ತಿರುವನಂತಪುರಂ: ಪಾಲಕ್ಕಾಡ್: ಕೇರಳವನ್ನು ಬೆಚ್ಚಿಬೀಳಿಸಿದ ಮತ್ತೊಂದು ರಾಜಕೀಯ ಕೊಲೆ ಪಾಲಕ್ಕಾಡ್ನ ಎಳಪ್ಪುಳ್ಳಿ ಎಂಬಲ್ಲಿ ನಡೆದಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ (ಪಿಎಫ್ಐ) ಸಂಘಟನೆಯ ಸ್ಥಳೀಯ ನೇತಾರನನ್ನು ಅವರ ತಂದೆಯ ಎದುರೇ ಕೊಲೆ ಮಾಡಲಾಗಿದೆ.
ಶುಕ್ರವಾರ ಮಧ್ಯಾಹ್ನ ಎಳಪುಳ್ಳಿ ಎಂಬಲ್ಲಿ ಸುಬೈರ್ (43) ಎಂಬಾತನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳೀಯರು ಆತನನ್ನು ಆಸ್ಪತ್ರೆಗೆ ಕರೆದೊಯ್ದರೂ ರಕ್ಷಿಸಲಾಗಲಿಲ್ಲ.
ಪಿಎಫ್ಐನ ಪ್ಯಾರಾ ಏರಿಯಾ ಸಮಿತಿಯ ಅಧ್ಯಕ್ಷ ಸುಬೈರ್ ತನ್ನ ತಂದೆಯೊಂದಿಗೆ ಬೈಕ್ನಲ್ಲಿ ಹೋಗುತ್ತಿದ್ದಾಗ ಬೈಕ್ಗೆ ಕಾರು ಢಿಕ್ಕಿ ಹೊಡೆಸಿ ಬೀಳಿಸಿದ ನಂತರ ಇರಿದು ಕೊಲೆ ಮಾಡಲಾಗಿದೆ. ಸಮೀಪದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ಕೊಲೆಯ ಹಿಂದೆ ಆರ್ಎಸ್ಎಸ್ ಕೈವಾಡವಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪಾಲಕ್ಕಾಡ್ ಎಸ್ಪಿ ಆರ್ ವಿಶ್ವನಾಥ್ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದಾರೆ. ದುಷ್ಕರ್ಮಿಗಳು ಸುಬೈರ್ ಅವರ ಬೈಕನ್ನು ಡಿಕ್ಕಿ ಹೊಡೆಯಲು ಬಳಸಿದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆ ನಡೆದ ತಕ್ಷಣ ಆರೋಪಿಗಳು ಮತ್ತೊಂದು ಕಾರಿನಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಸಂಜಿತ್ ಕೊಲೆಗೆ ಪ್ರತೀಕಾರ?
ಈ ಹಿಂದೆ 27 ವರ್ಷದ ಆರ್ಎಸ್ಎಸ್ ಕಾರ್ಯಕರ್ತ ಎಸ್ ಸಂಜಿತ್ ಅವರನ್ನು ಇದೇ ಪ್ರದೇಶದಲ್ಲಿ ಪಿಎಫ್ಐನ ರಾಜಕೀಯ ಶಾಖೆಯಾದ ಎಸ್ಡಿಪಿಐ ಕಾರ್ಯಕರ್ತರು ಕೊಲೆಗೈದಿದ್ದರು. ಈಗಾಗಲೇ ಆರೋಪಿಗಳನ್ನು ಬಂಧಿಸಿದ್ದಾರೆ. 2021ರ ನವೆಂಬರ್ನಲ್ಲಿ ಪತ್ನಿಯ ಎದುರೇ ಸಂಜಿತ್ ಅವರನ್ನು ಕೊಲೆ ಮಾಡಲಾಗಿತ್ತು.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ ಈ ಘಟನೆಯಲ್ಲಿ ಬಿಟ್ಟುಹೋದ ಕಾರು ಈ ಹಿಂದೆ ಹತ್ಯೆಯಾದ ಸಂಜಿತ್ ಹೆಸರಿನಲ್ಲಿ ನೋಂದಾಯಿಸಲಾಗಿದೆ. ಹೀಗಾಗಿ ಇದೊಂದು ರಾಜಕೀಯ ಹತ್ಯೆ ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಬೈರ್ ಹತ್ಯೆಯ ಹಿಂದೆ ಆರ್ಎಸ್ಎಸ್ ಕೈವಾಡವಿದೆ ಎಂದು ಪಿಎಫ್ಐ ಆರೋಪಿಸಿದೆ. ಬಿಜೆಪಿ ಆರೋಪಗಳನ್ನು ತಳ್ಳಿಹಾಕಿದೆ. ಸುಬೈರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ.
ಪಿಎಫ್ಐ ಕಾರ್ಯಕರ್ತ ಸುಬೈರ್ ಮತ್ತು ಆರ್ಎಸ್ಎಸ್ ಕಾರ್ಯಕರ್ತ ಸಂಜಿತ್ ಹತ್ಯೆಯಲ್ಲಿ ಸಾಮ್ಯತೆ ಇದೆ. ಸುಬೈರ್ ಅವರ ತಂದೆಯ ಸಮ್ಮುಖದಲ್ಲಿ ಹಲ್ಲೆ ನಡೆದರೆ, ಸಂಜಿತ್ ಅವರ ಪತ್ನಿಯ ಸಮ್ಮುಖದಲ್ಲಿಯೇ ಹಲ್ಲೆ ಮಾಡಿ ಕೊಲ್ಲಲಾಗಿತ್ತು. ಎರಡೂ ಸಂದರ್ಭಗಳಲ್ಲಿ, ಬಲಿಪಶುಗಳು ಮೋಟಾರು ಸೈಕಲ್ಗಳನ್ನು ಓಡಿಸುತ್ತಿದ್ದರು, ಅವುಗಳಿಗೆ ಕಾರುಗಳು ಡಿಕ್ಕಿ ಹೊಡೆದವು.
ಕಳೆದ ವರ್ಷ ಡಿಸೆಂಬರ್ನಲ್ಲಿ ಆಲಪ್ಪುಳದಲ್ಲಿ ಎಸ್ಡಿಪಿಐ ರಾಜ್ಯ ನಾಯಕ ಕೆಎಸ್ ಶಾನ್ ಹತ್ಯೆಯಾದ ನಂತರ ಅದೇ ಜಿಲ್ಲೆಯಲ್ಲಿ ಬಿಜೆಪಿ ರಾಜ್ಯ ನಾಯಕ ರಂಜಿತ್ ಶ್ರೀನಿವಾಸನ್ 12 ಗಂಟೆಗಳ ಅವಧಿಯಲ್ಲಿ ಪ್ರತೀಕಾರದ ಕೊಲೆಯಲ್ಲಿ ಕೊಲ್ಲಲ್ಪಟ್ಟರು. ರಾಜ್ಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ