ಹೈದರಾಬಾದ್: ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ರಾಯಲ್ ಎನ್ಫೀಲ್ಡ್ (Royal Enfield) ಬೈಕ್ಗೆ ಹಠಾತ್ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡ ಆಘಾತಕಾರಿ ಘಟನೆ ನಡೆದಿದ್ದು, ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಟ್ವಿಟ್ಟರ್ನಲ್ಲಿ ಹಂಚಿಕೊಳ್ಳಲಾದ ವೀಡಿಯೊದಲ್ಲಿ ದೇವಾಲಯದ ಹೊರಗೆ ಜನರ ಗುಂಪು ಜಮಾಯಿಸಿರುವುದನ್ನು ನೋಡಬಹುದು. ಹೊಸ ಬೈಕ್ ಅನ್ನು ದೇವಸ್ಥಾನದ ಹೊರಗೆ ನಿಲ್ಲಿಸಲಾಗಿತ್ತು. ಬೈಕ್ಗೆ ಬೆಂಕಿ ಹೊತ್ತಿಕೊಂಡಿದೆ, ನಂತರ ಬೈಕ್ ಎಲ್ಲರೂ ನೋಡುತ್ತಿರುವಂತೆ ಸ್ಫೋಟಗೊಂಡಿದೆ.
ಎನ್ಡಿಟಿವಿ ವರದಿ ಪ್ರಕಾರ, ಬೈಕ್ನ ಮಾಲೀಕ ರವಿಚಂದ್ರ ಹೊಸ ವಾಹನವನ್ನು ಖರೀದಿಸಿದ ನಂತರ ಗುಂತಕಲ್ ಮಂಡಲದ ನೆಟ್ಟಿಕಂಟಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಹೋಗಲು ಮೈಸೂರಿನಿಂದ ನಿರಂತರವಾಗಿ ಬೈಕ್ ಚಲಾಯಿಸಿದ್ದರು. ಅಲ್ಲಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಆಗ ಬೈಕ್ಗೆ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ಹೊತ್ತಿಕೊಂಡ ನಂತರ ದೊಡ್ಡ ಶಬ್ದದೊಂದಿಗೆ ಅದರ ಪೆಟ್ರೋಲ್ ಟ್ಯಾಂಕ್ ಸ್ಫೋಟಗೊಂಡಿದೆ. ಸ್ಫೋಟಕ್ಕೆ ಸೇರಿದ್ದ ಜನರು ಭಯಭೀತರಾಗಿ ಓಡಿದ್ದಾರೆ. ನಂತರ ಹಲವರು ಬೈಕ್ಗೆ ನೀರು ಹಾಕಿ ಬೆಂಕಿಯನ್ನು ಆರಿಸಿದ್ದಾರೆ. ಬೈಕ್ಗೆ ಬೆಂಕಿ ಹೊತ್ತಿಕೊಳ್ಳಲು ಕಾರಣ ಇನ್ನೂ ತಿಳಿದುಬಂದಿಲ್ಲ. ಅದೃಷ್ಟವಶಾತ್ ಜೀವಹಾನಿಯಾದ ವರದಿಯಾಗಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ