದಿಲ್ಲ ಎಂದು ಹೇಳಿದ್ದೆ ಎಂದು ಮಮತಾ ಬ್ಯಾನರ್ಜಿ ಹೇಳಿದರು.
ದೇಶ ವಿರೋಧಿ ಚಟುವಟಿಕೆಗಳಿಗಳನ್ನು ಪತ್ತೆ ಹಚ್ಚಲು ಇಸ್ರೇಲಿ ಸ್ಪೈವೇರ್ ಪೆಗಾಸಸ್ ಇರುವುದು, ಅದು ಬೇರೆ ವಿಷಯ. ಆದರೆ ಇದನ್ನು ರಾಜಕೀಯ ಕಾರಣಗಳಿಗಾಗಿ ಬಳಸಲಾಗುತ್ತದೆ, ಇದನ್ನು ಅಧಿಕಾರಿಗಳು ಮತ್ತು ನ್ಯಾಯಾಧೀಶರ ವಿರುದ್ಧ ಬಳಸಲಾಗುತ್ತದೆ, ಇದು ನಮಗೆ ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದರು.
ಪೆಗಾಸಸ್ ಸ್ಪೈವೇರ್ ಅನ್ನು ಸರ್ಕಾರಗಳಿಗೆ ಮಾತ್ರ ಮಾರಾಟ ಮಾಡಲಾಗಿದೆ. ಇದನ್ನು ಭಾರತದಲ್ಲಿನ ವಿರೋಧ ಪಕ್ಷದ ನಾಯಕರು, ಪತ್ರಕರ್ತರು ಮತ್ತು ಇತರರನ್ನು ಗುರಿಯಾಗಿಸಲು ಬಳಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. 2019 ರಲ್ಲಿ ದಿ ವೈರ್ ಸೇರಿದಂತೆ ಮಾಧ್ಯಮ ಒಕ್ಕೂಟವು ಪೆಗಾಸಸ್ ಸ್ಪೈವೇರ್ ಅನ್ನು ಪೂರೈಸುವ ಎನ್ಎಸ್ಒನ ಸೋರಿಕೆಯಾದ ಡೇಟಾಬೇಸ್‌ನಲ್ಲಿ ಭಾರತದ 300 ಫೋನ್‌ಗಳು ಸಂಭಾವ್ಯ ಗುರಿಗಳ ಪಟ್ಟಿಯಲ್ಲಿವೆ ಎಂದು ಬಹಿರಂಗಪಡಿಸಿತು. ಆದಾಗ್ಯೂ, ಎಲ್ಲಾ ಫೋನ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂಬುದು ದೃಢಪಟ್ಟಿಲ್ಲ. ಪ್ರತಿಪಕ್ಷದ ನಾಯಕರಾದ ರಾಹುಲ್ ಗಾಂಧಿ, ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಸಚಿವರು ಮತ್ತು ಪತ್ರಕರ್ತರ ಫೋನ್‌ಗಳು ಸಂಭಾವ್ಯ ಗುರಿಗಳ ಪಟ್ಟಿಯಲ್ಲಿ ಸೇರಿವೆ ಎಂದು ಮಾಧ್ಯಮಗಳ ಒಕ್ಕೂಟದ ವರದಿ ಹೇಳಿತ್ತು.
ತಮ್ಮ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಬ್ಯಾನರ್ಜಿ ಬುಧವಾರ ಆರೋಪಿಸಿದ್ದರು. ಮೂರು ವರ್ಷಗಳ ಹಿಂದೆ, ನನಗೂ ಪೆಗಾಸಸ್ ಖರೀದಿಸುವ ಪ್ರಸ್ತಾಪವಿತ್ತು. ಆದರೆ ನಾನು ಅದನ್ನು ಖರೀದಿಸಲಿಲ್ಲ. ಖಾಸಗಿತನದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಾನು ನಂಬುವುದಿಲ್ಲ.ಆದರೆ ಬಿಜೆಪಿ ಆಡಳಿತವಿರುವ ಹಲವು ರಾಜ್ಯಗಳು ಪೆಗಾಸಸ್ ಅನ್ನು ಖರೀದಿಸಿವೆ ಎಂದು ಅವರು ಹೇಳಿದರು.
2016 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಮಮತಾ ಬ್ಯಾನರ್ಜಿ ಅವರು ಸ್ಪೈವೇರ್ ಅನ್ನು ಬಳಸುತ್ತಿದ್ದಾರೆ ಎಂದು ಬಿಜೆಪಿ ನಾಯಕ ಅನಿರ್ಬನ್ ಗಂಗೂಲಿ ಆರೋಪಿಸಿದ ಕೆಲವು ದಿನಗಳ ನಂತರ ಅವರ ಪೆಗಾಸಸ್ ಕುರಿತು ಈ ಹೇಳಿಕೆಗಳು ಬಂದಿವೆ.
ಪತ್ರಕರ್ತರು, ವಿರೋಧ ಪಕ್ಷದ ರಾಜಕಾರಣಿಗಳು, ನ್ಯಾಯಾಧೀಶರು ಮತ್ತು ಇತರ ಪ್ರಮುಖ ವ್ಯಕ್ತಿಗಳ ಮೇಲೆ ಕಣ್ಗಾವಲುಗಾಗಿ ಸ್ಪೈವೇರ್ ಅನ್ನು ಬಳಸಲಾಗಿದೆ ಎಂದು ಆರೋಪಿಸಿರುವ ಹಲವು ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.

ಪ್ರಮುಖ ಸುದ್ದಿ :-   ಅಕ್ರಮ ಹಣ ವರ್ಗಾವಣೆ ಪ್ರಕರಣ : ಕೇಜ್ರಿವಾಲಗೆ ದೆಹಲಿ ಹೈಕೋರ್ಟ್‌ ನಿಂದ ಸಿಗದ ಜಾಮೀನು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement