ಬೆಂಗಳೂರು: ಅಡುಗೆ ಅನಿಲ, ಎಣ್ಣೆ ಹಾಗೂ ಖಾದ್ಯ ತೈಲ ದರ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಹೋಟೆಲ್ ತಿಂಡಿ ತಿನಿಸುಗಳ ಬೆಲೆ ಹೆಚ್ಚಳ ಮಾಡುವುದಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ತಿಳಿಸಿದ್ದಾರೆ.
ಈ ಬಗ್ಗೆ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಕೋವಿಡ್ ಆರ್ಥಿಕ ಸಂಕಷ್ಟದಿಂದಾಗಿ ಹೋಟೆಲ್ಗೆ ಬರುವ ಗ್ರಾಹಕರ ಸಂಖ್ಯೆ ಕಡಿಮೆಯಾಗುವ ಆತಂಕದಿಂದ ತಿಂಡಿ-ತಿನಿಸು ದರ ಏರಿಕೆ ಮಾಡಿರಲಿಲ್ಲ.ಸದ್ಯ ಅಡುಗೆ ಎಣ್ಣೆ ಲೀಟರ್ಗೆ 200 ರೂ.ಗಳು, ಅಡುಗೆ ಅನಿಲ ಬೆಲೆ ಸಿಲಿಂಡರ್ಗೆ 50 ರೂಪಾಯಿ ಹೆಚ್ಚಾಗಿದೆ. ಪೆಟ್ರೋಲ್, ಡೀಸೆಲ್ ದರವೂ ಹೆಚ್ಚಾಗಿದೆ. ಹೀಗಾಗಿ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಾಗಲಿವೆ. ಈ ಕಾರಣಗಳಿಂದ ಹೊಟೇಲ್ ತಿಂಡಿ-ತಿನಿಸುಗಳ ಬೆಲೆ ಶೇ.10 ರಷ್ಟು ಹೆಚ್ಚಳ ಮಾಡಲಾಗುತ್ತಿದೆ ಎಂದು ಪಿ.ಸಿ ರಾವ್ ತಿಳಿಸಿದ್ದಾರೆ
ಬೆಂಗಳೂರಿನಲ್ಲಿ ಹೋಟೆಲ್, ದರ್ಶಿನಿ, ರೆಸ್ಟೊರೆಂಟ್ಗಳಲ್ಲಿ ಶೇ.10ರಷ್ಟು ದರ ಏರಿಕೆ ಮಾಡುವುದಾಗಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಗ್ರಾಹಕರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಶೇಕಡ 10ರಷ್ಟು ಆಹಾರ ಪದಾರ್ಥಗಳ ಬೆಲೆ ಜಾಸ್ತಿ ಮಾಡಬೇಕೆಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಸಭೆ ನಡೆಸಿದ ನಂತರ ಬೆಲೆ ಏರಿಕೆ ನಿರ್ಧಾರ
ಹೋಟೆಲ್ ತಿಂಡಿ-ತಿನಿಸುಗಳ ಬೆಲೆ ಏರಿಕೆ ಕುರಿತು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ನೇತೃತ್ವದಲ್ಲಿ ಖಾಸಗಿ ಹೊಟೇಲ್ನಲ್ಲಿ ಸಭೆ ನಡೆಯಿತು. ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ.
ಗ್ಯಾಸ್, ಅಡುಗೆ ಎಣ್ಣೆ ನಿರಂತರವಾಗಿ ಏರಿಕೆಯಾಗುತ್ತಿದೆ. ತಿಂಡಿ ಐದು ರೂ. ಕಾಫಿ, ಟೀ ಎರಡು ರೂ.ಗಳಷ್ಟು ಹೆಚ್ಚಳ ಆಗಲಿದೆ. ವಿದ್ಯುತ್ ದರ ಏರಿಕೆಯೂ ಆಗಿರುವುದರಿಂದ ದರ ಏರಿಕೆ ಅನಿವಾರ್ಯ. ಸದ್ಯ ಬೆಂಗಳೂರು ನಗರದಲ್ಲಿ ದರ ಏರಿಕೆ ಮಾಡಲು ನಿರ್ಧಾರ ಮಾಡಲಾಗಿದೆ ಎಂದರು.
ಇನ್ನೊಂದು ವಾರದಲ್ಲಿ ಹೋಟೆಲ್ನಲ್ಲಿ ಬೆಲೆ ಏರಿಕೆ ಮಾಡಲಾಗುವುದು. ಇನ್ನೊಂದು ವಾರದಲ್ಲಿ ಆಯಾ ಹೋಟೆಲ್ನವರು ದರ ಏರಿಕೆ ಮಾಡಲಿದ್ದಾ. ಗ್ರಾಹಕರನ್ನು ಗಮನದಲ್ಲಿ ಇರಿಸಿಕೊಂಡೆ ಬೆಲೆ ಏರಿಕೆ ಮಾಡಿದ್ದೇವೆ. ಯಾವ್ಯಾವ ತಿನಿಸು ಎಷ್ಟೆಷ್ಟು ಏರಿಕೆ ಮಾಡಬೇಕು ಎಂಬ ಬಗ್ಗೆ ಆಯಾ ಹೋಟೆಲ್ಗಳ ಮಾಲೀಕರ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ