ತೆಲಂಗಾಣದಲ್ಲಿ ಪಾದಯಾತ್ರೆ ವೇಳೆ ಆಂಧ್ರ ಸಿಎಂ ಜಗನ್ ಸಹೋದರಿ ಶರ್ಮಿಳಾ ಮೇಲೆ ಜೇನುನೊಣಗಳ ದಾಳಿ

ಹೈದರಾಬಾದ್‌: ಯುವಜನ ಶ್ರಮಿಕ ರೈತ ತೆಲಂಗಾಣ ಪಕ್ಷದ (ವೈಎಸ್‌ಆರ್‌ಟಿಪಿ) ಮುಖ್ಯಸ್ಥೆ, ವೈಎಸ್ ಶರ್ಮಿಳಾ ಪ್ರಜಾ ಪ್ರಸ್ಥಾನಂ ಪಾದಯಾತ್ರೆ ದುರ್ಷಗಾನಿಪಲ್ಲಿ ಗ್ರಾಮದ ಬಳಿ ನಡೆಸುತ್ತಿದ್ದಾಗ ಜೇನುನೊಣಗಳ ದಾಳಿಗೆ ಒಳಗಾಗಿದ್ದಾರೆ. ಅವರು ದಿವಂಗತ ವೈಎಸ್ ರಾಜಶೇಖರ ರೆಡ್ಡಿ ಅವರ ಪುತ್ರಿ ಮತ್ತು ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ.

ವೈಎಸ್ ಶರ್ಮಿಳಾ ದುರ್ಷಗಾನಿಪಲ್ಲಿ ಗ್ರಾಮದ ಮರದ ಕೆಳಗೆ ಜನರೊಂದಿಗೆ ಸಂವಾದ ನಡೆಸುತ್ತಿದ್ದರು. ತೆಲಂಗಾಣದ ಮೋಟಾ ಕೊಂಡೂರು ಮಂಡಲದಿಂದ ಆತ್ಮಕೂರು ಮಂಡಲಕ್ಕೆ ತೆರಳುತ್ತಿದ್ದ ವೇಳೆ ಜೇನುನೊಣಗಳ ಹಿಂಡು ದಾಳಿ ಮಾಡಿದೆ.
ಮತ್ತೊಂದೆಡೆ ಅವರ ಭದ್ರತಾ ಸಿಬ್ಬಂದಿ ಟವೆಲ್‌ ಬೀಸುತ್ತ ಅವರನ್ನು ಸುರಕ್ಷಿತವಾಗಿ ಅಲ್ಲಿಂದ ಕರೆದೊಯ್ದಿದ್ದಾರೆ. ಇದೇ ಸಂದರ್ಭದಲ್ಲಿ ಪಕ್ಷದ ಕೆಲ ಕಾರ್ಯಕರ್ತರಿಗೆ ಜೇನುನೊಣಗಳು ಕಚ್ಚಿ ಗಾಯಗಳಾಗಿವೆ. ಆದರೂ ಎದೆಗುಂದದ ಶರ್ಮಿಳಾ ತಮ್ಮ ನಡಿಗೆ ಮುಂದುವರಿಸಿದರು.

ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್)ವನ್ನು ಖಂಡಿಸಿ ಮತ್ತು ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರ ಬಂಗಾರದ ತೆಲಂಗಾಣ ತರುವುದಾಗಿ ಭರವಸೆ ನೀಡಿ ನ್ಯಾಯ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿ ಶರ್ಮಿಳಾ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ.
ಅವರ ಪಾದಯಾತ್ರೆ ಇದೀಗ ಯಾದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ನಡೆಯುತ್ತಿದೆ.

ಪ್ರಮುಖ ಸುದ್ದಿ :-   ರಾಯಬರೇಲಿಯಿಂದ ಅಕ್ಕನ ವಿರುದ್ಧ ಸ್ಪರ್ಧಿಸಲು ಬಿಜೆಪಿ ನೀಡಿದ್ದ ಆಫರ್‌ ತಿರಸ್ಕರಿಸಿದರೇ ವರುಣ್‌ ಗಾಂಧಿ..?

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement