ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ಸಿನಿಂದ ಮೆಹಂಗಾಯಿ-ಮುಕ್ತ್ ಭಾರತ ಅಭಿಯಾನ; ಮಾರ್ಚ್ 31ರಿಂದ 3 ಹಂತದಲ್ಲಿ ದೇಶಾದ್ಯಂತ ಪ್ರತಿಭಟನೆ

ನವದೆಹಲಿ: ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಶನಿವಾರ ಮೂರು ಹಂತದ ಪ್ರತಿಭಟನಾ ಅಭಿಯಾನ ಮಾಡುವುದಾಗಿ ಘೋಷಿಸಿದ್ದು, “ಮೆಹಂಗಾಯಿ-ಮುಕ್ತ್ ಭಾರತ್ ಅಭಿಯಾನ್”ದ ಅಡಿಯಲ್ಲಿ ಮಾರ್ಚ್ 31 ರಿಂದ ಏಪ್ರಿಲ್ 7 ರವರೆಗೆ ದೇಶಾದ್ಯಂತ ರ್ಯಾಲಿಗಳು ಮತ್ತು ಮೆರವಣಿಗೆಗಳನ್ನು ಆಯೋಜಿಸಿದೆ.

ಶನಿವಾರ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳ ಸಭೆಯಲ್ಲಿ ಆಂದೋಲನವನ್ನು ಪ್ರಾರಂಭಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ಕುರಿತು ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮೊದಲ ಹಂತದ ಅಭಿಯಾನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜನಸಾಮಾನ್ಯರು ಮಾರ್ಚ್ 31 ರಂದು ತಮ್ಮ ಮನೆಗಳ ಹೊರಗೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಜನರು ಎಲ್‌ಪಿಜಿ ಸಿಲಿಂಡರ್‌ಗಳಿಗೆ ಹಾರ ಹಾಕಿ, ಡ್ರಮ್ ಬಾರಿಸುತ್ತಾರೆ. ಆ ಮೂಲಕ ಹಣದುಬ್ಬರದ ಸಮಸ್ಯೆಯನ್ನು ಎತ್ತಿ ತೋರಿಸುತ್ತಾರೆ. ಅಂತೆಯೇ ಅಡುಗೆ ಅನಿಲ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳದ ವಿರುದ್ಧ ಬಿಜೆಪಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ ಎಂದು ಹೇಳಿದರು.

ಏಪ್ರಿಲ್ 2 ರಿಂದ ಏಪ್ರಿಲ್ 4 ರವರೆಗೆ ಎನ್‌ಜಿಒಗಳು, ಧಾರ್ಮಿಕ, ಸಾಮಾಜಿಕ ಸಂಸ್ಥೆಗಳು ಮತ್ತು ನಿವಾಸಿ ಕಲ್ಯಾಣ ಸಂಸ್ಥೆಗಳೊಂದಿಗೆ ದೇಶಾದ್ಯಂತ ಜಿಲ್ಲಾ ಮಟ್ಟದಲ್ಲಿ ಧರಣಿ ಮತ್ತು ಮೆರವಣಿಗೆಗಳನ್ನು ಕಾಂಗ್ರೆಸ್‌ ಆಯೋಜಿಸಲಿದೆ. ಏಪ್ರಿಲ್ 7ರಂದು, ಕಾಂಗ್ರೆಸ್ ಪಕ್ಷವು ಸಾಮಾಜಿಕ ಮತ್ತು ಧಾರ್ಮಿಕ ಸಂಘಟನೆಗಳು, ಎನ್‌ಜಿಒಗಳು ಮತ್ತು ಜನರ ಸಹಾಯದಿಂದ ‘ಮೆಹಂಗಾಯಿ-ಮುಕ್ತ್ ಭಾರತ್ ಅಭಿಯಾನದ ಅಂಗವಾಗಿ ಧರಣಿ ಮತ್ತು ಮೆರವಣಿಗೆಗಳನ್ನು ಎಲ್ಲ ರಾಜ್ಯಗಳ ಪ್ರಧಾನ ಕಚೇರಿಗಳಲ್ಲಿ ಆಯೋಜಿಸಲಿದೆ ಎಂದು ಸುರ್ಜೆವಾಲಾ ಹೇಳಿದರು.

ಭಾರತದ ಜನರಿಗೆ (ನರೇಂದ್ರ) ಮೋದಿ ಸರ್ಕಾರವು ಜನರಿಗೆ ವಂಚನೆ ಮಾಡಿದ್ದು, ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್‌ಗಳು, ಕೊಳವೆ ನೈಸರ್ಗಿಕ ಅನಿಲ (ಪಿಎನ್‌ಜಿ) ಮತ್ತು ಸಿಎನ್‌ಜಿ ಬೆಲೆಗಳನ್ನು 137 ದಿನಗಳ ವರೆಗೆ ಬದಲಾಯಿಸದೆ ಐದು ರಾಜ್ಯಗಳಲ್ಲಿ ಚುನಾವಣೆ ನಡೆದ ನಂತರ ಕಳೆದ ಒಂದು ವಾರದಲ್ಲಿ ಎಲ್ಲ ವಸ್ತುಗಳ ದರಗಳನ್ನು ಏರಿಸುವ ಮೂಲಕ ಪ್ರತಿ ಜನರನ್ನು ಬೆಎಲೆ ಏರಿಕೆ ಕಾಡುತ್ತಿದೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರವು ಶನಿವಾರ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 80 ಪೈಸೆ ಹೆಚ್ಚಿಸಿದೆ. ಐದು ದಿನಗಳಲ್ಲಿ ನಾಲ್ಕನೇ ಹೆಚ್ಚಳವಾಗಿದ್ದು, ಲೀಟರ್‌ಗೆ ಒಟ್ಟು 3.2 ರೂ.ಗಳಷ್ಟು ಹೆಚ್ಚಳವಾಗಿದೆ.
ಸಭೆಯಲ್ಲಿ ಪಕ್ಷದ ಸದಸ್ಯತ್ವ ಅಭಿಯಾನ ಮತ್ತು ದೇಶದ ಪ್ರಸ್ತುತ ರಾಜಕೀಯ ಪರಿಸ್ಥಿತಿಯ ಬಗ್ಗೆಯೂ ಚರ್ಚಿಸಲಾಯಿತು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್ ನೇತೃತ್ವದಲ್ಲಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಸಭೆ ನಡೆಯಿತು. ಐದು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿನ ಹಿನ್ನೆಲೆಯಲ್ಲಿ ಈ ಸಭೆ ನಡೆದಿದೆ.

ಪ್ರಮುಖ ಸುದ್ದಿ :-   ಕಾಂಗ್ರೆಸ್ಸಿಗೆ ರಾಜೀನಾಮೆ ನೀಡಿದ 35 ವರ್ಷಗಳಿಂದ ಪಕ್ಷದಲ್ಲಿದ್ದ ಪ್ರಿಯಾಂಕಾ ಗಾಂಧಿ ಆಪ್ತ ತಜೀಂದರ್ ಸಿಂಗ್ ಬಿಟ್ಟು...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement