ಕರ್ನಾಟಕದಲ್ಲಿ ಕಬ್ಬಿಣದ ಅದಿರು ರಫ್ತಿನ ಬಗ್ಗೆ ನಿಲುವು ಸ್ಪಷ್ಟಪಡಿಸಿ: ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ಸೂಚನೆ

ನವದೆಹಲಿ: ಕರ್ನಾಟಕದಲ್ಲಿ ಹೊರತೆಗೆಯಲಾದ ಕಬ್ಬಿಣದ ಅದಿರನ್ನು ರಫ್ತು ಮಾಡುವ ಬಗ್ಗೆ ನಿಲುವು ಸ್ಪಷ್ಟಪಡಿಸುವಂತೆ ಕೇಂದ್ರ ಮತ್ತು ಕರ್ನಾಟಕ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಸೂಚಿಸಿದೆ.
ಮುಖ್ಯ ನ್ಯಾಯಮೂರ್ತಿ ಎನ್ ವಿ ರಮಣ ನೇತೃತ್ವದ ಪೀಠವು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಈ ವಿಷಯದ ಬಗ್ಗೆ ಏಪ್ರಿಲ್ 8 ರೊಳಗೆ ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಸೂಚಿಸಿದೆ.
ಸುಪ್ರೀಂಕೋರ್ಟ್‌ ನೇಮಿಸಿದ ಕೇಂದ್ರೀಯ ಎಂಪವರ್ಡ್‌ ಸಮಿತಿ ಮತ್ತು ಮೇಲ್ವಿಚಾರಣಾ ಸಮಿತಿಯು ಲಭ್ಯವಿರುವ ಕಬ್ಬಿಣದ ಅದಿರಿನ ಅಂದಾಜು ಪ್ರಮಾಣವನ್ನು ಸೂಚಿಸುವ ಸ್ಥಿತಿಯ ವರದಿಯನ್ನು ಸಲ್ಲಿಸುವಂತೆ ಪೀಠವು ಸೂಚಿಸಿತು.

ತೆಗೆದ ಕಬ್ಬಿಣದ ಅದಿರನ್ನು ಹಾಗೆ ಇಡುವುದರಲ್ಲಿ ಯಾವುದೇ ಅರ್ಥವಿಲ್ಲ, ಅದನ್ನು ಬಳಸಬೇಕು, ಮಾರಾಟ ಮಾಡಬೇಕು ಅಥವಾ ಸ್ಥಳದಿಂದ ಸಾಗಿಸಬೇಕು, ಮೊದಲು ಇದ್ದ ಸ್ಥಳದಿಂದತೆರವುಗೊಳಿಸೋಣ ನಂತರ ಏನು ಮಾಡಬೇಕೆಂದು ನೋಡೋಣ. ಅದರಿಂದ ರಾಜ್ಯ ಸರ್ಕಾರ ಮತ್ತು ಅಭಿವೃದ್ಧಿ ನಿಧಿಗೆ ಸ್ವಲ್ಪ ಹಣ ಸಿಗಬಹುದು” ಎಂದು ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ಹೇಳಿದೆ.
ಕರ್ನಾಟಕ ಮೂಲದ ಗಣಿಗಾರರಿಂದ ಕಬ್ಬಿಣದ ಅದಿರು ಉಂಡೆಗಳ ರಫ್ತು ಮೇಲಿನ ನಿಷೇಧವನ್ನು ತೆಗೆದುಹಾಕಲು ಸುಪ್ರೀಂ ಕೋರ್ಟ್ ಈ ಹಿಂದೆ ನಿರಾಕರಿಸಿತ್ತು. ಖಾಸಗಿ ಗಣಿಗಾರರು ಕಬ್ಬಿಣದ ಅದಿರು ರಫ್ತಿನ ಮೇಲಿನ ನಿಷೇಧವನ್ನು ತೆಗೆದುಹಾಕಲು ಕೋರಿದರೆ, ಸುಪ್ರೀಂ ಕೋರ್ಟ್ ನೇಮಿಸಿದ ಕೇಂದ್ರೀಯ ಎಂಪವರ್ಡ್‌ ಸಮಿತಿ (CEC) ಕರ್ನಾಟಕದಿಂದ ಕಬ್ಬಿಣದ ಅದಿರು ಉಂಡೆಗಳನ್ನು ರಫ್ತು ಮಾಡಲು ಅನುಮತಿಸುವ ಯಾವುದೇ ಸಾಧ್ಯತೆಯನ್ನು ತಳ್ಳಿಹಾಕಿದೆ.
ರಾಜ್ಯದಲ್ಲಿ ಗಣಿಗಾರಿಕೆ ಚಟುವಟಿಕೆಗಳಲ್ಲಿ ವಿವಿಧ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ‘ಸಮಾಜ ಪರಿವರ್ತನಾ ಸಮುದಾಯ’ ಎಂಬ ಎನ್‌ಜಿಒ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯ ನಂತರ ಸುಪ್ರೀಂ ಕೋರ್ಟ್ 2009 ರಿಂದ ಆದೇಶಗಳನ್ನು ನೀಡುತ್ತಿದೆ.

ಪ್ರಮುಖ ಸುದ್ದಿ :-   ಕುಣಿಗಲ್ : ರಾಮನವಮಿ ಪಾನಕ ಸೇವಿಸಿದ 42 ಮಂದಿ ಅಸ್ವಸ್ಥ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement