ಕೊಚ್ಚಿ: ಕಳೆದ ವರ್ಷ ನವೆಂಬರ್ನಲ್ಲಿ ರಾಜ್ಯದ ಪಾಲಕ್ಕಾಡ್ ಜಿಲ್ಲೆಯಲ್ಲಿ ಆರೆಸ್ಸೆಸ್ ಕಾರ್ಯಕರ್ತನನ್ನು ಹತ್ಯೆಗೈದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಕೇರಳ ಹೈಕೋರ್ಟ್ ಮಂಗಳವಾರ ಕಾಯ್ದಿರಿಸಿದೆ.
ಎಲ್ಲಾ ಕಡೆಯ ವಾದಗಳು ಮುಗಿದ ನಂತರ, ನ್ಯಾಯಮೂರ್ತಿ ಕೆ ಹರಿಪಾಲ್ ಅವರು ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದ್ದಾರೆ. ಪ್ರಕರಣದಲ್ಲಿ ಸಿಬಿಐ ತನಿಖೆಯ ಅಗತ್ಯವಿರುವ ಕೆಲವು ಅಂಶಗಳಿವೆ ಎಂದು ನ್ಯಾಯಾಲಯ ಈ ಹಿಂದೆ ಅಭಿಪ್ರಾಯಪಟ್ಟಿತ್ತು. ಹತ್ಯೆಯಾದ ಆರ್ಎಸ್ಎಸ್ ಕಾರ್ಯಕರ್ತನ ಪತ್ನಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಮನವಿ ಮಾಡಿದ್ದರು.
ಎಲ್ಲಾ ಆರೋಪಿಗಳನ್ನು ಬಂಧಿಸಿದ್ದೇವೆ ಮತ್ತು ಯಾವುದೇ ಹೊಸ ಏಜೆನ್ಸಿ ಬಂದರೆ, ಅಂತಿಮ ವರದಿಯನ್ನು ಸಲ್ಲಿಸಲು ವಿಳಂಬವಾಗುವ ಸಂಪೂರ್ಣ ಪ್ರಕ್ರಿಯೆಯನ್ನು ಮತ್ತೆ ನಡೆಸಬೇಕಾಗುತ್ತದೆ ಮತ್ತು ಅಷ್ಟರಲ್ಲಿ ಆರೋಪಿಗಳು ಜಾಮೀನಿನ ಮೇಲೆ ಹೊರಬರಬಹುದು ಎಂದು ರಾಜ್ಯ ಸರ್ಕಾರವು ಮನವಿಯನ್ನು ವಿರೋಧಿಸಿತು.
ಕಳೆದ ವರ್ಷ ನವೆಂಬರ್ 15 ರಂದು ಸಂಜಿತ್ (27) ಎಂಬಾತ ತನ್ನ ಪತ್ನಿಯನ್ನು ಆಕೆಯ ಕೆಲಸದ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಪದಾಧಿಕಾರಿ ಸೇರಿದಂತೆ ಹಲವರನ್ನು ಪೊಲೀಸರು ನಂತರ ಬಂಧಿಸಿದ್ದರು.
ಬಂಧಿತ ಪಿಎಫ್ಐ ಪದಾಧಿಕಾರಿ ಸಂಜಿತ್ನ ಪತ್ನಿಯ ಎದುರೇ ಕೊಚ್ಚಿ ಕೊಲೆ ಮಾಡಿದ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದಾನೆ ಎಂದು ಹೇಳಲಾಗಿತ್ತು.
ಪಿಎಫ್ಐನ ರಾಜಕೀಯ ಶಾಖೆಯಾದ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಕಾರ್ಯಕರ್ತರು ಕೊಲೆಯ ಹಿಂದೆ ಇದ್ದಾರೆ ಎಂದು ಬಿಜೆಪಿ ಮತ್ತು ಸಂಘ ಪರಿವಾರದ ಸಂಘಟನೆಗಳು ಆರೋಪಿಸಿವೆ
ನಿಮ್ಮ ಕಾಮೆಂಟ್ ಬರೆಯಿರಿ