ಇರಿತದ ಗಾಯಗಳೊಂದಿಗೆ ಒಂದೇ ಕುಟುಂಬದ 4 ಮಂದಿ ಶವವಾಗಿ ಪತ್ತೆ

ಅಹಮದಾಬಾದ್: ಗುಜರಾತಿನ ಅಹಮದಾಬಾದ್‌ನ ವಿರಾಟ್‌ನಗರದ ಮನೆಯೊಂದರಲ್ಲಿ ಮಂಗಳವಾರ ಸಂಜೆ ಒಂದೇ ಕುಟುಂಬದ ನಾಲ್ವರು ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ಮೃತರನ್ನು ಮಹಿಳೆ ಸೋನಾಲ್ ಮರಾಠಿ (37), ಅವರ ಮಕ್ಕಳಾದ ಪ್ರಗತಿ (15) ಮತ್ತು ಗಣೇಶ್ (17) ಮತ್ತು ಸೋನಾಲ್ ಅವರ ಅತ್ತೆ ಸುಭದ್ರಾ (75) ಎಂದು ಗುರುತಿಸಲಾಗಿದೆ.
ಇರಿತ ಮತ್ತು ಗಾಯಗಳನ್ನು ಹೊಂದಿರುವ ದೇಹಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಸೋನಾಲ್ ಅವರ ಪತಿ ವಿನೋದ್ ಮರಾಠಿ ಪ್ರಮುಖ ಶಂಕಿತ ಎಂದು ಅಪರಾಧ ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. ಈತ ಲೋಡಿಂಗ್ ರಿಕ್ಷಾ ಚಾಲಕನಾಗಿದ್ದು, ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ. ಕೊಲೆಯಾದ ಇಬ್ಬರು ಹದಿಹರೆಯದ ಮಕ್ಕಳು ತಮ್ಮ ಬೋರ್ಡ್ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಸಂತ್ರಸ್ತರನ್ನು ಮೊದಲು ವಿಷಪೂರಿತಗೊಳಿಸಿ, ಇರಿದು ನಂತರ ವಿವಿಧ ಕೋಣೆಗಳಿಗೆ ಎಳೆದುಕೊಂಡು ಹೋಗಿದ್ದಾರೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಪ್ರತಿ ಮೃತ ವ್ಯಕ್ತಿಗೆ 40 ರಿಂದ 50 ಬಾರಿ ಇರಿದಿರುವಂತೆ ತೋರುತ್ತದೆ. ಕುಟುಂಬವು ಇತ್ತೀಚೆಗೆ ನಿಕೋಲ್‌ನಿಂದ ಈ ಮನೆಗೆ ತೆರಳಿತ್ತು.
ವಲಯ -5ರ ಡಿಸಿಪಿ ಅಚಲ್ ತ್ಯಾಗಿ ಅವರು, ಸೋನಾಲ್ ಅವರ ತಾಯಿ ಅಂಬು ಮರಾಠಿ ಅವರು ಎರಡು ದಿನಗಳ ಹಿಂದೆ ಇವರು ಕಾಣೆಯಾದ ಬಗ್ಗೆ ದೂರನ್ನು ದಾಖಲಿಸಿದ್ದರು, ಏಕೆಂದರೆ ಅವರಿಗೆ ಮಗಳು ಮತ್ತು ಇತರ ಕುಟುಂಬ ಸದಸ್ಯರು ಸಂಪರ್ಕಿಸಲು ಸಾಧ್ಯವಾಗಲಿಲ್ಲ. ವಿರಾಟ್‌ನಗರದ ದಿವ್ಯಪ್ರಭಾ ಸೊಸೈಟಿಯಲ್ಲಿರುವ ಸೋನಾಲ್ ಮನೆಗೆ ಪೊಲೀಸರು ತೆರಳಿ ವಿಚಾರಿಸಿದಾಗ ಮನೆಗೆ ಬೀಗ ಹಾಕಿರುವುದು ಕಂಡು ಬಂದಿದೆ. ಪೊಲೀಸ್ ಅಧಿಕಾರಿಯೊಬ್ಬರು ಕಿಟಕಿ ತೆರೆದು ನೋಡಿದಾಗ ಅವರಿಗೆ ಮಾಂಸ ಕೊಳೆತ ದುರ್ವಾಸನೆ ಬಂತು. ಅವರು ಓಡವ್ ಪೊಲೀಸ್ ಠಾಣೆಯಿಂದ ತಂಡವನ್ನು ಕರೆದರು, ನಂತರ ಅವರು ಬಾಗಲು ಮುರಿದು ಮನೆಯೊಳಗೆ ಪ್ರವೇಶಿಸಿದರು ಮತ್ತು ಶವಗಳನ್ನು ವಿವಿಧ ಸ್ಥಳಗಳಲ್ಲಿ ಪತ್ತೆ ಮಾಡಿದರು.

ಪ್ರಮುಖ ಸುದ್ದಿ :-   ದೆಹಲಿ ವಕ್ಫ್ ಬೋರ್ಡ್ ಹಗರಣ : 9 ತಾಸುಗಳ ವಿಚಾರಣೆಯ ನಂತರ ಎಎಪಿ ನಾಯಕ ಅಮಾನತುಲ್ಲಾ ಖಾನ್ ಬಂಧಿಸಿದ ಇ.ಡಿ.

ವಿನೋದ್ ಆಗಾಗ್ಗೆ ಸೋನಾಲ್ ಜೊತೆ ಸಣ್ಣ ವಿಷಯಗಳಿಗೂ ಜಗಳವಾಡುತ್ತಿದ್ದರು. ಎರಡು ತಿಂಗಳ ಹಿಂದೆ, ವಿನೋದ್ ಸೋನಾಲ್‌ಗೆ ಚಾಕುವಿನಿಂದ ಇರಿದಿದ್ದನು, ಆದರೆ ಅವಳು ಅಪಘಾತದಲ್ಲಿ ಗಾಯಗೊಂಡಿದ್ದಾಳೆ ಎಂದು ವೈದ್ಯಕೀಯ ಪ್ರಕರಣದಲ್ಲಿ ಸುಳ್ಳು ಹೇಳಿದ್ದ. ಓಧವ್ ಪೊಲೀಸರು ಕೊಲೆ ದೂರು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಅಂಬು ಮರಾಠಿ ಅವರ ದೂರಿನ ಬಗ್ಗೆ ತಿಳಿದಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಒಂದು ಸ್ನಾನಗೃಹದಲ್ಲಿ ಮತ್ತು ಇನ್ನೊಂದು ಸ್ನಾನಗೃಹದ ಹೊರಗೆ ಶವಗಳು ಪತ್ತೆಯಾಗಿವೆ ಹಾಗೂ ಎರಡು ಮಲಗುವ ಕೋಣೆಗಳಲ್ಲಿ ಮತ್ತೆರಡು ಶವಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಶವಗಳು ಕೊಳೆತ ಸ್ಥಿತಿ ನೋಡಿದರೆ ಸುಮಾರು ನಾಲ್ಕು ದಿನಗಳ ಹಿಂದೆ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಾರೆ. “ಕೊಲೆಗಾರ ಇವರಿಗೆ ಮೊದಲು ವಿಷ ಹಾಕಿ, ಮೊಂಡಾದ ವಸ್ತುವಿನಿಂದ ಹೊಡೆದು ನಂತರ ಅವರನ್ನು ಇರಿದಿರಬಹುದು. ಕುಟುಂಬವು ಇತ್ತೀಚೆಗಷ್ಟೇ ನಿಕೋಲ್ ಪ್ರದೇಶದಿಂದ ವಿರಾಟ್‌ನಗರದಲ್ಲಿರುವ ಈ ಮನೆಗೆ ಸ್ಥಳಾಂತರಗೊಂಡಿತ್ತು” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement